
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2024ರ ಜಿಲ್ಲೆಯ ಐವರಿಗೆ ಪ್ರಶಸ್ತಿ
ಮಂಗಳೂರು: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2024ರ ಪಟ್ಟಿಯನ್ನು ಸರ್ಕಾರ ಬುಧವಾರ ಪ್ರಕಟಿಸಿದೆ. ಇದರಲ್ಲಿ ದ.ಕ.ಜಿಲ್ಲೆಗೆ ವಿವಿಧ ಕ್ಷೇತ್ರದಲ್ಲಿ ಒಟ್ಟು ಐದು ಮಂದಿಗೆ ಪ್ರಶಸ್ತಿ ಲಭಿಸಿದೆ. ಇದೇ ಸಂದರ್ಭ ಪ್ರಕಟಿಸಲಾದ ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ-2024ರಲ್ಲಿ ದ.ಕ.ಜಿಲ್ಲೆಯ ಮೂರು ಮಂದಿಗೆ ಲಭಿಸಿದೆ.
ರಾಜ್ಯೋತ್ಸವ ಪ್ರಶಸ್ತಿ ಪೈಕಿ ಜಾನಪದ ಕ್ಷೇತ್ರದಲ್ಲಿ ಲೋಕಯ್ಯ ಶೇರ(ಭೂತಾರಾಧನೆ), ಹೊರನಾಡ ವಿಭಾಗದಲ್ಲಿ ಡಾ.ತುಂಬೆ ಮೊಹಿಯುದ್ದೀನ್(ತುಂಬೆ ಗ್ರೂಪ್ ಯುಎಇ, ಅಮೆರಿಕ), ಯಕ್ಷಗಾನ ಕ್ಷೇತ್ರದಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಪ್ರಶಾಂತ್ ಮಾಡ್ತಾ, ಶಿಕ್ಷಣ ಕ್ಷೇತ್ರದಲ್ಲಿ ಡಾ.ರಾಜೇಂದ್ರ ಶೆಟ್ಟಿ ಇವರಿಗೆ ಲಭಿಸಿದೆ.
ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ವಿಶ್ವನಾಥ ಸುವರ್ಣ(ಮಾಧ್ಯಮ), ಸದಾಶಿವ ಶೆಟ್ಟಿ(ಹೊರನಾಡು) ಹಾಗೂ ರೀಟಾ ನರೋನ್ಹಾ(ಸಮಾಜಸೇವೆ)ಇವರಿಗೆ ಲಭಿಸಿದೆ.
ರಾಜ್ಯೋತ್ಸವ ಪ್ರಶಸ್ತಿ ಪಡೆದವರು:
ಲೋಕಯ್ಯ ಶೇರ(ಜಾನಪದ)
ಲೋಕಯ್ಯ ಶೇರ ಇವರು ಜಾನಪದ ದೈವ ನರ್ತಕರು. ಪರಿಶಿಷ್ಟ ಜಾತಿಯ ನರೆಯದ ಜನಾಂಗಕ್ಕೆ ಸೇರಿದವರು. ಬಂಟ್ವಾಳದ ಬರಿಮಾರ್ನ ಶೇರ ಎಂಬಲ್ಲಿ ಪತ್ನಿ ನೀಲಮ್ಮ, ಪುತ್ರ ದಯಾನಂದ, ಸೊಸೆಯಾದ ಪೂರ್ಣಿಮಾ ಇವರೊಂದಿಗೆ ವಾಸವಿದ್ದಾರೆ.
ಸುಮಾರು 52 ವರ್ಷಗಳಿಂದ ಕಲಾವಿದನಾಗಿ ಜನಪದ ದೈವರಾಧನೆ ನರ್ತಕ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುಳುನಾಡಿನ ಕಾರಣಿಕ ದೈವಗಳಾದ ರಕ್ತೇಶ್ವರಿ, ಧೂಮಾವತಿ, ಪಂಜುರ್ಲಿ, ಕಾನಲ್ತಾಯ ಮಹಾಕಾಳಿ, ಶಿರಾಡಿ ದೈವ, ಚಾಮುಂಡೇಶ್ವರಿ, ಕಲ್ಲುರ್ಟಿ-ಕಲ್ಕುಡ ಇತ್ಯಾದಿ ದೈವಗಳ ನೇಮೋತ್ಸವದಲ್ಲಿ ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಕುಲದೈವ ಸೀಮೆದೈವ, ರಾಜನ್ ದೈವ, ಗ್ರಾಮದೈವ ಮುಂತಾದ ದೈವಗಳಿಗೂ ನೇಮವನ್ನು ಕಟ್ಟಿದ್ದಾರೆ. 2002ನೇ ಸಾಲಿನ ನಲ್ಕೆಯವರ ಬಂಟ್ವಾಳ ಸಮಾಜ ಸೇವಾ ಸಂಘದ ಸ್ಥಾಪಕರಾಗಿದ್ದಾರೆ.
ಡಾ.ತುಂಬೆ ಮೊಯ್ದಿನ್(ಹೊರನಾಡು)
ಯುಎಇ ಯಲ್ಲಿ ಪ್ರತಿಷ್ಠಿತ ಉದ್ಯಮ, ಶಿಕ್ಷಣ ಸಮೂಹ ಕಟ್ಟಿ ಬೆಳೆಸಿದ ಡಾ. ತುಂಬೆ ಮೊಯ್ದಿನ್ ಇವರು 21ನೇ ವಯಸ್ಸಿಗೇ ಉದ್ಯಮ ಜಗತ್ತಿಗೆ ಪ್ರವೇಶಿಸಿದ್ದರು. ಡಾ. ತುಂಬೆ ಮೊಯ್ದಿನ್ ಅವರದ್ದು ಗಲ್ಫ್ ದೇಶಗಳ ಉದ್ಯಮ ವಲಯದಲ್ಲಿ ಇಂದು ಬಹು ದೊಡ್ಡ ಹೆಸರು. ಮಂಗಳೂರಿನ ತುಂಬೆ ಮೂಲದ ಮೊಯ್ದಿನ್ ಅವರು ತಮ್ಮ ತಂದೆ ದಿವಂಗತ ಡಾ. ಬಿ ಅಹಮದ್ ಹಾಜಿ ಮೊಹಿಯುದ್ದೀನ್ ಅವರು ಸ್ಥಾಪಿಸಿದ ದೊಡ್ಡ ಉದ್ಯಮದ ವ್ಯಾಪ್ತಿಯನ್ನು ವಿದೇಶಗಳಲ್ಲೂ ವಿಸ್ತರಿಸಿ ಯಶಸ್ವಿಯಾಗಿ ಮುನ್ನಡೆಸಿದವರು.
ಮಾರ್ಚ್ 23, 1957ರಲ್ಲಿ ಮಂಗಳೂರಿನಲ್ಲಿ ಜನಿಸಿದರು ತುಂಬೆ ಮೊಯ್ದಿನ್. ತಂದೆ ಮತ್ತು ಅಜ್ಜ, ಖ್ಯಾತ ಉದ್ಯಮಿ ಯೆನೆಪೊಯ ಮೊಯ್ದೀನ್ ಕುಂಞಿ ಅವರಿಂದ ಕಲಿತ ಉದ್ಯಮದ ಪಾಠಗಳು, ಮೊಯ್ದಿನ್ ಅವರಿಗೆ ಕೆಲವೇ ವರ್ಷಗಳಲ್ಲಿ ಉದ್ಯಮಕ್ಕೆ ಹೊಸ ಆಯಾಮ ನೀಡಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ನೆರವಾದವು.
1997 ರಲ್ಲಿ ಡಾ.ತುಂಬೆ ಮೊಯ್ದೀನ್ ಅವರು ಯುಎಇಯಲ್ಲಿ ತುಂಬೆ ಗ್ರೂಪ್ ಸ್ಥಾಪಿಸಿದರು. 1998 ರಲ್ಲಿ ಅಜ್ಮಾನ್ ನ ಆಡಳಿತಗಾರರ ಆಹ್ವಾನದ ಮೇರೆಗೆ ಅವರು ಅಜ್ಮಾನ್ ನಲ್ಲಿ ಪ್ರಾರಂಭಿಸಿದ ಗಲ್ಫ್ ಮೆಡಿಕಲ್ ಕಾಲೇಜು ಇವತ್ತು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಾಗಿ (ಜಿಎಂಯು) ಇಡೀ ಗಲ್ಫ್ ದೇಶಗಳಲ್ಲೇ ಪ್ರತಿಷ್ಠಿತ ವೈದ್ಯಕೀಯ ವಿಶ್ವ ವಿದ್ಯಾಲಯವಾಗಿ ಭಾರೀ ಪ್ರಸಿದ್ಧಿ ಪಡೆದಿದೆ. ಅದು ಇಡೀ ಗಲ್ಫ್ ದೇಶಗಳಲ್ಲೇ ಪ್ರಪ್ರಥಮ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯ. 98 ಕ್ಕೂ ಹೆಚ್ಚು ದೇಶಗಳ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಎಂಯು ನ ಆರು ಕಾಲೇಜುಗಳ 28 ಕೋರ್ಸುಗಳಲ್ಲಿ ಕಲಿಯುತ್ತಿದ್ದಾರೆ. 50 ಕ್ಕೂ ಹೆಚ್ಚು ದೇಶಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಜಿಎಂಯುನಲ್ಲಿದ್ದಾರೆ.
ಅವರ ನಾಯಕತ್ವದಲ್ಲಿ ತುಂಬೆ ಸಮೂಹವು ಯುಎಇಯಲ್ಲಿ ಭಾರೀ ಬೆಳವಣಿಗೆ ಕಂಡಿತು. ತುಂಬೆ ಸಮೂಹವು ಶಿಕ್ಷಣ, ಆರೋಗ್ಯ, ವೈದ್ಯಕೀಯ ಸಂಶೋಧನೆ, ಡಯಾಗ್ನೋಸ್ಟಿಕ್ಸ್, ರಿಟೇಲ್ ಫಾರ್ಮಸಿ, ಆರೋಗ್, ಸಂವಹನ, ಪೌಷ್ಟಿಕಾಂಶ ಮಳಿಗೆಗಳು, ಹಾಸ್ಪಿಟಾಲಿಟಿ, ರಿಯಲ್ ಎಸ್ಟೇಟ್, ಪಬ್ಲಿಕೇಷನ್, ತಂತ್ರಜ್ಞಾನ, ಮಾಧ್ಯಮ, ಇವೆಂಟ್ ಮ್ಯಾನೇಜ್ ಮೆಂಟ್, ವೈದ್ಯಕೀಯ ಪ್ರವಾಸೋದ್ಯಮ, ವ್ಯಾಪಾರ ಮತ್ತು ಮಾರುಕಟ್ಟೆ ಸೇರಿದಂತೆ 20 ವಲಯಗಳಲ್ಲಿ ಕಾರ್ಯಾಚರಣೆ ಇರುವ ವೈವಿಧ್ಯಮಯ ಹಾಗೂ ಬೃಹತ್ ಉದ್ಯಮ ಸಮೂಹವಾಗಿ ವಿಕಸನಗೊಂಡಿದೆ. ಆ ಮೂಲಕ ಐದು ಸಾವಿರಕ್ಕೂಹೆಚ್ಚು ಜನರಿಗೆ ಉದ್ಯೋಗ ನೀಡಿದೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಡಾ ತುಂಬೆ ಮೊಯ್ದಿನ್, ಅವರ ಸಾಧನೆಗೆ ಮಧ್ಯಪ್ರಾಚ್ಯದ ಫೋರ್ಬ್ಸ್ ನಿಯತಕಾಲಿಕವು ‘ಅರಬ್ ಪ್ರಪಂಚದ ಅಗ್ರ ಭಾರತೀಯ ಉದ್ಯಮ ನಾಯಕ’ ಗೌರವ ನೀಡಿದೆ.
ವೈದ್ಯಕೀಯ ಶಿಕ್ಷಣ, ಉದ್ಯಮ ಮತ್ತು ರಾಷ್ಟ್ರದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಉತ್ತೇಜನಕ್ಕೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ಗೌರವಿಸಿ ದುಬೈಯ ಅಮಿಟಿ ವಿಶ್ವವಿದ್ಯಾಲಯ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿವೆ. ಗಲ್ಫ್ ದೇಶದಲ್ಲಿ ಮಾಡಿರುವ ಅಸಾಮಾನ್ಯ ಸಾಧನೆ ಹಾಗೂ ಸೇವಾ ಚಟುವಟಿಕೆಗಳಿಗಾಗಿ ಅವರಿಗೆ ಗಲ್ಫ್ ಕನ್ನಡಿಗ ರತ್ನ ಪ್ರಶಸ್ತಿಯನ್ನೂ ನೀಡಲಾಗಿದೆ.
ತುಂಬೆ ಮೊಯ್ದಿನ್ ಅವರ ಪತ್ನಿ ಝೋಹ್ರಾ ಮೊಯ್ದಿನ್ ಅವರು ಚಿತ್ರ ಕಲಾವಿದರಾಗಿ ಛಾಪು ಮೂಡಿಸಿದವರು. ಮೊಯ್ದಿನ್ ಅವರ ಇಬ್ಬರು ಪುತ್ರರು ಅಕ್ಬರ್ ಮೊಯ್ದಿನ್ ಹಾಗೂ ಅಕ್ರಮ್ ಮೊಯ್ದಿನ್. ಇಬ್ಬರೂ ತಂದೆಯ ಜೊತೆ ತುಂಬೆ ಸಮೂಹದಲ್ಲಿ ಸಕ್ರಿಯವಾಗಿದ್ದಾರೆ.
ಸುವರ್ಣ ಮಹೋತ್ಸವ ಪ್ರಶಸ್ತಿ ಪಡೆದವರು:
ವಿಶ್ವನಾಥ ಸುವರ್ಣ(ಮಾಧ್ಯಮ)
ಮೂಲತಃ ಮಂಗಳೂರು ಬಲ್ಲಾಳ್ಬಾಗ್ ನವರಾದ ವಿಶ್ವನಾಥ ಸುವರ್ಣ ಅವರು ಪ್ರಜಾವಾಣಿ ದಿನಪತ್ರಿಕೆಯ ಮುಖ್ಯಛಾಯಗ್ರಾಹಕರಾಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬೆಂಗಳೂರು ಅಲ್ಲದೆ ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಪತ್ರಿಕಾ ಛಾಯಗ್ರಾಹಕರಾಗಿ ದುಡಿದ ಅವರು ಬೀದರಿನಿಂದ ಬೇಕಲಕೋಟೆ ತನಕ ರಾಜ್ಯ ಎಲ್ಲ ಜಿಲ್ಲೆಗಳ ಕೋಟೆಕೊತ್ತಲಗಳ ಬೃಹತ್ ಛಾಯಾ ಸಂಪುಟ ಕರುನಾಡಿಮನ ಕೋಟೆಗಳು, ಕನ್ನಡ ನಾಡಿನ ಬಣ್ಣದ ಬಾನಾಡಿಗಳು ಎಂಬ ಪಕ್ಷಿ ಲೋಕದ ಛಾಯಾಕೃತಿಗಳ ನ್ನು ಪ್ರಕಟಿಸಿದ್ದು, ಸದ್ಯದಲ್ಲೆ ಕರ್ನಾಟಕದ ವಾಸ್ತುಶಿಲ್ಪ ದೇವಾಲಯಗಳ ಬಗ್ಗೆ ಕೃತಿಯೊಂದನ್ನು ಪ್ರಕಟಿಸಲು ಸಿದ್ಧತೆ ನಡೆಸಿದ್ದಾರೆ.
ಮಂಗಳೂರಿನ ಕೆನರಾ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಸಹೋದರ ದಿ. ಸುಂದರನಾಥ ಸುವರ್ಣ ಅವರ ಸಹಕಾರದಿಂದ ಬೆಂಗಳೂರಿನಲ್ಲಿ ಛಾಯಗ್ರಾಹಕ ವೃತ್ತಿ ಆರಂಭಿಸಿದರು. ದೊಂಬಿ ಗಲಭೆಗಳಂತಹ ಸಂದರ್ಭದಲ್ಲಿ ದಿಟ್ಟತನದಿಂದ ಛಾಯಾಗ್ರಹಣ ನಡೆಸಿ ಗಮನ ಸೆಳೆದಿದ್ದರು.
-ಡಾ. ರೀಟಾ ನೊರೊನ್ಹಾ(ಸಮಾಜ ಸೇವೆ)
ಮಂಗಳೂರಿನ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯದಲ್ಲಿ 1971-2009೧೯ರ ತನಕ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆಯಾಗಿ, ಡೀನ್ ಆಗಿ ಕೆಲಸ ನಿರ್ವಹಿಸಿ, ನಿವೃತ್ತರಾಗಿರುವ ಡಾ.ರೀಟಾ ನೊರೊನ್ಹಾ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಅನ್ಯಾಯದ ವಿರುದ್ಧದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡವರು. ರೈತರು (ಮಹಿಳಾ ರೈತರನ್ನು ಒಳಗೊಂಡಂತೆ) ಹಕ್ಕುಗಳ ಪ್ರಚಾರ ಮತ್ತು ಸುಸ್ಥಿರ/ಸಾವಯವ ಕೃಷಿ, ತಮ್ಮ ಸಹಕಾರಿ ಸಂಘಗಳ ಮೂಲಕ ತರಕಾರಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಬೆಂಬಲ, ಬೀದಿ ಬದಿ ವ್ಯಾಪಾರಿಗಳ ಜೀವನಾಧಾರ ಹಕ್ಕುಗಳ ಉತ್ತೇಜನ, ಸುಸ್ಥಿರ ಅಭಿವೃದ್ಧಿ, ಲಿಂಗ ಸಮಾನತೆ, ಸಾಮಾಜಿಕ ಸಂವೇದನೆ ಮತ್ತು ಮಾನವ ಹಕ್ಕುಗಳು ಮೊದಲಾದ ಹೋರಾಟಗಳಲ್ಲಿ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ.
ಮಾನವ ಅಭಿವೃದ್ಧಿಯಲ್ಲಿನ ಲಿಂಗ ಸಮಸ್ಯೆಗಳ ಕುರಿತು ಕರ್ನಾಟಕದ ವಿವಿಧ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳು ಮತ್ತು ಸಂಬಂಧಪಟ್ಟಸರ್ಕಾರಿ ಇಲಾಖೆಯ ಸಿಬ್ಬಂದಿಗಳ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಗ್ರ ಆರೋಗ್ಯ ಪ್ರಚಾರ ಮತ್ತು ಕ್ಯಾನ್ಸರ್ನಂತಹ ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆಗೆ ಸಂಬಂಧಿಸಿದ ಸಮಸ್ಯೆಗಳು. ಸಾಮಾಜಿಕ ತಾರತಮ್ಯ ಮತ್ತು ನಿರ್ದಿಷ್ಟವಾಗಿ ಲಿಂಗ ಸಮಾನತೆ/ಅಸಮಾನತೆ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿ ಸಾಮಾಜಿಕ ಪ್ರಸ್ತುತತೆಯ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸಿದ್ದಾರೆ.
ಶೈಕ್ಷಣಿಕ ಮತ್ತು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿ ಬೋರ್ಡ್ ಆಫ್ ಸ್ಟಡೀಸ್ (ಎಂಎಸ್ಡಬ್ಲ್ಯೂ) ಅಧ್ಯಯನ ಮಂಡಳಿ ಅಧ್ಯಕ್ಷೆ, ಪಠ್ಯಕ್ರಮ ವಿನ್ಯಾಸ ಮತ್ತು ಮೌಲ್ಯ ಮಾಪನ ಸಂಬಂಧಿತ ವಿಷಯಗಳ ಹೊರತಾಗಿ ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಂಸ್ಥೆಗಳು ಮತ್ತು ಸಮಿತಿಗಳಲ್ಲಿ ಅನುಭವ ಹೊಂದಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಸಚಿವಾಲಯದ ಅಡಿಯಲ್ಲಿ ಒಂದು ಸ್ವಾಯುತ್ತ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆಯಾಗಿ ಕೆಲಸ ಮಾಡಿದ್ದಾರೆ.