ಉದ್ಯೋಗ ಭರವಸೆ ನೀಡಿ ವಂಚನೆ: ಆತ್ಮಹತ್ಯೆ
Saturday, November 16, 2024
ಕಾಸರಗೋಡು: ಉದ್ಯೋಗ ಭರವಸೆ ನೀಡಿ ತನ್ನ ಪುತ್ರಿಯಿಂದ 12.70 ಲಕ್ಷ ರೂ. ಪಡೆದು ಡಿವೈಎಫ್ಐ ಮಾಜಿ ನೇತಾರೆ ಸಚಿತಾ ರೈ ವಂಚಿಸಿರುವುದರಿಂದ ಖಿನ್ನತೆಗೊಳಗಾದ ಮಹಿಳೆ ಮನೆ ಸನಿಹದ ಶೆಡ್ಡಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾರೆ.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳತ್ತಡ್ಕ ನೆಲ್ಲಿಕಳಯ ನಿವಾಸಿ ಅರವಿಂದಾಕ್ಷನ್ ಎಂಬುವರ ಪತ್ನಿ ಸರೋಜಿನಿ(50) ಆತ್ಮಹತ್ಯೆ ಮಾಡಿಕೊಂಡವರು. ಶುಕ್ರವಾರ ಬೆಳಗ್ಗೆ ಡಿಪೋಗೆ ಹಾಲು ಕೊಂಡು ಹೋದ ಪತಿ ಅರವಿಂದಾಕ್ಷನ್ ವಾಪಸಾದಾಗ ಸರೋಜಿನಿ ನೇಣಿಗೆ ಶರಣಾಗಿದ್ದರು.
ಅರವಿಂದಾಕ್ಷನ್ ಸರೋಜಿನಿ ದಂಪತಿ ಪುತ್ರಿ ಅಮೃತಾ ಅವರಿಂದ ಡಿವೈಎಫ್ಐ ಮಾಜಿ ನೇತಾರೆ ಸಚಿತಾ ರೈ, ಸಿಪಿಸಿಆರ್ಐನಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ 12.70 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪುತ್ರಿಗೆ ಕೆಲಸ ಒದಗಿಸಿಕೊಡುವ ಭರವಸೆಯೊಂದಿಗೆ ನೀಡಿದ ಹಣ ವಾಪಸಾಗದ ಹಿನ್ನೆಲೆಯಲ್ಲಿ ಸರೋಜಿನಿ ಖಿನ್ನತೆಗೊಳಗಾಗಿದ್ದರೆನ್ನಲಾಗಿದೆ.