
ಗಾಂಧೀಜಿ ತತ್ವ ಕತ್ತಲಲ್ಲಿ ಮುನ್ನಡೆಸುವ ದಾರಿ ದೀಪ: ಡಾ. ಪೀಟರ್ ಪಾವ್ಲ್ ಡಿ’ಸೋಜಾ
ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಮೂಲಮಂತ್ರಗಳು ವಿಶ್ವದಾದ್ಯಂತದ ಮಾಧ್ಯಮ ವ್ಯಕ್ತಿಗಳಿಗೆ ಮಾತ್ರವಲ್ಲ ಎಲ್ಲಾ ಮನುಷ್ಯರಿಗೆ ಕತ್ತಲಲ್ಲಿ ಮುನ್ನಡೆಸುವ ದಾರಿದೀಪಗಳಾಗಿವೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಡಿ’ಸೋಜಾ ಹೇಳಿದರು.
ಅವರು ಮಂಗಳೂರಿನ ಸಿಒಡಿಪಿಯಲ್ಲಿ ನಡೆದ ಇಂಡಿಯನ್ ಕ್ಯಾಥೋಲಿಕ್ ಪ್ರೆಸ್ ಅಸೋಸಿಯೇಷನಿನ 29ನೇ ರಾಷ್ಟ್ರೀಯ ಸಮಾವೇಶವನ್ನು ಮಂಗಳವಾರ ಉದ್ಘಾಟಿಸಿದರು.
ಗಾಂಧೀಜಿಯವರು ನಮಗೆ ಎಲ್ಲರ ಅಭಿಪ್ರಾಯಗಳನ್ನು ಗೌರವಿಸುವ ಪರಂಪರೆಯನ್ನು ಪಾಲಿಸಲು ಕರೆ ನೀಡಿದ್ದಾರೆ. ಗಾಂಧೀಜಿಯವರಂತೆ ಇಂದಿನ ಎಲ್ಲಾ ಪತ್ರಕರ್ತರು ನಿರ್ಭೀತರೂ ಸತ್ಯಪಕ್ಷಪಾತಿಗಳಾಗಬೇಕೆಂದು ಕರೆ ನೀಡಿದರು. ಮಾಧ್ಯಮಗಳ ಮೂಲಕ ಸತ್ಯದ ಹುಡುಕಾಟ ನಡೆಯುತ್ತಿದೆಯೇ? ಸತ್ಯ ನೋವು ನೀಡುತ್ತದೆ. ಆದರೆ ಅದು ನಿರ್ಗತಿಕರಿಗೆ ಬಲ ನೀಡುತ್ತದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿ ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಹೆನ್ರಿ ಡಿಸೋಜಾ ಮಾತನಾಡಿ ವಿವಿಧ ಒತ್ತಡಗಳ ನಡುವೆ ಸಿಲುಕಿ ಹೋಗಿರುವ ಇಂದಿನ ಮಾಧ್ಯಮ ಜಗತ್ತಿನಲ್ಲಿ ಗಾಂಧೀಜಿಯವರ ಚಿಂತನೆಗಳು ಅಪ್ರಸ್ತುತ ಎನ್ನುವಂತೆ ಕಾಣುತ್ತಿದೆಯಾದರೂ ವಾಸ್ತವವಾಗಿ ಬೆಳಕಿನ ಅಗತ್ಯವಿರುವುದು ಕತ್ತಲಿನ ನಡುವೆಯೇ ಎನ್ನುವುದನ್ನು ಮರೆಯಬಾರದು. ಇಂತಹ ಗೊಂದಲದ ನಡುವೆಯೇ ಪ್ರಜಾತಂತ್ರದ ಹಾಗೂ ಭಾರತೀಯ ತೆಯ ಬಲವನ್ನು ಹೆಚ್ಚಿಸಲು ಮಾಧ್ಯಮಗಳ ಪಾತ್ರದ ಕುರಿತು ಗಾಂಧೀಜಿಯವರ ಚಿಂತನೆಗಳನ್ನು ಪುನಃ ನಮ್ಮ ಪತ್ರಿಕೋದ್ಯಮದ ಕೇಂದ್ರ ಭಾಗವಾಗಿಸುವ ಅಗತ್ಯವಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಉದ್ಘಾಟಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಮ್ಯಾಕ್ಸಿಮ್ ಎಲ್ ನರೊನ್ಹಾ, ಐಸಿಪಿಎ ಅಧ್ಯಕ್ಷ ಇಗ್ನೇಷಿಯಸ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಫಾ. ಸುರೇಶ್ ಮ್ಯಾಥ್ಯೂ, ಕಾರ್ಯಕ್ರಮದ ಸಂಯೋಜಕ ರಾಕ್ಣೊ ವಾರಪತ್ರಿಕೆಯ ಸಂಪಾದಕ ಫಾ.ರೂಪೇಶ್ ಮಾಡ್ತಾ, ಸಿಒಡಿಪಿ ನಿರ್ದೇಶಕ ಫಾ. ವಿನ್ಸೆಂಟ್ ಡಿಸೋಜಾ ಉಪಸ್ಥಿತರಿದ್ದರು.