
ಮಗುಚಿಬಿದ್ದ ನಾಡದೋಣಿ: ಮೀನುಗಾರರು ಪಾರು
ಮಂಗಳೂರು: ಸಮುದ್ರದ ಅಲೆಗಳ ಅಬ್ಬರಕ್ಕೆ ಗಿಲ್ನೆಟ್ ನಾಡದೋಣಿ ಮಗುಚಿ ಬಿದ್ದಿದ್ದು, ಇದರಿಂದ ದೋಣಿಯಲ್ಲಿದ್ದ ಮೂವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೀನುಗಾರಿಕೆ ನಡೆಸಿ ವಾಪಾಸ್ ಬರುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ತೊಕ್ಕೊಟ್ಟು ಸಮೀಪದ ಪೆರ್ಮನ್ನೂರು ಗ್ರಾಮದ ಕಲ್ಲಾಪು ನಿವಾಸಿ ಮೊಯಿದ್ದೀನ್ ಎಂಬವರು ಕ್ರಿಸ್ತಿಯಾ ಗೋರ್ಬನ್ ನವಾಝ್ ಹೆಸರಿನ ತಮ್ಮದೇ ಆದ ಗಿಲ್ನೆಟ್ ನಾಡದೋಣಿಯಲ್ಲಿ ಮೀನು ಗಾರಿಕೆ ನಡೆಸುತ್ತಿದ್ದು, ಅವರು ಡಿ.1ರಂದು ಬೆಳಗ್ಗೆ 4 ಗಂಟೆ ವೇಳೆಗೆ ಮಹಮ್ಮದ್ ಅಮೀರ್ ಸುಹೈಲ್, ಅಬ್ದುಲ್ ಹಮೀದ್ ಮುಡಿಪೊಡಿ ಎಂಬವರ ಜೊತೆ ಉಳ್ಳಾಲದ ಕೋಟೆಪುರದಿಂದ ಅಳಿವೆಬಾಗಿಲು ಮುಖಾಂತರ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸಿ ಹಳೆಬಂದರು ಮೀನುಗಾರಿಕೆ ಧಕ್ಕೆಗೆ ವಾಪಾಸು ಬರುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅರಬಿ ಸಮುದ್ರದ ಸುಮಾರು ೫ ನಾಟಿಕಲ್ ಮೈಲು ದೂರದಲ್ಲಿದ್ದಾಗ ವಿಪರೀತ ಗಾಳಿಯಿಂದಾಗಿ ಸಮುದ್ರದ ಅಲೆಗಳು ಜೋರಾಗಿದ್ದವು. ಇದರ ಪರಿಣಾಮವಾಗಿ ನಾಡದೋಣಿ ಮಗುಚಿ ಬಿದ್ದಿದೆ.
ಈ ವೇಳೆ ದೋಣಿ ಚಾಲನೆ ಮಾಡುತ್ತಿದ್ದ ಮೊಯಿದ್ದೀನ್ ಹಾಗೂ ಇಬ್ಬರು ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದಾರೆ. ಬಳಿಕ ಅದು ಈಜಿ ದೋಣಿಯನ್ನು ಯಥಾಸ್ಥಿತಿಗೆ ತಂದು ಸುರಕ್ಷಿತವಾಗಿ ದಡ ಸೇರಿದ್ದಾರೆ. ಈ ಘಟನೆಯಲ್ಲಿ 1.25 ಲಕ್ಷ ರೂ. ಮೌಲ್ಯದ ಮೀನಿನ ಬಲೆ ಹಾಗೂ ದೋಣಿಯಲ್ಲಿದ್ದ ಸುಮಾರು 35 ಸಾವಿರ ರೂ. ಮೌಲ್ಯದ ವಿವಿಧ ರೀತಿಯ ಮೀನುಗಳು ಸಮುದ್ರ ಪಾಲಾಗಿದ್ದು ಒಟ್ಟು 1.60 ಲಕ್ಷ ರೂ. ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ತಣ್ಣೀರುಬಾವಿ ಬೆಂಗ್ರೆ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.