ಈರ್ವರು ಪತ್ರಕರ್ತರ ಸಂಸ್ಮರಣೆ ಮೂಡುಬಿದಿರೆಯಲ್ಲಿ ಬಹುಭಾಷಾ ಕವಿಗೋಷ್ಠಿ

ಈರ್ವರು ಪತ್ರಕರ್ತರ ಸಂಸ್ಮರಣೆ ಮೂಡುಬಿದಿರೆಯಲ್ಲಿ ಬಹುಭಾಷಾ ಕವಿಗೋಷ್ಠಿ


ಮೂಡುಬಿದಿರೆ: ಕಳೆದ ವರ್ಷ ನಿಧನ ಹೊಂದಿರುವ ಖ್ಯಾತ ಪತ್ರಕರ್ತರಾಗಿದ್ದ ವಕೀಲ ವೇಣುಗೋಪಾಲ್ ಮತ್ತು ಡಾ. ಶೇಖರ ಅಜೆಕಾರು ಇವರುಗಳ ಸಂಸ್ಮರಣ ಮತ್ತು ಬಹುಭಾಷಾ ಕವಿಗೋಷ್ಠಿ ಕಾರ್ಯವನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದಿರೆ ಪ್ರೆಸ್‌ಕ್ಲಬ್ (ರಿ) ವತಿಯಿಂದ ಸಮಾಜ ಮಂದಿರದಲ್ಲಿ ನಡೆಯಿತು.

ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಕೀಲರೂ ಆಗಿದ್ದ ವೇಣುಗೋಪಾಲರ ಶ್ರಮದ ಫಲವಾಗಿ ಪತ್ರಕರ್ತರ ಭವನಕ್ಕೆ ನಿವೇಶನದ ವ್ಯವಸ್ಥೆಯಾಗಿದೆ. ಬಹುಮುಖ ಪ್ರತಿಭೆಯ ಡಾ. ಶೇಖರ ಅಜೆಕಾರು ವಿಶೇಷವಾಗಿ ಮೂಡುಬಿದಿರೆಯಲ್ಲಿ ಹಲವು ಕಾಲ ನೆಲಸಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದಂತಹ ಹಲವಾರು ವಿಭಿನ್ನ ಮಾದರಿಯ ಕಾರ್ಯಕ್ರಮದ ರೂವಾರಿಗಳಾಗಿದ್ದು ಹಲವಾರು ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿದ್ದರು ಎಂದು ಹೇಳಿದರು.

ವಿಜಯಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ ಮಾತನಾಡಿ, ಮಾಧ್ಯಮ ಮತ್ತು ವಿಶ್ವಾಸಾರ್ಹತೆ ಎಂಬ ವಿಷಯದ ಮೇಲೆ ಮಾತನಾಡುತ್ತಾ ಜಾಲತಾಣಗಳ ಮತ್ತು ಯಂತ್ರ ಮಾದ್ಯಮಗಳ ಪೈಪೋಟಿಯ ಮಧ್ಯೆಯೂ ಇಂದಿಗೂ ಪ್ರತಿಶತ ತೊಂಭತ್ತರಷ್ಟು ನಂಬುಗೆಗೆ ಪಾತ್ರವಾಗಿ ಪತ್ರಿಕಾ ಮಾಧ್ಯಮವೇ ಇದೆ ಎಂದರು.

ಖ್ಯಾತ ನ್ಯಾಯವಾದಿ ಬಾಹುಬಲಿ ಪ್ರಸಾದ್ ಅವರು ವಕೀಲ ವೇಣುಗೋಪಾಲರ ಸಂಸ್ಮರಣೆ ಮಾಡುತ್ತಾ ಅವರ ಪತ್ರಿಕಾ ಪ್ರೇಮ ಹಾಗೂ ನ್ಯಾಯಾಲಯದಲ್ಲಿ ಸಹ ಹಲವಾರು ತೀರ್ಪುಗಳ ಬಗ್ಗೆ ಅವರು ತೋರಿಸುತ್ತಿದ್ದ ಒಲವು ಹಾಗೂ ಶ್ರದ್ಧೆಗಳನ್ನು ಉದಾಹರಣೆ ಸಹಿತ ವಿವರಿಸಿದರು.

ಮೂಡುಬಿದಿರೆ ಕ.ಸಾ.ಪ. ಕಾರ್ಯದರ್ಶಿ ಸದಾನಂದ ನಾರಾವಿಯವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಢಿಯ ಚಾಲನೆಯನ್ನು ಹವ್ಯಕ ಭಾಷೆಯ ಶೃಂಗಾರ ಗಜಲ್ ರೂಪಕದ ಮೂಲಕ ಮಂಗಳೂರಿನ ವೈದ್ಯ ಕಣಚೂರು ಆಯುರ್ವೇದ ಆಸ್ಪತ್ರೆಯ ನಿರ್ದೇಶಕ ಹಾಗೂ ಬರಹಗಾರ ಸುರೇಶ ನೆಗಳಗುಳಿಯವರು ನೆರವೇರಿಸಿದರು.

ಹೆರಾಲ್ಡ್ ತೆರಾವೋ, ರೇಮಂಡ್ ಡಿ’ಕುನ್ಹಾ ಪರವಾಗಿ ರಿಯಾನಾ, ಮುಕುಂದ ಮಿಜಾರು ಕೊಂಕಣಿಯಲ್ಲಿಯೂ, ಹಸನಬ್ಬರು ಬ್ಯಾರಿ ಭಾಷೆಯಲ್ಲಿಯೂ, ವನಜಾ ಜೋಶಿ ಚಿತ್ಪಾವನ ಭಾಷೆಯಲ್ಲಿಯೂ, ಲಿಂಗಪ್ಪ ಗೌಡ ನೀರ್ಕೆರೆ ಕುಡುಬಿ, ಪದ್ಮನಾಭ ಮಿಜಾರು ತುಳು, ಸೌಮ್ಯಾ ಕುಗ್ವೆ ಹವ್ಯಕ ಮತ್ತು ಕನ್ನಡದಲ್ಲಿ ಅನಿತಾ ಶೆಟ್ಡಿ, ಶರಣ್ಯ ಬೆಳುವಾಯಿ ನಾಗಶ್ರೀ ಭಂಡಾರಿ ರಾಮಕೃಷ್ಣ ಶಿರೂರು ಮತ್ತು ಕಾರ್ಯಕ್ರಮದ ರೂವಾರಿ ಧನಂಜಯ ಮೂಡುಬಿದಿರೆ ಯವರು ಕವನ ವಾಚಿಸಿದರು

ಗೋಷ್ಠಿ ಅಧ್ಯಕ್ಷ ಸದಾನಂದ ನಾರಾವಿಯವರು ಇಬ್ಬರೂ ಪತ್ರಕರ್ತರ ವಿಶೇಷ ಗುಣಗಳ ಬಗ್ಗೆ ಹೇಳುತ್ತಾ ಕವನ ವಾಚಿಸಿ ಸರ್ವರನ್ನೂ ಅಭಿನಂದಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಅವರು ಸರ್ವಾಧ್ಯಕ್ಷತೆ ವಹಿಸಿ ಸಂಸ್ಮರಣೆ ಮಾಡಲ್ಪಟ್ಟ ಈರ್ವರ ಗುಣಗಾನ ಮಾಡುತ್ತಾ ಸದಾಶಯ ವ್ಯಕ್ತ ಪಡಿಸಿ ಅತಿಥಿ ಹಾಗೂ ಎಲ್ಲಾ ಕವಿಗಳಿಗೆ ಧನ್ಯವಾದ ಅರ್ಪಿಸಿದರು.

ಸಂಘದ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಸ್ವಾಗತಿಸಿದರು. ಪತ್ರಕರ್ತ ಬಿ.ಕೆ. ಅಶ್ರಫ್ ವಾಲ್ಪಾಡಿ ನಿರೂಪಿಸಿದರು. ಬಹುಭಾಷಾ ಕವಿ ಗೋಷ್ಠಿಯ ರೂವಾರಿ ಧನಂಜಯ ಮೂಡುಬಿದಿರೆ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article