
ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ
ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ) ಹಾಗೂ ರೋಟರಿ ಕ್ಲಬ್ ಪುತ್ತೂರು ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ ಮಂಗಳವಾರ ಕಾಲೇಜಿನ ಸ್ಲಿವರ್ ಜುಬ್ಲಿ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ಪುತ್ತೂರಿನ ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪತಿ ರಾವ್ ಮಾತನಾಡಿ, ವಿದ್ಯಾರ್ಥಿಗಳಿಗೆ ಈ ರೋಗದ ಬಗ್ಗೆ ಜಾಗೃತರಾಗಬೇಕು ಎಂದು ತಿಳಿವಳಿಕೆ ಸಂದೇಶ ನೀಡಿದರು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯರಿಂದ ಸಲಹೆ ಪಡೆಯಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಬ್ರೆಸ್ಟ್ & ಎಂಡೋಕ್ರೀನ ಸರ್ಜನ್ ಹಾಗೂ ಆಂಕೊಲಾಜಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಸ್ಮಿತಾ ರಾವ್ ಮಾತನಾಡಿ, ಸ್ತನ ಕ್ಯಾನ್ಸರ್ ಮತ್ತು ಅದರ ಅಪಾಯದ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ವಿವರಿಸಿದರು. ಸ್ತನ ಕ್ಯಾನ್ಸರ್ನ ಆರಂಭಿಕ ಪತ್ತೆ ಹಚ್ಚುವಿಕೆಯಿಂದ ವ್ಯಕ್ತಿ ಬದುಕಬಲ್ಲ ಎಂದು ತಿಳಿಸಿದರು.
ಎಸ್ಡಿಎಂ ಆಸ್ಪತ್ರೆ ಉಜಿರೆಯ ಸಹಾಯಕ ಪ್ರಾಧ್ಯಾಪಕಿ ಡಾ. ಅನನ್ಯಲಕ್ಷ್ಮಿ ಅವರು ಸ್ತನ ಕ್ಯಾನ್ಸರ್ ಮತ್ತು ಅದರ ಅಪಾಯಕಾರಿ ಅಂಶಗಳ ಬಗ್ಗೆ ಪ್ರಮುಖ ಟಿಪ್ಪಣಿಗಳೊಂದಿಗೆ ಪರಿಕಲ್ಪನೆಯನ್ನು ನೀಡಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟೋನಿ ಪ್ರಕಾಶ್ ಮೊಂತೇರೋ ವಿದ್ಯಾರ್ಥಿಗಳು ಈ ಮಾಹಿತಿಯನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವಂತರಾಗಿ ಬದುಕಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಆಂಟಿ ವಿಮೆನ್ ಹೆರಸ್ಮೆಂಟ್ ಸೆಲ್ ಸಂಯೋಜಕಿ ನೊವೆಲಿನ್ ಎನ್. ಫರ್ನಾಡಸ್, ವಿಮೆನ್ ಎಂಪವರ್ ಮೆಂಟ್ ಸೆಲ್ ಸಂಯೋಜಕಿ ಪ್ರೇಮಲತಾ ಉಪಸ್ಥಿತರಿದ್ದರು.
ಬಿಬಿಎ ವಿದ್ಯಾರ್ಥಿನಿ ಅಚ್ಚಮ್ಮ ಸ್ವಾಗತಿಸಿದರು. ಅಖಿಲಾ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು. ಸಿಮ್ರಾನ್ ತಾಜ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಟಿನ್ಸಿ ಥಾಮಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಿಯಾ ವಂದಿಸಿದರು. ರೋಟರಿ ಕ್ಲಬ್ ಸದಸ್ಯರು, ಮತ್ತು ಆಂಟಿ ವಿಮೆನ್ ಹೆರಸ್ಮೆಂಟ್ ಸೆಲ್ ಸದಸ್ಯರು, ವಿಮೆನ್ ಎಂಪವರ್ ಮೆಂಟ್ ಸೆಲ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.