
ಉಳ್ಳಾಲ ಸಂವಿಧಾನಕ್ಕೆ ಮಹತ್ವದ ಸ್ಥಾನ ಇದೆ: ಯು.ಟಿ. ಖಾದರ್
ಭಾರತ ಸಂವಿಧಾನ ಅಮೃತ ಮಹೋತ್ಸವ 75ನೇ ಸಂಭ್ರಮದ ಉಪನ್ಯಾಸ
ಮಂಗಳೂರು: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಬ್ಬಂಟಿಯಾಗಿ ನಿರ್ಭಯವಾಗಿ ಓಡಾಡಲು ಅಂಬೇಡ್ಕರ್ ಅವರು ಬರೆದ ಸಂವಿಧಾನ ಕಾರಣವೇ ಹೊರತು ಸರ್ಕಾರವಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕು ಇದೆ. ಈ ವಿಚಾರ ವಿದ್ಯಾರ್ಥಿಗಳಿಗೂ ಗೊತ್ತಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಅವರು ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಉಳ್ಳಾಲ ನಗರ ಸಭೆ ಕೌನ್ಸಿಲ್ ಹಾಲ್ನಲ್ಲಿ ಸೋಮವಾರ ಸಂಜೆ ನಡೆದ ಭಾರತ ಸಂವಿಧಾನ ಅಮೃತ ಮಹೋತ್ಸವ 75ನೇ ಸಂಭ್ರಮದ ಉಪನ್ಯಾಸ ಹಾಗೂ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನಕ್ಕೆ ಸಂಬಂಧಿಸಿದಂತೆ ಬಹಳಷ್ಟು ಬಹಿರಂಗ ಚರ್ಚೆ ನಡೆದಿದೆ. ಈ ಬಹಿರಂಗ ಚರ್ಚೆ, ಸಭೆ ಹಾಗೂ ಸಂವಿಧಾನ ಗ್ರಂಥವನ್ನು ಅಧ್ಯಯನ ಮಾಡಿದರೆ ಮಾತ್ರ ಈವಿಚಾರ ತಿಳಿದು ಕೊಳ್ಳಲು ಸಾಧ್ಯ ಎಂದು ಹೇಳಿದರು.
ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ. ಬಿ.ಕೆ. ರವೀಂದ್ರ ಮಾತನಾಡಿ, ನಮಗೆ ಎಲ್ಲಾ ಭಾಷೆ ಜನಾಂಗ ಬೇಕು. ನಮಗೆ ಆ ಭಾಷೆ ಬೇಕು, ಈ ಭಾಷೆ ಬೇಕು ಎಂದು ಹೇಳಬಾರದು. ಭಿನ್ನತೆ ಇರಬಾರದು. ಸಂವಿಧಾನ ಅದನ್ನೇ ಹೇಳುತ್ತಿದೆ. ಸಂವಿಧಾನ ಎಲ್ಲಾ ರಾಷ್ಟ್ರಗಳಲ್ಲೂ ಇದೆ. ಈ ಸಂವಿಧಾನ ಬರಲು ಕಾರಣ ಕ್ರಾಂತಿಯಾಗಿದೆ. ಇದರಲ್ಲಿ ಎಲ್ಲಾ ಧರ್ಮಗಳ, ಎಲ್ಲಾ ಧರ್ಮದ ಗ್ರಂಥಗಳ ವಿಚಾರ ಇದೆ. ಎಲ್ಲದಕ್ಕೂ ಪರಿಹಾರ ಕೂಡ ಇದೆ ಎಂದರು.
ನಗರಸಭೆ ಅಧ್ಯಕ್ಷೆ ಶಶಿಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾಗತ ಅಧ್ಯಕ್ಷ ಮಾಜಿ ಶಾಸಕ ಕೆ. ಜಯರಾಮ್ ಶೆಟ್ಟಿ ಅವರು, ಸಂವಿಧಾನದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಳ್ಳಾಲ ನಗರ ಸಭೆ ಅಧ್ಯಕ್ಷೆ ಕೆ. ಶಶಿಕಲಾ, ಉಪಾಧ್ಯಕ್ಷೆ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ಸೋಮೇಶ್ವರ ಪುರಸಭೆ ಅಧ್ಯಕ್ಷೆ ಕಮಲ, ಉಪಾಧ್ಯಕ್ಷ ರವಿಶಂಕರ್, ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ನಗರ ಸಭೆ ಪೌರಾಯುಕ್ತ ಮತಡಿ, ವೀರ ರಾಣಿ ಅಬ್ಬಕ್ಕ ಉತ್ಸವ ಗೌರವ ಉಪಾಧ್ಯಕ್ಷ ಹೈದರ್ ಪರ್ತೀಪ್ಪಾಡಿ, ಸದಾನಂದ ಬಂಗೇರ, ಉಪಾಧ್ಯಕ್ಷ ದೇವಕಿ ಆರ್ ಉಳ್ಳಾಲ,
ಕೆಎಂಕೆ ಮಂಜನಾಡಿ, ಆಲಿಯಬ್ಬ ಹುಸೇನ್ ಉಪಸ್ಥಿತರಿದ್ದರು.
ದಿನಕರ್ ಉಳ್ಳಾಲ ಸ್ವಾಗತಿಸಿ, ಧನಲಕ್ಷ್ಮಿಗಟ್ಟಿ ಕಾರ್ಯಕ್ರಮ ನಿರೂಪಿಸಿದರು.