ಗ್ಯಾಸ್ ಸ್ಫೋಟ: ತಾಯಿ, ಮೂವರು ಮಕ್ಕಳಿಗೆ ಗಾಯ
ಉಳ್ಳಾಲ: ಗ್ಯಾಸ್ ಸ್ಫೋಟ ಗೊಂಡ ಪರಿಣಾಮ ಮನೆಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳು ಸುಟ್ಟ ಗಾಯಗಳಿಂದ ಗಂಭೀರ ಗಾಯಗೊಂಡ ಘಟನೆ ಮಂಜನಾಡಿ ಗ್ರಾಮ ವ್ಯಾಪ್ತಿಯ ಕಲ್ಕಟ್ಟ ಸಮೀಪದ ಖಂಡಿಕ ಎಂಬಲ್ಲಿ ನಡೆದಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
ಗಾಯಗೊಂಡವರನ್ನು ತಾಯಿ ಖುಬ್ರಾ ಹಾಗೂ ಮೂವರು ಮಕ್ಕಳಾದ ಮೆಅದಿಯಾ, ಮಝಿಯಾ, ಮಾಯಿದಾ ಎಂದು ಗುರುತಿಸಲಾಗಿದೆ.
ಘಟನೆ ವಿವರ: ಖಂಡಿಕ ನಿವಾಸಿ ಮುತ್ತಲಿಬ್ ಎಂಬವರ ಮನೆಯಲ್ಲಿ ಅವರ ಪತ್ನಿ ಖುಬ್ರ ಮತ್ತು ಮೂವರು ಮಕ್ಕಳು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಮಧ್ಯರಾತ್ರಿ ವೇಳೆ ದೊಡ್ಡ ಸದ್ದು ಕೇಳಿಸಿದೆ. ಮನೆಯೊಳಗೆ ತುಂಬಿಸಿಟ್ಟ ಗ್ಯಾಸ್ ಸೋರಿಕೆ ಆಗಿ ಈ ಘಟನೆ ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ತಾರಸಿ ಮನೆಯ ಮೇಲ್ಭಾಗದ ಸಿಮೆಂಟ್ ಶೀಟ್ನ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದೆ. ಮನೆಯಲ್ಲಿ ಮಲಗಿದ ಕೊಠಡಿ, ಮಂಚ, ಕಪಾಟು, ಬಟ್ಟೆ, ಮನೆಯ ದಾಖಲೆ ಪತ್ರಗಳು, ನಗದು ಹಾಗೂ ಇನ್ನಿತರ ಸಾಮಗ್ರಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕಿಟಕಿ ಬಾಗಿಲು ಹಾನಿಯಾಗಿದೆ. ತಾಯಿ ಮಕ್ಕಳು ಮಲಗಿದ್ದ ಮಂಚ ಸುಟ್ಟು ಕರಕಲಾಗಿವೆ. ಈ ಸಂದರ್ಭ ತಾಯಿ ಜೊತೆ ಮಲಗಿದ್ದ ದೊಡ್ಡ ಮಗಳು ಬಾಗಿಲು ತೆರೆದಿದ್ದು, ತಕ್ಷಣ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ಸ್ಥಳೀಯರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಮಂಜನಾಡಿ ಗ್ರಾಮ ಕಾರಣಿಕ ಚೈತ್ರ, ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ಯಾಸ್ ಸೋರಿಕೆಯಿಂದ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭಿಸಿದೆ. ಅಧಿಕಾರಿಗಳು ಭೇಟಿ ನೀಡಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ಬಗೆ ಪರಿಶೀಲನೆ ನಡೆಸಿ ಘಟನೆಯಿಂದ ಆಗಿರುವ ನಷ್ಟದ ಬಗ್ಗೆ ಕೂಲಂಕಷವಾಗಿ ವರದಿ ಸಂಗ್ರಹಿಸಿ ಮುಖ್ಯಮಂತ್ರಿ ಪರಿಹಾರ ಒದಗಿಸಿ ಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು ತಿಳಿಸಿದರು.