Mangalore: ಸದೃಢ ಆಡಳಿತಕ್ಕೆ ಸಂವಿಧಾನವೇ ಬುನಾದಿ: ಪ್ರೊ. ಲತಾ ಎ. ಪಂಡಿತ್
ಮಂಗಳೂರು: ಯಾವುದೇ ದೇಶದಲ್ಲಿ ಸಂವಿಧಾನ ಇಲ್ಲದೇ ಆಡಳಿತ ನಡೆಸುವುದು ಅರಾಜಕತೆಯನ್ನು ಸೃಷ್ಟಿಮಾಡುತ್ತದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ರಾಜ್ಯಶಾಸ್ತ್ರವಿಭಾಗದ ಮುಖ್ಯಸ್ಥೆ ಪ್ರೊ. ಲತಾ ಎ. ಪಂಡಿತ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ದೇಶ ಸಂವಿಧಾನದ ಚೌಕಟ್ಟಿನ ಒಳಗೇ ಆಡಳಿತ ನಡೆಸಬೇಕು. ಒಂದು ದೇಶದಲ್ಲಿ ಆಡಳಿತ ಸದೃಢವಾಗಿರಬೇಕಿದ್ದರೆ ಸಂವಿಧಾನವೇ ಅಡಿಪಾಯ ಎಂದರು.
ನಮ್ಮ ದೇಶದಲ್ಲಿ ಸಂವಿಧಾನ ರಚನೆ ಮಾಡಲು ಸಾಕಷ್ಟು ಚಿಂತನೆ, ಆಲೋಚನೆ ಹಾಗೂ ವಿಚಾರ ಮಂಥನಗಳ ನಂತರ ಉತ್ತಮವಾದ ಸಂವಿಧಾನವನ್ನು 75 ವರ್ಷಗಳ ಹಿಂದೆಯೇ ರಚನೆ ಮಾಡಲಾಗಿದೆ. ಸಂವಿಧಾನವನ್ನು ಅರ್ಥಮಾಡಿಕೊಳ್ಳಲು ಅದರ ಪ್ರಸ್ತಾವನೆಯೇ ಸಾಕಾಗುತ್ತದೆ. ಅದರ ಪ್ರಕಾರ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಕೆಲಸಮಾಡಬೇಕಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ರಾಜ್ಯ ಸರ್ಕಾರದ ವತಿಯಿಂದ ಜ. 26ರಿಂದ ಫೆ. 26ರವರೆಗೆ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ರಾಜ್ಯದ ಉದ್ದಗಲಕೂ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಂವಿಧಾನದಲ್ಲಿ ಕೇವಲ ಹಕ್ಕುಗಳನ್ನು ಮಾತ್ರವಲ್ಲದೇ ಕರ್ತವ್ಯಗಳ ಬಗ್ಗೆಯೂ ಹೇಳಲಾಗಿದೆ. ದೇಶದ ಎಲ್ಲಾನಾಗರಿಕರು ಸಮಾನರು ಎಂಬುದನ್ನು ಅರಿತು, ಸಂವಿಧಾನವನ್ನು ಗೌರವಿಸುವ ಕೆಲಸ ಮಾಡಬೇಕಿದೆ ಎಂದರು.
ಪ್ರೊ. ಕುಮಾರ ಸುಬ್ರಹ್ಮಣ್ಯ ಭಟ್, ರಾಜ್ಯಶಾಸ್ತ್ರ ವಿಭಾಗದ ಪ್ರೊ. ಶಾನಿಕೆ. ಆರ್., ಡಾ. ರುಕ್ಮಯ ಸೇರಿದಂತೆ ಕಾಲೇಜಿ ವಿವಿಧ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಚಿಂತನ-ಮಂಥನ ತಂಡದ ವತಿಯಿಂದ ಕಿರು ನಾಟಕ ಪ್ರದರ್ಶನ ನಡೆಸಲಾಯಿತು.