Mangalore: ದಯಾನಂದ ಪೈ ಕಾಲೇಜಿಗೆ ಸಂವಿಧಾನ ಜಾಗೃತಿ ರಥಯಾತ್ರೆ
Thursday, February 29, 2024
ಮಂಗಳೂರು: ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಂವಿಧಾನ ಜಾಗೃತಿ ಜಾಥಾವು ಫೆ.29 ರಂದು ಡಾ. ಪಿ. ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸಿತು.
ಈ ಸಂದರ್ಭದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ನವೀನ್ ಕೊಣಾಜೆ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಸಂವಿಧಾನ ಜಾಥಾದ ಉಸ್ತುವಾರಿ ಗಿರೀಶ್ ನಾವಡ ಅವರು ಮಾತನಾಡಿ, ಮೊದಲಿನ ದಿನಗಳಲ್ಲಿ ಬೇರೆಯವರು ನಮ್ಮನ್ನು ಆಳುತ್ತಿದ್ದರು. ಆದರೆ ಸ್ವಾತಂತ್ರ್ಯದ ನಂತರ ಬಂದಂತಹ ಸಂವಿಧಾನದಿಂದಾಗಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳು ಪ್ರಭುಗಳಾಗಬೇಕು. ಈ ನಿಟ್ಟಿನಲ್ಲಿ ತಮ್ಮ ಹಕ್ಕನ್ನು ಚಲಾಯಿಸುವ ಸಂದರ್ಭದಲ್ಲಿ ಇನ್ನೊಬ್ಬರ ಹಕ್ಕಿಗೆ ಧಕ್ಕೆಯಾಗದ ರೀತಿಯಲ್ಲಿ ಹಕ್ಕನ್ನು ಚಲಾಯಿಸುವ ಶಕ್ತಿಯನ್ನು ನೀಡಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ. ಇದು ಸುದೀರ್ಘವಾಗಿ ರಾಷ್ಟ್ರವನ್ನು ಸುಭಿಕ್ಷೆಗೊಳಿಸಬೇಕು ಎಂಬುವುದನ್ನು ನಮಗೆ ತಿಳಿಸಿಕೊಟ್ಟಿದೆ ಎಂದು ಹೇಳಿದರು.
ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ನಾಗಪ್ಪ ಗೌಡ, ರಸಾಯನಶಾಸ್ತ್ರದ ಸಹ ಪ್ರಾಧ್ಯಾಪಕ ಡಾ. ಸುಧಾಕರನ್, ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಜೆಫ್ರಿ ರೋಡ್ರಿಗಸ್, ಗ್ರಂಥಪಾಲಕಿ ಉಮಾ ಎ.ಬಿ., ಸಮಾಜಕಾರ್ಯ ವಿಭಾಗದ ಡಾ. ನಿತಿನ್ ಚೋಳ್ವೇಕರ್, ಕಛೇರಿ ಅಧೀಕ್ಷಕ ರಮೇಶ್, ಕಾಲೇಜಿನ ಪ್ರಾಧ್ಯಾಪಕರುಗಳು, ಉಪನ್ಯಾಸಕರುಗಳು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




























