ನ.9, 10 ರಂದು ಕರಾವಳಿಯ ಅತಿ ದೊಡ್ಡ ಬ್ರಾಸ್ ಬ್ಯಾಂಡ್ ಹಬ್ಬದ ಗ್ರ್ಯಾಂಡ್ ಫಿನಾಲೆ: ಮಂಗಳೂರಿನಲ್ಲಿ ಎರಡು ದಿನಗಳ ಭವ್ಯ “ಪೆಪೆರೆ ಪೆಪೆ ಢುಂ”

ನ.9, 10 ರಂದು ಕರಾವಳಿಯ ಅತಿ ದೊಡ್ಡ ಬ್ರಾಸ್ ಬ್ಯಾಂಡ್ ಹಬ್ಬದ ಗ್ರ್ಯಾಂಡ್ ಫಿನಾಲೆ: ಮಂಗಳೂರಿನಲ್ಲಿ ಎರಡು ದಿನಗಳ ಭವ್ಯ “ಪೆಪೆರೆ ಪೆಪೆ ಢುಂ”

ಮಂಗಳೂರು: ‘ಆಮಿ ಆನಿ ಆಮ್ಚಿಂ’ ಸಂಸ್ಥೆಯ ವತಿಯಿಂದ ಇದೇ ನವೆಂಬರ್ 9 ಮತ್ತು 10ರಂದು ಮಂಗಳೂರಿನ ಕೆಲರಾಯ್ ಚರ್ಚ್ ವಠಾರದಲ್ಲಿ ಕರಾವಳಿಯ ಅತಿ ದೊಡ್ಡ ಬ್ರಾಸ್ ಬ್ಯಾಂಡ್ ಹಬ್ಬದ ಗ್ರ್ಯಾಂಡ್ ಫಿನಾಲೆ ‘ಪೆಪೆರೆ ಪೆಪೆ ಢುಂ’ ಭವ್ಯ ಕಾರ್ಯಕ್ರಮ ನಡೆಯಲಿದೆ.

ನ.9 ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, 5 ತಂಡಗಳು ಅಂತಿಮ ಹಂತದ ರೋಚಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಬ್ರಾಸ್ ಬ್ಯಾಂಡ್ ವಾದ್ಯದೊಂದಿಗೆ ನವ್ಯ ಪ್ರಯೋಗಗಳ ಅನಾವರಣಕ್ಕೆ ವೇದಿಕೆಯು ಸಾಕ್ಷಿಯಾಗಲಿದೆ.

ನ.10 ರಂದು ಸಂಜೆ 5 ಗಂಟೆಗೆ ವಿದೇಶಗಳಲ್ಲಿ ಕನ್ನಡ ಕಂಪು ಮೂಡಿಸುತ್ತಿರುವ ನಮ್ಮ ನೆಲದ ಹೆಮ್ಮೆಯ ಡಾ. ರೊನಾಲ್ಡ್ ಕೊಲಾಸೊ ಅವರ ಹೆಸರಿನಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ‘ಡಾ. ರೊನಾಲ್ಡ್ ಕೊಲಾಸೊ ಸಾಮರಸ್ಯ ಪ್ರಶಸ್ತಿ-24’ರ ಪುರಸ್ಕಾರ ಪ್ರದಾನ ಆಯೋಜಿಸಲಾಗಿದೆ.

ಪ್ರಶಸ್ತಿ ಸ್ಥಾಪನೆ ಹಿನ್ನೆಲೆ:

ದಕ್ಷಿಣ ಕನ್ನಡ ಮೂಲದವರಾದ ಕೊಲಾಸೊ ಅವರು ಪಿಯುಸಿವರೆಗಿನ ಶಿಕ್ಷಣವನ್ನು ಗ್ರಾಮೀಣ ಪರಿಸರದಲ್ಲೇ ಪಡೆದವರು. ನಂತರ, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ಮೇಲೆ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದರು. ಹಲವು ವರ್ಷಗಳ ಕಾಲ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ನಂತರ, ಸ್ವತಃ ಉದ್ದಿಮೆ ಆರಂಭಿಸಿ ಯಶಸ್ಸು ಕಂಡರು. ತಮ್ಮ ದುಡಿಮೆಯಲ್ಲಿ ಒಂದು ಪಾಲನ್ನು ಸಮಾಜಕ್ಕೆ ವಿನಿಯೋಗಿಸಬೇಕೆಂದು ತಮ್ಮ ವೃತ್ತಿಬದುಕಿನ ಆರಂಭದಲ್ಲೇ ಅವರು ಪ್ರತಿಜ್ಞೆ ಕೈಗೊಂಡರು. ಆಮೇಲೆ ಅದನ್ನು ಅವರು ತಮ್ಮ ಬದುಕಿನುದ್ದಕ್ಕೂ ಒಂದು ವೃತದಂತೆ ಪಾಲಿಸುತ್ತಾ ಬಂದಿದ್ದಾರೆ. ಅವರ ಈ ಮನೋಧೋರಣೆಯ ಫಲವಾಗಿ ಕನ್ನಡ ನಾಡಿನ ಹತ್ತು ಹಲವು ಕ್ಷೇತ್ರಗಳು ಉಪಕೃತವಾಗಿವೆ. ಶೈಕ್ಷಣಿಕ, ಆರೋಗ್ಯ, ಮೂಲಸೌಕರ್ಯ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ 23ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅವರ ಅತ್ಯಮೂಲ್ಯ ಕಾಣಿಕೆ ಸಂದಿದೆ. ಅಪಾರ ಕೊಡುಗೆ ನೀಡುತ್ತಾ ಕನ್ನಡ, ಕೊಂಕಣಿ ಹಾಗೂ ತುಳು ನುಡಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಬಾಹ್ರೇನ್ ನಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ದೊಡ್ಡ ಮೊತ್ತದ ಧನಸಹಾಯ ನೀಡುವುದರ ಜೊತೆಗೆ ಇನ್ನಿತರ ರೀತಿಗಳಲ್ಲಿ ಕೂಡ ವಿದೇಶಗಳಲ್ಲಿ ಕನ್ನಡ ಕಂಪು ಮೂಡಿಸುತ್ತಿದ್ದಾರೆ. ಎಲ್ಲಾ ಧರ್ಮೀಯರ ಪವಿತ್ರ ನೆಲೆಗಳಿಗೂ ಸಹಾಯ ಹಸ್ತ ಚಾಚಿದ್ದಾರೆ. ಕೊಲಾಸೊ ಅವರ ನೆರವಿನಿಂದ ನಿರ್ಮಾಣಗೊಂಡ ಹಾಗೂ ಪುನರುಜ್ಜೀವಗೊಂಡ ಹಲವಾರು ದೇವಸ್ಥಾನಗಳು, ಚರ್ಚುಗಳು ಹಾಗೂ ಮಸೀದಿಗಳು ನೆಮ್ಮದಿ ಬಯಸಿ ಪ್ರತಿನಿತ್ಯ ಅಲ್ಲಿಗೆ ಹೋಗುವ ಸಾವಿರಾರು ಆಸ್ತಿಕರಿಗೆ ನೆಲೆ ಒದಗಿಸುತ್ತಿವೆ. ಈ ಮೂಲಕ, ಸಮಾಜದಲ್ಲಿ ಸೌಹಾರ್ದ-ಸಾಮರಸ್ಯ ಪಸರಿಸುತ್ತಾ ಕುವೆಂಪು ಅವರ ಕವಿವಾಣಿಯಂತೆ ‘ಸರ್ವಜನಾಂಗದ ಶಾಂತಿಯ ತೋಟ’ವೆಂದು ಹೆಸರಾದ ಕರ್ನಾಟಕದ ಪರಂಪರೆಯ ಹಿರಿಮೆಯನ್ನು ಎತ್ತಿಹಿಡಿಯುವ ಕಾರ್ಯ ಮಾಡುತ್ತಿದ್ದಾರೆ. ಕೊಲಾಸೊ ಅವರು ನಾಡಿಗೆ ನೀಡುತ್ತಿರುವ ಈ ಮಹತ್ತರ ಕೊಡುಗೆಯನ್ನು ಗೌರವಿಸಿ ‘ಆಮಿ ಆನಿ ಆಮ್ಚಿಂ’ ಸಂಸ್ಥೆಯ ವತಿಯಿಂದ ಸಮಾಜದ ಸೌಹಾರ್ದ-ಸಾಮರಸ್ಯಕ್ಕಾಗಿ ಕಾರ್ಯಶೀಲರಾಗಿರುವವರನ್ನು ಗುರುತಿಸಿ ಗೌರವಿಸುವ ಧ್ಯೇಯದಿಂದ “ಡಾ. ರೊನಾಲ್ಡ್ ಕೊಲಾಸೊ ಸಾಮರಸ್ಯ ಪ್ರಶಸ್ತಿ” ಸ್ಥಾಪಿಸಲಾಗಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು 3 ಲಕ್ಷ ನಗದು ಪುರಸ್ಕಾರ ಒಳಗೊಂಡಿದೆ.

ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರಿಗೆ ಚೊಚ್ಚಲ ಪುರಸ್ಕಾರ:

ಈ ಮೊತ್ತಮೊದಲ ಪ್ರಶಸ್ತಿಯನ್ನು ಶ್ರೀ ತರಳಬಾಳು ಪೀಠದ ಸಾಣೆಹಳ್ಳಿ ಶಾಖಾಮಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಗೆ ಪ್ರದಾನ ಮಾಡಲಾಗುತ್ತಿದೆ. ರಾಣೆಬೆನ್ನೂರು ತಾಲ್ಲೂಕಿನ ಹೆಡಿಯಾಲ ಎಂಬ ಗ್ರಾಮದಲ್ಲಿ ಹುಟ್ಟಿ, ತತ್ತ್ವಶಾಸ್ತ್ರ ಎಂ.ಎ ವ್ಯಾಸಂಗ ಮಾಡಿರುವ ಸ್ವಾಮೀಜಿಗಳು ಸಮಾಜಸೇವೆ ಹಾಗೂ ಅಧ್ಯಾತ್ಮದ ಸಮನ್ವಯಕಾರರು; ಕಲೆ, ಸಾಹಿತ್ಯ, ಸಂಗೀತ, ನಾಟಕ, ಬರಹಗಳನ್ನು ಸಿದ್ಧಿಸಿಕೊಂಡ ಮಹಾಪುರುಷರು; ಶಿವಸಂಚಾರದ ಶಿವಶಿಲ್ಪಿಗಳು; ಪರಿಸರ ಪ್ರಿಯರು, ಅರಿವಿನ ದಿಗಂತ ವಿಸ್ತರಿಸುತ್ತಿರುವ ರೂವಾರಿಗಳು; ಜನರ ನಡುವೆ ಪ್ರೀತಿಯ ಹಂದರ ಕಟ್ಟುತ್ತಿರುವವರು; ಸಾಣೆಹಳ್ಳಿ ಎಂಬ ಗ್ರಾಮವನ್ನು ನಾಡಿನ ಸಾಂಸ್ಕೃತಿಕ ಕೇಂದ್ರವಾಗಿಸಿರುವ ಮಾರ್ಗದರ್ಶಿಗಳು; ಹತ್ತು ಹಲವು ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಸೌಹಾರ್ದ, ಸಾಮರಸ್ಯ, ಸಹಬಾಳ್ವೆ ಮೂಡಿಸಲು ತನು ಮನ ಧನ ಮುಡಿಪಾಗಿರಿಸಿರುವ ದಾರ್ಶನಿಕರು.

ಗಣ್ಯರ ಉಪಸ್ಥಿತಿ:

ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾದೊ, ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಮಳಿಗೆಗಳ ವ್ಯವಸ್ಥೆ ಇರಲಿದ್ದು, ವಿವಿಧ ಮನರಂಜನೆ ಚಟುವಟಿಕೆಗಳು ಹಾಗೂ ಸ್ಪರ್ಧೆಗಳು ಕೂಡ ನಡೆಯಲಿವೆ. ಪ್ರವೇಶ ಉಚಿತ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article