Kundapura: ಕುಂದಾಪುರ ಶ್ರೀ ಬಗಳಾಂಬ ತಾಯಿ ದೇವಳದ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಂಪನ್ನ
ಕುಂದಾಪುರ: ಇಲ್ಲಿನ ಚಿಕ್ಕನ್ಸಾಲ್ ರಸ್ತೆಯಲ್ಲಿರುವ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ನಡೆದ ಪುನರ್ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆಯ ಕಾರ್ಯಕ್ರಮವು ಫೆ.20 ರಿಂದ ಫೆ.23ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಗುರು ಪರಾಶಕ್ತಿ ಮಠ-ಮರಕಡದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಗಳ ಆಶೀರ್ವಾದದೊಂದಿಗೆ, ಕೋಟ ಕೆ. ಚಂದ್ರಶೇಖರ್ ಸೋಮಯಾಜಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಫೆ.20 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಗಣಯಾಗ, ಗುರು ಸನ್ನಿಧಿಯಲ್ಲಿ ನವಕ ಪ್ರಧಾನ ಕಲಾವೃದ್ಧಿ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಾಯಂಕಾಲ ಶ್ರೀ ಬಗಳಾಂಬಾ ತಾಯಿಯ ಕಲಾಸಂಕೋಚ ನಡೆಯಿತು.
ಫೆ.21 ರಂದು ಬೆಳಿಗ್ಗೆ ಬಿಂಬ ಶುದ್ದಿ, ಜಲಾಧಿವಾಸ, ಸಪರಿವಾರ ದೇವರಾದ ಶ್ರೀ ಕಾಲಭೈರವೇಶ್ವರ, ಶ್ರೀ ಆಂಜನೇಯ ಮತ್ತು ಶ್ರೀ ನಾಗ ದೇವರಿಗೆ ಕಲಶಾಭಿಷೇಕ, ಸತ್ಯನಾರಾಯಣ ಪೂಜೆ, ಸಂಜೆ ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ, ಶಯ್ಯಾ ಕಲ್ಪನೆ, ಪ್ರತಿಷ್ಠಾಧಿವಾಸ ಹೋಮಗಳು ನಡೆಯಿತು. ರಾತ್ರಿ 8ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಮೇಜಿಂಗ್ ಸ್ಟೆಪರ್ಸ್ ಕಂಚುಗೋಡು-ತ್ರಾಸಿ ಅವರಿಂದ ಭಕ್ತಿ-ಭಾವ-ನಾಟ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಫೆ.22 ರಂದು ಬೆಳಿಗ್ಗೆ 5.20ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ರತ್ನನ್ಯಾಸಪೂರ್ವಕ ‘ಶ್ರೀ ಬಗಳಾಂಬ ತಾಯಿಯ ಪುನರ್ ಪ್ರತಿಷ್ಠೆ’, ಜೀವ ಕುಂಭಾಭಿಷೇಕ, ಪ್ರಾಣ ಪ್ರತಿಷ್ಠೆ, ಕಲಾಭಿವೃದ್ಧಿ ಹೋಮ, ಪ್ರಾಯಶ್ಚಿತ್ತ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ‘ಅನ್ನ ಸಂತರ್ಪಣೆ’ ಕಾರ್ಯಕ್ರಮ ನಡೆಯಿತು. ಸಂಜೆ ಶಾಂತಿಹೋಮ, ನವೋತ್ತರ ದ್ರವ್ಯಕಲಶಪೂರಿತ ಬ್ರಹ್ಮಕಲಶ ಸ್ಥಾಪನೆ, ಪ್ರದಾನಾಧಿವಾಸ ಹೋಮ, ರಾತ್ರಿ 8 ಗಂಟೆಗೆ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಚಕ್ರ-ಚಂಡಿಕೆ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
ಫೆ.23 ರಂದು ಬೆಳಿಗ್ಗೆ ೮ಕ್ಕೆ ಪುಣ್ಯಾಹ, ಚಂಡಿಕಾಯಾಗ, ‘ಬ್ರಹ್ಮಕಲಶಾಭಿಷೇಕ’, ‘ಪಲ್ಲಪೂಜೆ’, ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಬಳಿಕ 1 ಗಂಟೆಗೆ ಸೇವಾ ಕರ್ತರಿಂದ ಸಾರ್ವಜನಿಕ ‘ಮಹಾ ಅನ್ನಸಂತರ್ಪಣೆ’ ಕಾರ್ಯಕ್ರಮ ನಡೆಯಿತು. ಸಂಜೆ 6 ಗಂಟೆಗೆ ಶ್ರೀ ಮಾಸ್ತಿಯಮ್ಮ ಭಜನಾ ಮಂಡಳಿ-ಮದ್ದುಗುಡ್ಡೆ ಅವರಿಂದ ಭಜನಾ ಕಾರ್ಯಕ್ರಮ. ರಾತ್ರಿ 7 ಗಂಟೆಗೆ ಹೂವಿನ ಪೂಜೆ, ವಿಶೇಷ ರಂಗಪೂಜೆ, 8 ಗಂಟೆಗೆ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮ ನಡೆಯಿತು.
ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಸಂಗೀತ ನಿರ್ದೇಶಕ ರವಿ ಬಸ್ರೂರು, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್, ಬಸ್ರೂರು ವಿ.ಎಸ್.ಎಸ್.ನ್ ಉಪಾಧ್ಯಕ್ಷ ಕೆ. ವಿಕಾಸ್ ಹೆಗ್ಡೆ, ನಾಗರಾಜ್ ಕಾಮಧೇನು ಕೋಟೇಶ್ವರ, ಪ್ರಕಾಶ್ ಭಟ್ ಉಪ್ಪುಂದ, ಶ್ರೀ ಬಗಳಾಂಬ ತಾಯಿ ದೇವಳದ ಧರ್ಮದರ್ಶಿಗಳಾದ ಗಣಪತಿ ಸುವರ್ಣ ಮತ್ತು ಜಲಜ ಸುವರ್ಣ ಹಾಗೂ ಮಕ್ಕಳು, ಉತ್ಸವ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಹೇರಿಕುದ್ರು, ಅಧ್ಯಕ್ಷ ಪ್ರಕಾಶ್ ಕೆ.ಬಿ. ಕಾರ್ಯದರ್ಶಿ ಚಂದ್ರಶೇಖರ್ ಕುಂದಾಪುರ, ಸೇವಾಕರ್ತರಾದ ಶಕುಂತಲಾ ದಾಮೋದರ್-ಮುಂಬೈ, ನಂದಿನಿ ವೈಭವ್ ನಾಯಕವಾಡಿ-ಕೊಲ್ಲಾಪುರ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.






