ಫಿಲೋಮಿನಾ ಪ.ಪೂ. ಕಾಲೇಜಿನ ಎನ್.ಸಿ.ಸಿ. ಕೆಡೆಟ್ ಸಮೃದ್ಧಿ ಚೌಟ ರಾಷ್ಟ್ರಮಟ್ಟದ ಪರ್ವತಾರೋಹಣಕ್ಕೆ ಆಯ್ಕೆ
ಪುತ್ತೂರು: ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಮತ್ತು ಅಲೈಡ್ ಸ್ಫೋರ್ಟ್ಸ್ನ ಆಶ್ರಯದಲ್ಲಿ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಎನ್.ಸಿ.ಸಿ. ಅಖಿಲ ಭಾರತ ವಿಶೇಷ ಮೂಲ ಪರ್ವತಾರೋಹಣ ತರಬೇತಿಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆರ್ಮಿ ಎನ್.ಸಿ.ಸಿ. ಕೆಡೆಟ್ ಸಮೃದ್ಧಿ ಚೌಟ ಅವರು ಭಾಗವಹಿಸಿ ಮುಂಬರುವ ಮುಖ್ಯ ಪರ್ವತಾರೋಹಣಕ್ಕೆ ಆಯ್ಕೆಯಾಗಿದ್ದಾರೆ.
2024ನೇ ಮೂಲ ಪರ್ವತಾರೋಹಣ ತರಬೇತಿಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಎನ್.ಸಿ.ಸಿ. ಹುಡುಗಿಯರ ವಿಭಾಗದಲ್ಲಿ ಸಮೃದ್ಧಿ ಚೌಟರು ಏಕೈಕ ಕೆಡೆಟ್ ಆಗಿದ್ದಾರೆ.
ಹಿಮಾಚಲ ಪ್ರದೇಶದ ಮನಾಲಿಯ 15,700 ಅಡಿ ಎತ್ತರದ ‘ಶಿಥಿಧರ್’ ಶಿಖರವನ್ನು ಏರಲು ಎನ್.ಸಿ.ಸಿ. ಮಹಾನಿರ್ದೇಶಕರು ನವದೆಹಲಿಯಿಂದ ಮೂಲ ಪರ್ವತಾರೋಹಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಎನ್.ಸಿ.ಸಿ. ಕೆಡೆಟ್ಗಳಿಗೆ ಶಿಖರವನ್ನು ಏರುವ ಮೂಲಕ ಸಾಹಸಮಯ ಜೀವನ ಶೈಲಿಯನ್ನು ಬೆಳೆಸುವ ಈ ವಿಶೇಷ ತರಬೇತಿಯಲ್ಲಿ ಭಾರತದಾದ್ಯಂಥ 48 ಎನ್.ಸಿ.ಸಿ. ಕೆಡೆಟ್ಗಳು ಯಶಸ್ವಿಯಾಗಿ ತರಬೇತಿಯನ್ನು ಮುಗಿಸಿ ಮುಂಬರುವ ಮುಖ್ಯ ಪರ್ವತಾರೋಹಣಕ್ಕೆ ಆಯ್ಕೆಗೊಂಡಿದ್ದಾರೆ.
ಆಮ್ಲಜನಕದ ಸಮಸ್ಯೆ ಇದ್ದರೂ ಕೆಡೆಟ್ ಸಮೃದ್ಧಿ ಚೌಟ ಅವರು ಈ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ತರಬೇತಿಯ ‘ಬೆಸ್ಟ್ ರೋಪ್ ಟೀಮ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಕ್ಯಾ. ಜೋನ್ಸನ್ ಡೇವಿಡ್ ಸಿಕ್ವೇರಾ ಅವರು ಕೆಡೆಟ್ ಸಮೃದ್ಧಿ ಚೌಟ ಅವರಿಗೆ ವಿಶೇಷ ಮಾರ್ಗದರ್ಶನವನ್ನು ಮತ್ತು ತರಬೇತಿಯನ್ನು ನೀಡಿದ್ದಾರೆ.
ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ.ಫಾ ಲಾರೆನ್ಸ್ ಮಸ್ಕರೇನಸ್ ಹಾಗೂ ಕಾಲೇಜಿನ ಪ್ರಾಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಅಭಿನಂದಿಸಿ, ಮುಂಬರುವ ಮುಖ್ಯ ಪರ್ವತಾರೋಹಣಕ್ಕೆ ಶುಭಹಾರೈಸಿದ್ದಾರೆ.