ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಸಮರ್ಪಣಾಭಾವವನ್ನು ಬೆಳಸಿಕೊಳ್ಳಬೇಕು: ಡಾ. ಸ್ಕಂದಮೂರ್ತಿ
‘39ನೇ ಎಕ್ಸ್ಪರ್ಟ್ ಡೆ’ ಉದ್ಘಾಟನಾ ಸಮಾರಂಭ
ಮಂಗಳೂರು: ವಿದ್ಯಾರ್ಥಿಗಳು ತಮ್ಮ ಗುರಿಗಳಲ್ಲಿ ಬದ್ಧತೆ ಮತ್ತು ಸ್ಪಷ್ಟತೆಯನ್ನು ಹೊಂದಿರಬೇಕು. ಪರಿಶ್ರಮದೊಂದಿಗೆ ಕೆಲಸ ಮಾಡಿದರೆ ಫಲಿತಾಂಶ ತಾನಾಗಿ ಲಭಿಸುತ್ತದೆ. ಯಾವುದೇ ಕ್ಷೇತ್ರವನ್ನು ನಾವು ಆಯ್ಕೆ ಮಾಡಿದರು ಪರಿಶ್ರಮವಿಲ್ಲದೆ ಯಶಸ್ಸು, ನೆಮ್ಮದಿಯ ಬದುಕನ್ನು ಪಡೆಯಲು ಖಂಡಿತ ಸಾಧ್ಯವಿಲ್ಲ ಎಂದು ಎಕ್ಸ್ಪರ್ಟ್ ಕಾಲೇಜಿನ ಹಳೆ ವಿದ್ಯಾರ್ಥಿ ನ್ಯೂರೋಸರ್ಜನ್ ಡಾ. ಸ್ಕಂದ ಮೂರ್ತಿ ಹೇಳಿದರು.
ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ದಿನಾಚರಣೆ ‘ಎಕ್ಸ್ಪರ್ಟ್ ಡೆ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಡಿ.19 ರಂದು ಬೆಳಗ್ಗೆ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜರಗಿತು. ‘ಎಕ್ಸ್ಪರ್ಟ್ ಡೆ’ಯ ಸಾಂಸ್ಕೃತಿಕ ಹಾಗೂ ಸ್ಪರ್ಧಾ ಕಾರ್ಯಕ್ರಮವನ್ನು ಡಾ. ಸ್ಕಂದ ಮೂರ್ತಿ ಅವರು ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹಾಗೂ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ. ಎನ್. ನಾಯಕ್ ವಿದ್ಯಾರ್ಥಿಗಳಿಗೆ ಕಾಲೇಜಿನ ವಾರ್ಷಿಕೋತ್ಸವದ ಕುರಿತಾಗಿ ಶುಭ ಹಾರೈಸಿದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ. ನಾಯಕ್, ಹಳೆ ವಿದ್ಯಾರ್ಥಿ ಡಾ. ಅನುಷಾ, ಕಾರ್ಯಕ್ರಮ ಸಂಯೋಜಕ ಉಪನ್ಯಾಸಕ ಭರತ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಅವರು ಸ್ವಾಗತಿಸಿದರು. ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ತೃಷಾ ಎಸ್. ಕಾರ್ಯಕ್ರಮ ನಿರೂಪಿಸಿದರು.
‘ಎಕ್ಸ್ಪರ್ಟ್ ಡೆ’ ಉದ್ಘಾಟನಾ ಸಮಾರಂಭದ ಬಳಿಕ ವಿದ್ಯಾರ್ಥಿಗಳಿಗೆ ಸುಮಾರು 15ಕ್ಕೂ ಹೆಚ್ಚು ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂತಸಗೊಂಡರು.
ಶೈಕ್ಷಣಿಕ ಸಾಲಿನ ಬಹುಮಾನ ವಿತರಣಾ ಸಮಾರಂಭವು ಲೆಕ್ಕಪರಿಶೋಧಕರಾದ ಸಿಎ. ಎಂ ಜಗನ್ನಾಥ್ ಕಾಮತ್ ಅವರಿಂದ ನೆರವೇರಿತು. ಶೈಕ್ಷಣಿಕ ಸಾಲಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಹುಮಾನವನ್ನು ಈ ಸಂದರ್ಭದಲ್ಲಿ ನೀಡಲಾಯಿತು.