
ಐವನ್ ಡಿಸೋಜ ನೇತೃತ್ವದಲ್ಲಿ 10ನೇ ವರ್ಷದ ಸರ್ವ ಧರ್ಮ ಕ್ರಿಸ್ಮಸ್ ಸಂಭ್ರಮಾಚರಣೆ
ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ 10ನೇ ವರ್ಷದ ಸರ್ವ ಧರ್ಮ ಕ್ರಿಸ್ಮಸ್ ಸಂಭ್ರಮಾಚರಣೆ, ಕ್ರಿಸ್ಮಸ್ ಕ್ಯಾರಲ್ ಸಂಗೀತ ಸ್ಪರ್ಧೆ ಡಿ.23ರಂದು ಉಳ್ಳಾಲ ಸೇತುವೆ ಬಳಿಯ ಆಡಂಕುದ್ರುವಿನ ಸೀ-ಬಾಂಕ್ವಿಟ್ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ 2.30ರಿಂದ ‘ಕ್ಯಾರಲ್ ಸಂಗೀತ ಸ್ಪರ್ಧೆ-2019’ ಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 6ಕ್ಕೆ ಸರ್ವ ಧರ್ಮಗಳ ಕ್ರಿಸ್ಮಸ್ ಸಂಗಮದ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಂಗಳೂರು ಬಿಷಪ್ ರೆ.ಡಾ. ಪೀಟರ್ ಪಾವ್ಲ್ ಸಲ್ದಾನ ಉದ್ಘಾಟಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕ ನಾಗೇಂದ್ರ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ, ಶಾಂತಿ ಪ್ರಕಾಶನದ ಆಡಳಿತ ನಿರ್ದೇಶಕ ಮೊಹಮ್ಮದ್ ಕುಂಞಿ, ಶ್ರೀ ಗುರು ಸಿಂಗ್ ಸಭಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಸರ್ದಾರ್ ಇಕ್ಬಾಲ್ ಸಿಂಗ್ ರಾಥೋರ್, ಪೆರ್ಮನ್ನೂರಿನ ಸೈಂಟ್ ಸೆಬೆಸ್ಟಿಯನ್ ಚರ್ಚಿನ ಧರ್ಮಗುರು ರೆ.ಫಾ. ಸಿಪ್ರಿಯನ್ ಪಿಂಟೊ ಕ್ರಿಸ್ಮಸ್ ಸಂದೇಶ ನೀಡಲಿದ್ದಾರೆ ಎಂದರು.
ಕ್ರಿಸ್ಮಸ್ ಸೌಹಾರ್ದದ ಅಂಗವಾಗಿ ‘ಕ್ಯಾರಲ್ ಸಂಗೀತ ಸ್ಪರ್ಧೆ’, ಏಕವ್ಯಕ್ತಿ ಗಾಯನ (ಸೋಲೊ) ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಬಳಿಕ ಕ್ರಿಸ್ಮಸ್ ಸಹಭೋಜನ ಏರ್ಪಡಿಸಲಾಗಿದೆ ಎಂದರು.
ಕ್ಯಾರಲ್ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಪ್ರಥಮ 25 ಸಾವಿರ ರೂ.., ದ್ವಿತೀಯ 15 ಸಾವಿರ ರೂ. ಮತ್ತು ತೃತೀಯ 10 ಸಾವಿರ ರೂ., ಏಕವ್ಯಕ್ತಿ ಸಂಗೀತ ಸ್ಪರ್ಧೆಗೆ ಕ್ರಮವಾಗಿ 3 ಸಾವಿರ ರೂ.., 2 ಸಾವಿರ ರೂ.., ತೃತೀಯ 1 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಭಾಗವಹಿಸಿರುವ ಎಲ್ಲ ಸ್ಪರ್ಧಾಳುಗಳಿಗೆ ಪ್ರೋತ್ಸಾಹಕರ ಬಹುಮಾನ ಇದೆ ಎಂದರು.
ಪ್ರಮುಖರಾದ ಎನ್.ಪಿ. ಮನುರಾಜ್, ಭಾಸ್ಕರ್ ರಾವ್, ಸತೀಶ್ ಪೆಂಗಲ್, ಅಲಿಸ್ಟನ್ ಡಿಕುನ್ಹಾ, ಮೀನಾ ಟೆಲ್ಲಿಸ್, ಅಮರನಾಥ್ ಮತ್ತಿತರರಿದ್ದರು.