ಕುಬೆವೂರು ರೈಲ್ವೇ ಮೇಲ್ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕೆ ಇಳಿದ ಟಿಪ್ಪರ್
ಮುಲ್ಕಿ: ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೇ ಮೇಲ್ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ರಸ್ತೆ ಬದಿಯ ಬಾರಿ ಗಾತ್ರದ ಹೊಂಡಕ್ಕೆ ಇಳಿದಿದ್ದು ಭಾರೀ ಅಪಾಯ ತಪ್ಪಿದೆ.
ಕಿನ್ನಿಗೋಳಿ ಕಡೆಯಿಂದ ಮುಲ್ಕಿ ಕಡೆಗೆ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ಗೆ ಕುಬೆವೂರು ರೈಲ್ವೇ ಮೇಲ್ಸೇತುವೆ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಅಡ್ಡ ಬಂದಿದ್ದು ಅಪಘಾತ ತಪ್ಪಿಸಲು ಚಾಲಕ ಯತ್ನಿಸಿದಾಗ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಮಾರು 20 ಅಡಿ ಆಳದ ಹೊಂಡಕ್ಕೆ ಬೀಳುವುದರಲ್ಲಿ ಇದ್ದು ಮರವೊಂದು ಅಡ್ಡ ನಿಂತ ಕಾರಣ ಟಿಪ್ಪರ್ ಸಿಲುಕಿಕೊಂಡು ಭಾರಿ ಅಪಾಯ ತಪ್ಪಿದೆ.
ಅಪಘಾತದಿಂದ ಕೆಲವು ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಟಿಪ್ಪರಲ್ಲಿ ಅಕ್ರಮವಾಗಿ ಹೊಯ್ಗೆ ಸಾಗಾಟ ನಡೆಯುತ್ತಿದ್ದು ಸಾಗಾಟ ಮಾಡುವವರು ತರಾತುರಿಯಲ್ಲಿ ಬೇರೊಂದು ಟಿಪ್ಪರ್ ಅನ್ನು ಸ್ಥಳಕ್ಕೆ ಕರೆಸಿ ಹೊಯ್ಗೆ ತೆರವುಗೊಳಿಸಿ ಕ್ರೇನ್ ಮೂಲಕ ಟಿಪ್ಪರನ್ನು ತೆರವುಗೊಳಿಸಲಾಯಿತು.