
Mangalore: ಅಟಲ್ ಪೆನ್ಶನ್ ಯೋಜನೆಯ ಅನುಷ್ಠಾನ-ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ಮತ್ತೆ ರಾಷ್ಟ್ರೀಯ ಪುರಸ್ಕಾರ
ಮಂಗಳೂರು: ಪ್ರಮುಖ ಗ್ರಾಮೀಣ ಬ್ಯಾಂಕಾಗಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು, ಅಟಲ್ ಪಿಂಚಣಿ ಯೋಜನೆಯ (ಏಪಿವೈ) ಅನುಷ್ಠಾನಕ್ಕೆ ಸಂಬಂಧಿಸಿ 2023-24 ರ ಅವಧಿಯಲ್ಲಿ ಮಾಡಿದ ಉತ್ತಮ ಸಾಧನೆಗೆ ಸಂಬಂಧಿಸಿ ಮತ್ತೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಶುಕ್ರವಾರದಂದು ನವದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಮ್. ಭಂಡಿವಾಡ, ಕೇಂದ್ರ ಸರ್ಕಾರದ ಹಣಕಾಸು ವಿಭಾಗದ ಕಾರ್ಯದರ್ಶಿ ಡಾ. ವಿವೇಕ ಜೋಶಿ ಅವರಿಂದ ಅವರಿಂದ ಪ್ರಶಸ್ತಿ ಫಲಕ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ ವಿಶಾಲ ವರ್ಗಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಹಣಕಾಸು ಸೇವೆಗಳನ್ನು ತಲುಪಿಸಲು ಬ್ಯಾಂಕು ಪರಮಾದ್ಯತೆ ನೀಡಿದೆ. ಅಟಲ್ ಪೆನ್ಶನ್ ಯೋಜನೆ ಅಸಂಘಟಿತ ಕಾರ್ಮಿಕ ವರ್ಗಕ್ಕೆ ವರದಾನವಾಗಿದ್ದು ನಿರ್ಧಿಷ್ಟಪಡಿಸಿದ ಕಂತನ್ನು ಪಾವತಿಸಿ ೬೧ನೇ ವರ್ಷದಿಂದ 1000 ರೂ.ನಿಂದ 5000 ರೂ. ಮಿತಿಯಲ್ಲಿ ಪಿಂಚಣಿಯನ್ನು ಪಡೆಯಬಹುದಾಗಿದೆ. ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕು ಈ ವರೆಗೆ 4,27,736 ಅಟಲ್ ಪಿಂಚಣಿ ಖಾತೆಗಳನ್ನು ಮಾಡಿಸಿದೆ. ಈ ದಾಖಲೆಗಿಂತ ರೈತರು, ರೈತ ಕಾರ್ಮಿಕರು, ಕಾರ್ಖಾನೆಗಳಲ್ಲಿ ದುಡಿಯುವವರು, ನಿಶ್ಚಿತ ಪಿಂಚಣಿ ಇಲ್ಲದ ಶ್ರಮಿಕರು ತಮ್ಮ 60ನೇ ವರ್ಷದ ನಂತರ ನಿಶ್ಚಿಂತ ಬದುಕು ಸಾಗಿಸಲು ಅನುಕೂಲವಾಗಲಿದೆ ಎಂಬುದೇ ಸಮಾಧಾನದ ವಿಷಯ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅವರು ಪ್ರಶಸ್ತಿ ಬ್ಯಾಂಕಿನ ಗೌರವ ಹೆಚ್ಚಿಸಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಬ್ಯಾಂಕಿನ ಸಿಬ್ಬಂದಿ ವರ್ಗ ಅತ್ಯಂತ ಸಕ್ರಿಯವಾಗಿ ಪಾಲುಗೊಂಡಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಾಗುವುದು ಎಂದು ಶ್ರೀಕಾಂತ ಭಂಡಿವಾಡಿ ತಿಳಿಸಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಾಡಿದ್ದೇನು:
2023-24ನೇ ಹಣಕಾಸು ವರ್ಷದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಬ್ಯಾಂಕಿಗೆ ಪ್ರತಿ ಶಾಖೆಗೆ 108 ಖಾತೆಗಳ ಸರಾಸರಿಯಲ್ಲಿ 67,932 ಖಾತೆಗಳ ಗುರಿ ನೀಡಿತ್ತು. ಅದಕ್ಕೆ ಪ್ರತಿಯಾಗಿ ಬ್ಯಾಂಕು 137 ರ ಸರಾಸರಿಯಲ್ಲಿ 86,350 ಖಾತೆಗಳನ್ನು ಮಾಡಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಿದೆ. ಇದು ದಕ್ಷಿಣ ಭಾರತ ಮಟ್ಟದಲ್ಲಿ ಉಳಿದೆಲ್ಲ ಬ್ಯಾಂಕುಗಳ ಸರಾಸರಿಗಿಂತ ಹೆಚ್ಚಿನದ್ದಾಗಿದೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಒಂದೇ ದಿನ 66,800ಕ್ಕೂ ಹೆಚ್ಚಿನ ಖಾತೆಗಳನ್ನು ಲಾಗಿನ್ ಮಾಡಿಸುವ ಮೂಲಕ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಸ್ತುತ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕು ಮಂಗಳೂರಿನಿಂದ ವಿಜಯಪುರದವರೆಗಿನ ಒಂಭತ್ತು ಜಿಲ್ಲೆಗಳ ಕಾರ್ಯ ಪರಿಧಿಯಲ್ಲಿ 629 ಶಾಖೆಗಳನ್ನು ಹೊಂದಿದ್ದು 36,000 ಕೋಟಿ ರೂ. ವಹಿವಾಟು ಹೊಂದಿದ ಪ್ರಮುಖ ಗ್ರಾಮೀಣ ಬ್ಯಾಂಕಾಗಿದೆ.
ಈ ಸಂದರ್ಭದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್ಡಿಎ) ಅಧ್ಯಕ್ಷ ಡಾ. ದೀಪಕ ಮೊಹಾಂತಿ, ಕೆನರಾ ಬ್ಯಾಂಕಿನ ಎಸ್ಎಲ್ಬಿಸಿ ಮಹಾ ಪ್ರಬಂಧಕ ಭಾಸ್ಕರ ಚಕ್ರವರ್ತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.