
Mangalore: ಜೂ.3ರಂದು ದ.ಕ.ದಲ್ಲಿ ಪದವೀಧರ ಕ್ಷೇತ್ರ ಮತದಾನ: ಜಿಲ್ಲಾಧಿಕಾರಿ
ಮಂಗಳೂರು: ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.3ರಂದು ನಡೆಯಲಿದೆ. ಮತದಾನ ಬೆಳಗ್ಗೆ 8ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಜೂ.6ರಂದು ಮತಗಳ ಎಣಿಕೆ ಮೈಸೂರಿನಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದಲ್ಲಿ 24 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 16 ಕಡೆಗಳಲ್ಲಿ ಮತದಾನ ಕೇಂದ್ರ ತೆರೆಯಲಾಗಿದೆ. ಪದವೀಧರ ಕ್ಷೇತ್ರದಲ್ಲಿ 19,971 ಮಂದಿ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 8,189 ಮಂದಿ ಮತದಾರರಿದ್ದಾರೆ. ಈ ಚುನಾವಣೆಗೆ ಸಂಬಂಧಿಸಿ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇದು ಬ್ಯಾಲೆಟ್ ಪೇಪರ್ನಲ್ಲಿ ನಡೆಯುವ
ಚುನಾವಣೆಯಾಗಿದೆ. ಇಲ್ಲಿ ಆದ್ಯತೆ ಮೇರೆಗೆ ಮತ ಚಲಾಯಿಸಬೇಕಿದ್ದು, ಪ್ರಥಮ ಪ್ರಾಶಸ್ತ್ಯ ಮತಕ್ಕೆ 1, ಎರಡನೇ ಪ್ರಾಶಸ್ತ್ಯದ ಮತಕ್ಕೆ ಅಭ್ಯರ್ಥಿ ಎದುರು 2 ಎಂದು ನಮೂದಿಸಬೇಕು. ಇಲ್ಲದಿದ್ದರೆ ಅಂತಹ ಮತಗಳು ಅಸಿಂಧುಗೊಳ್ಳುತ್ತವೆ. ಈ ಚುನಾವಣೆಯಲ್ಲಿ ಮತದಾರರ ಬಲಗೈ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಮತದಾನಕ್ಕೆ ಆಗಮಿಸುವಾಗ ಮತದಾರ ನೋಂದಣಿಯ ಸ್ಲಿಪ್ ಹಾಗೂ ವೋಟರ್ ಐಡಿ ತರಬೇಕು ಎಂದರು.