ಅ.3 ರಿಂದ 12 ರವರೆಗೆ ಪಳ್ಳಿ ಶ್ರೀಕ್ಷೇತ್ರ ಅಡಪಾಡಿ ಶ್ರೀಉಮಾಮಹೇಶ್ವರ, ಶ್ರೀದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ
ಶಿರ್ವ: ಶಿರ್ವ ಸಮೀಪದ ಪಳ್ಳಿ ಅಡಪಾಡಿ ಕಾರಣಿಕ ಕ್ಷೇತ್ರ ಶ್ರೀಉಮಾಮಹೇಶ್ವರ, ಶ್ರೀದುರ್ಗಾಪರಮೇಶ್ವರೀ ದೇವೀ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ಜರುಗುವ ಶರನ್ನವರಾತ್ರಿ ಮಹೋತ್ಸವ ಅ.3 ಗುರುವಾರ ದಿಂದ ಅ.12 ಶನಿವಾರ ಪರ್ಯಂತ ವಿವಿಧ ಧಾರ್ಮಿಕ ಅನುಷ್ಠಾನಗಳೊಂದಿಗೆ ಸಂಪನ್ನಗೊಳ್ಳಲಿದೆ.
ಅ.3 ರಂದು ಪೂರ್ವಾಹ್ನ ಫಲಾನ್ಯಾಸ, ದೇವತಾ ಪ್ರಾರ್ಥನೆ, ನವಕ ಪ್ರಧಾನಹೋಮ, ನವಕಲಶಾಭಿಷೇಕ, ಏಕಾದಶ ರುದ್ರಾಭಿಷೇಕ, 9.30ರಿಂದ ನವಚಂಡಿಕಾ ಹವನ ಪ್ರಾರಂಭ, ಮಧ್ಯಾಹ್ನ 1 ಗಂಟೆಗೆ ಶ್ರೀದೇವರ ಮಹಾಪೂಜೆ, ದರ್ಶನ ಸೇವೆ, ಚಂಡಿಕಾ ಹೋಮದ ಪೂರ್ಣಾಹುತಿ, ಅನ್ನಸಂತರ್ಪಣೆ, ರಾತ್ರಿ ಭಜನೆ, ರಂಗಪೂಜೆ, ಸಂತರ್ಪಣೆ ಹಾಗೂ ಇನ್ನಿತರ ಸೇವೆಗಳು ಜರುಗಲಿವೆ.
ಪ್ರತೀ ದಿನ ಸಂಜೆ 4.30ರಿಂದ 5.30ರ ವರೆಗೆ ಹರಿಹರಪುರ ಪ್ರಭೋದಿನಿ ಗುರುಕುಲದ ಪ್ರಧಾನ ಆಚಾರ್ಯರಾದ ಡಾ. ಕಾರ್ತಿಕ್ ವಾಗ್ಲೆ ಇವರಿಂದ ‘ಶ್ರೀದೇವಿ ಭಾಗವತ ಪಾರಾಯಣ ಹಾಗೂ ಪ್ರವಚನ’ ನಡೆಯಲಿದೆ.
ಅ.4 ರಿಂದ 11ರ ಪರ್ಯಂತ ಪ್ರತೀದಿನ ಬೆಳಗ್ಗೆ ಏಕಾದಶ ರುದ್ರಾಭಿಷೇಕ, ಸಪ್ತಶತೀ ಪಾರಾಯಣ, ನವಚಂಡಿಕಾ ಹವನ, ದೇವಿ ಭಾಗವತ ಪಾರಾಯಣ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಚಂಡಿಕಾ ಹೋಮದ ಪೂರ್ಣಾಹುತಿ, ಅನ್ನಸಂತರ್ಪಣೆ, ರಾತ್ರಿ ಭಜನೆ, ರಂಗಪೂಜೆ, ಸಂತರ್ಪಣೆ ಹಾಗೂ ಇನ್ನಿತರ ಸೇವೆಗಳು ಜರುಗಲಿವೆ.
ಅ.12 ರಂದು ಬೆಳಿಗ್ಗೆ 9 ಗಂಟೆಗೆ ನವಚಂಡಿಕಾ ಹೋಮ ಪ್ರಾರಂಭ, 11.30ಕ್ಕೆ ಕುಮಾರಿಕಾ ಪೂಜೆ, ಸುವಾಸಿನಿ ಪೂಜೆ, 12.30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ, 1 ಗಂಟೆಗೆ ಶ್ರೀದೇವರ ಮಹಾಪೂಜೆ, 1.30ರಿಂದ ಮಹಾ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ಕಲ್ಪೋಕ್ತ ಪೂಜೆ, 7.30ಕ್ಕೆ ರಂಗಪೂಜೆ, ರಾತ್ರಿ 8.30ರಿಂದ ಶ್ರೀದೇವರ ರಜತ ಪಲ್ಲಕಿ ಉತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.