ಮಲ್ಪೆ-ಆದಿವುಡುಪಿ ಹೆದ್ದಾರಿ ಕಾಮಗಾರಿ: ಪರಿಹಾರ ಮೊತ್ತ ಜಮೆ: ಯಶಪಾಲ್ ಸುವರ್ಣ
Sunday, December 22, 2024
ಉಡುಪಿ: ಆದಿವುಡುಪಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ 169ಎ ಅಭಿವೃದ್ಧಿ ಕಾಮಗಾರಿಗಾಗಿ ಭೂಸ್ವಾಧೀನಗೊಂಡಿರುವ ಜಾಗಗಳ ಪರಿಹಾರ ಮೊತ್ತಕ್ಕಾಗಿ ದಾಖಲೆ ಸಲ್ಲಿಸಿದ 24 ಭೂ ಮಾಲೀಕರಿಗೆ 2.83 ಕೋಟಿ ಪರಿಹಾರ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.
ಮಲ್ಪೆ-ಆದಿವುಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ 214 ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದ್ದು, ಅದರಲ್ಲಿ 19 ಸರಕಾರಿ ಜಾಗವಾಗಿದೆ. ಉಳಿದ 195 ಜಾಗಗಳ ಪೈಕಿ 103 ಕ್ಲೈಮ್ಗಳನ್ನು ಸ್ವೀಕರಿಸಲಾಗಿದ್ದು, ಪರಿಹಾರ ಪಾವತಿಗೆ ಕ್ರಮವಹಿಸಲಾಗಿದೆ. 44 ಭೂ ಮಾಲೀಕರು ದಾಖಲೆಗಳನ್ನು ಸಲ್ಲಿಸಲು ಬಾಕಿಯಿದೆ.
ನಿಯಮಾನುಸಾರ 214 ಪ್ರಕರಣಗಳ ಎಲ್ಲಾ ಭೂಸ್ವಾದೀನ ಪ್ರಕ್ರಿಯೆ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಪರಿಹಾರ ಮೊತ್ತ ಪಡೆಯಲು ಬಾಕಿಯಿರುವ ಭೂ ಮಾಲೀಕರು ಕೂಡಲೇ ದಾಖಲೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಮಲ್ಪೆ-ಆದಿವುಡುಪಿ ರಾಷ್ಟೀಯ ಹೆದ್ದಾರಿ ಕಾಮಗಾರಿಗೆ ವಿಶೇಷ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿಯ ಜನತೆಯ ಪರವಾಗಿ ವಿಶೇಷ ಧನ್ಯವಾದ ಸಲ್ಲಿಸುವುದಾಗಿ ಯಶಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.