
ರೋಮ್ನ ಕ್ರೈಸ್ತ ಸಂಘಟನೆಗಳಿಂದ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ
ಮಂಗಳೂರು: ಶತಮಾನಗಳ ಹಿಂದೆ ಕ್ರೈಸ್ತರು ಭಾರತದ ಗ್ರಾಮೀಣ ಭಾಗದಲ್ಲಿ ಶಾಲೆಗಳ ಸ್ಥಾಪನೆಗೆದು ಸಮಾಜದ ಒಳಿತಿಗಾಗಿ ತಮ್ಮ ಸೇವೆಯನ್ನು ನೀಡಿ ಜನಸಾಮಾನ್ಯರ ಬದುಕನ್ನು ಹಸನುಗೊಳಿಸಿದ್ದರು. ಕ್ರೈಸ್ತರ ಪ್ರಮುಖ ಧಾರ್ಮಿಕ ಕೇಂದ್ರವಾದ ರೋಮ್ನಲ್ಲಿ ನೀವು ಪಡೆಯುವ ಉನ್ನತ ಶಿಕ್ಷಣ ಮತ್ತು ನಿಮ್ಮ ಸೇವಾ ಮನೋಭಾವ, ಕರ್ನಾಟಕದ ಗ್ರಾಮೀಣ ಭಾಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಲು ನಿಮಗೆ ಪ್ರೇರಣೆಯಾಗಲಿ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಇಟಲಿಯ ರೋಮ್ನಲ್ಲಿರುವ ಕರ್ನಾಟಕ ಮೂಲದ ಕ್ರೈಸ್ತ ಸಂಘಟನೆಗಳ ಸದಸ್ಯರಿಗೆ ಕರೆ ನೀಡಿದರು.
ಅಂತರ್ ರಾಷ್ಟ್ರೀಯ ಅಂತರ್ ಧರ್ಮೀಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರೋಮ್ಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಸಂತ ಪೀಟರ್ ಪೊಂತಿಫಿಕಾಲ್ ಕೊಲೆಜ್ನಲ್ಲಿ ‘ಕೊಂಕಣಿ ಕುಟಾಮ್ ರೋಮ್’ ಮತ್ತು ‘ಕನ್ನಡಿಗರ ಒಕ್ಕೂಟ, ರೋಮ್’ ಇವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿದ್ದರು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಫಾದರ್ ಜಿಲ್ ಡಿ’ಸೋಜಾ, ಯು.ಟಿ. ಖಾದರ್ ಅವರ ಸೇವಾ ಸಾಧನೆಯನ್ನು ವಿವರಿಸಿದರು. ಫಾದರ್ ಜೋವಿನ್ ಸಿಕ್ವೆರಾರವರು ಕೊಂಕಣಿ ಸಂಘಟನೆ ಮತ್ತು ಫಾದರ್ ರಿಚಾರ್ಡ್ ಕನ್ನಡ ಸಂಘಟನೆಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಸಂತ ಪೀಟರ್ ಪೊಂತಿಫಿಕಾಲ್ ಕೊಲೆಜ್ನ ರೆಕ್ಟರ್ ಫಾದರ್ ಜೋಸ್ ತಮ್ಮ ಸಂದೇಶ ನೀಡಿ ಶುಭ ಹಾರೈಸಿದರು. ಉಭಯ ಸಂಘಟನೆಗಳ ಪರವಾಗಿ ಖಾದರ್ ಅವರನ್ನು ಸನ್ಮಾನಿಸಲಾಯಿತು.
ಫಾದರ್ ಸೆಬಾಸ್ಟಿಯನ್ ಪ್ರಾರ್ಥನಾವಿಧಿ ನೆರವೇರಿಸಿದರು. ಕಾರ್ಯಕ್ರಮದ ಸಂಯೋಜಕ ಫಾದರ್ ಲೋರೆನ್ಸ್ ನೊರೊನ್ಹಾ ಸ್ವಾಗತಿಸಿದರು. ಸಹ-ಸಂಯೋಜಕಿ ವ್ಯಾಟಿಕನ್ ಸಂವಹನ ವಿಭಾಗದ ಧರ್ಮಭಗಿನಿ ಸಿಸ್ಟರ್ ಕಾರ್ಮೆಲ್ ವಂದಿಸಿ, ಫಾದರ್ ರೊಯ್ಸನ್ ಫೆರ್ನಾಂಡಿಸ್, ಹಿರ್ಗಾನ ಕಾರ್ಯಕ್ರಮವನ್ನು ನಿರ್ವಹಸಿದರು.