ಎಸ್ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ‘ಸಮನ್ವಯ’ ಕಾರ್ಯಕ್ರಮ
ಉಜಿರೆ: ತರಗತಿಯ ಹೊರಗಿನ ಅನುಭವಗಳನ್ನು ಸ್ಪರ್ಧೆಗಳು ಕಲಿಸುತ್ತವೆ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಆ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದು ಉಜಿರೆಯ ಎಸ್ಬಿಐ ಶಾಖಾ ವ್ಯವಸ್ಥಾಪಕರಾದ ದೀಕ್ಷಾ ಕೆ. ತಿಳಿಸಿದರು.
ಎಸ್ಡಿಎಂ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್ನಲ್ಲಿ ಮಂಗಳವಾರ ವಾಣಿಜ್ಯ ವಿಭಾಗದ ವತಿಯಿಂದ ಜರುಗಿದ ಒಂದು ದಿನದ ಕಾಲೇಜು ಮಟ್ಟದ ಸ್ಪರ್ಧೆ ‘ಸಮನ್ವಯ’ ಉದ್ಘಾಟಿಸಿ ಮಾತನಾಡಿದರು.
‘ಸಮನ್ವಯ’ದಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸಂವಹನ, ನಾಯಕತ್ವ, ಸಮಯ ನಿರ್ವಹಣೆಯನ್ನು ಕಲಿಸುತ್ತವೆ. ಇದು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲೂ ಸಹಾಯವಾಗಲಿದೆ. ಗೆಲವಿನಷ್ಟೇ ಇಲ್ಲಿ ಪಡೆಯುವ ಅನುಭವ ಕೂಡ ಮುಖ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷೀಯ ಮಾತುಗಳನ್ನಾಡಿದರು. ‘ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸುವಲ್ಲಿ ಸಹಾಯ ಮಾಡುತ್ತವೆ. ಇಲ್ಲಿ ಕಲಿತ ಪಾಠಗಳಿಂದ ವೈಯಕ್ತಿಕ ನಿರ್ವಹಣೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಾಧನೆಯ ಕಡೆಗೆ ಸಾಗಬಹುದು’ ಎಂದರು.
ಎಸ್ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಕುಮಾರಿ ಎಸ್.ವಿ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನುಷಾ ಶೆಟ್ಟಿ ಸ್ವಾಗತಿಸಿ, ವಿಜಯಲಕ್ಷ್ಮಿ ವಂದಿಸಿದರು, ವೈಷ್ಣವಿ ನಿರೂಪಿಸಿದರು.

