Kundapura: ತಂದೆಯ ತಿಥಿಯಂದೇ ಮಗನ ದುರಂತ ಅಂತ್ಯ
ಕುಂದಾಪುರ: ಮರಳು ಹಾಕಲು ಬಂದ ಟಿಪ್ಪರ್ ಮನೆಯ ಅಂಗಳದಲ್ಲಿ ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಅಲ್ಲಿಯೇ ನಿಂತಿದ್ದ ಮನೆ ಮಗನೇ ಚಕ್ರದಡಿಗೆ ಸಿಲುಕಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಕಾಳಾವರದಲ್ಲಿ ನಡೆದಿದೆ. ರಾಘವೇಂದ್ರ ಆಚಾರ್ಯ (42) ಎಂಬವರೇ ಹೀಗೆ ಮೃತಪಟ್ಟವರು. ಅಂದೇ ಅವರ ತಂದೆಯ ತಿಥಿ ಆಗಿರುವುದೂ ಒಂದು ವಿಪರ್ಯಾಸ.
ರಾಘವೇಂದ್ರ ಆಚಾರ್ಯ ಕೋಟದಲ್ಲಿ ಗ್ಲಾಸ್ ಅಂಡ್ ಪ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮರದ ಕೆಲಸ, ಕಬ್ಬಿಣ ಕೆಲಸ ಹಾಗೂ ಇಂಜಿನ್ ರಿಪೇರಿ ಮೋಟಾರ್ ರಿಪೇರಿ ಮಾಡುತ್ತಿದ್ದರು. ರಾಮಕೃಷ್ಣ ಆಚಾರ್ಯ ಎಂಬವರ ಏಕೈಕ ಪುತ್ರ ಇವರು.
ತನ್ನ ತಂದೆಯ ತಿಥಿ ಕಾರ್ಯ ಮುಗಿಸಿದ ಬಳಿಕ ಮನೆಯ ಕೆಲಸಕ್ಕೆಂದು ಒಂದು ಲೋಡ್ ಮರಳು ತರಿಸಿದ್ದರು.ಈ ಸಂದರ್ಭ ಮರಳು ತುಂಬಿದ ಟಿಪ್ಪರ್ ರಿವರ್ಸ್ ಬರುತ್ತಿದ್ದ ವೇಳೆ ಮನೆಯ ಗೇಟಿನ ಪಕ್ಕದಲ್ಲಿ ನಿಂತಿದ್ದ ರಾಘವೇಂದ್ರ ಆಚಾರ್ಯ ಅವರಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು ಗೇಟಿನ ಪಿಲ್ಲರ್ ಮತ್ತು ಟಿಪ್ಪರ್ನ ಹಿಂದುಗಡೆಯ ಕಾಂಪೌಂಡ್ ನಡುವೆ ಸಿಕ್ಕಿ ತಲೆ ಒಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ರಾಘವೇಂದ್ರ ಅವರ ಸಾವಿನಿಂದಾಗಿ ಮನೆ ಈಗ ಶೋಕದಲ್ಲಿ ಮುಳುಗಿದೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಗ್ಲಾಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಆಚಾರ್ಯ ಹಿಂದುಸ್ತಾನಿ ಸಂಗೀತ ಅಭ್ಯಾಸ ಮಾಡುತ್ತಿದ್ದರು. ಅತ್ಯಂತ ಸರಳ ವ್ಯಕ್ತಿತ್ವದವರಾಗಿದ್ದರು.
ಕುಂದಾಪುರ ಗ್ರಾಮಾಂತರ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.