Dharmastala: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ
ದೇವರ ಪೂಜೆ, ಅಭಿಷೇಕದಿಂದ ಪಾಪಗಳ ಕ್ಷಯವಾಗಿ, ಪುಣ್ಯ ಸಂಚಯವಾಗುತ್ತದೆ
ಉಜಿರೆ: ದೇವರ ಪೂಜೆ, ಆರಾಧನೆ, ಅಭಿಷೇಕದಿಂದ ಪಾಪಗಳ ಕ್ಷಯವಾಗಿ ಪುಣ್ಯ ಸಂಚಯವಾಗುತ್ತದೆ ಎಂದು ಶ್ರೀ ದಿವ್ಯಸಾಗರ ಮುನಿಮಹಾರಾಜರು ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕದ ಸಂದರ್ಭ ಮಂಗಲ ಪ್ರವಚನ ನೀಡಿದರು.
ಶ್ರದ್ಧಾ-ಭಕ್ತಿಯಿಂದ ದೇವರಪೂಜೆ, ಅಭಿಷೇಕ ಮಾಡುವುದರಿಂದ ಎಲ್ಲಾ ಸಂಕಟಗಳ ನಿವಾರಣೆಯಾಗಿ ಜೀವನ ಪಾವನವಾಗುತ್ತದೆ. ಆತ್ಮಕಲ್ಯಾಣವಾಗುತ್ತದೆ. ಸುಖ-ಶಾಂತಿ ಸಿಗುತ್ತದೆ ಎಂದು ಹೇಳಿದರು.
ಶ್ರೀ ಆದಿಸಾಗರ ಮುನಿಮಹಾರಾಜರು ಪ್ರವಚನ ನೀಡಿ ನಾವು ಬೀಜ ಬಿತ್ತಿದಂತೆ ಫಲಸಿಗುವ ಹಾಗೆ ಸ್ವಾರ್ಥ ರಹಿತರಾಗಿ ಸತ್ಕಾರ್ಯ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ನಿತ್ಯವೂ ವೃತ-ನಿಯಮಗಳ ಪಾಲನೆಯೊಂದಿಗೆ ದೇವರ ಪೂಜೆ, ಮುನಿಗಳಿಗೆ ಆಹಾರದಾನ ಮಾಡಿದರೆ ಆತ್ಮಕಲ್ಯಾಣವಾಗುತ್ತದೆ ಎಂದು ಹೇಳಿದರು.
ಕಾರ್ಕಳದ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ನಿರ್ದೋಷಸಾಗರ ಮುನಿಮಹಾರಾಜರು ಮತ್ತು ಕ್ಷುಲ್ಲಕ ನಿರ್ವಾಣಸಾಗರ ಮಹಾರಾಜರು ಉಪಸ್ಥಿತರಿದ್ದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಪಾದಾಭಿಷೇಕದಲ್ಲಿ ಭಾಗವಹಿಸಿದರು.
ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ರತ್ನಗಿರಿಯಲ್ಲಿ ೨೧೬ ಕಲಶಗಳಿಂದ ಜಲಾಭಿಷೇಕ ಹಾಗೂ ಎಳನೀರು, ಗಂಧ, ಚಂದನ, ಅಷ್ಟಗಂಧ ಮೊದಲಾದ ಮಂಗಳದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು.
