ಬಸ್ರೂರಿನ ಪ್ರಾಚೀನ ತುಳುವೇಶ್ವರ ದೇವಾಲಯ ಜೀರ್ಣೋದ್ದಾರ ಸಂಕಲ್ಪ: ತಾಂಬೂಲ ಪ್ರಶ್ನೆ

ಬಸ್ರೂರಿನ ಪ್ರಾಚೀನ ತುಳುವೇಶ್ವರ ದೇವಾಲಯ ಜೀರ್ಣೋದ್ದಾರ ಸಂಕಲ್ಪ: ತಾಂಬೂಲ ಪ್ರಶ್ನೆ


ಕುಂದಾಪುರ: ತುಳುನಾಡಿನ ಪ್ರಾತ್ಯವಾಗಿದ್ದ ಬಸ್ರೂರಿನಲ್ಲಿನ, ತುಳುನಾಡಿನ ಆರಾಧ್ಯ ದೇವರಾದ ತುಳುವೇಶ್ವರ ದೇವಸ್ಥಾನಕ್ಕೆ ಹಲವಾರು ಸಾವಿರ ವರ್ಷಗಳ ಇತಿಹಾಸ ಇದೆ. ಈಗ ತುಳುವೇಶ್ವರನು ಕುಂದಾಪುರದ ಬಸ್ರೂರಿನ ನೆಲದಲ್ಲಿ ಆಲದ ಮರದ ಪೊಟರೆಯೊಳಗೆ ನೆಲೆ ನಿಂತಿದ್ದಾನೆ. ಪ್ರಕೃತಿಯ ಏರಿಳಿತ, ಜನರ ಅನಾಸ್ಥೆಯೋ,  ಒಂದೊಮ್ಮೆ ಭವ್ಯವಾಗಿದ್ದ ದೇಗುಲ ಇದೀಗ ನಶಿಸಿದೆ. ಹಾಳುಬಿದ್ದ ದೇಗುಲಕ್ಕೆ ಪ್ರಕೃತಿಯೇ ಆವರಣವಾಗಿ, ಗರ್ಭಗುಡಿಯಾಗಿ ಆಶ್ರಯ ನೀಡಿದೆ. ಈ ದೇವಸ್ಥಾನದ ಜೀರ್ಣ ಅವಸ್ಥೆಯನ್ನು ಕಂಡು ತುಳುವರ್ಲ್ಡ್ ಫೌಂಡೇಶನ್ ಜೀರ್ಣೋದ್ಧಾರದ ಬಗ್ಗೆ ಚಿಂತಿಸಲು ಒಂದು ದಿನದ ತಾಂಬೂಲ ಪ್ರಶ್ನೆಯನ್ನು ನೆರವೇರಿಸಲು ಅಣಿಯಾಗಿದೆ. 


ಧಾರ್ಮಿಕ ಮುಂದಾಳು ಬಸ್ರೂರಿನ ಅಪ್ಪಣ್ಣ ಹೆಗ್ಡೆಯವರ ಮಾರ್ಗದರ್ಶನದಲ್ಲಿ ತುಳುವೇಶ್ವರ ದೇವಸ್ಥಾನದ ಅರ್ಚಕ ಮಹೇಶ್ ಕಿಣಿಯವರ ಸಂಚಾಲಕತ್ವದಲ್ಲಿ, ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರಿಂದ ಪ್ರಶ್ನೆ ಚಿಂತನೆ ನಡೆಯಲಿದೆ. 

ಮಾರ್ಚ್ 23ರಂದು ಬೆಳಿಗ್ಗೆ 10 ಗಂಟೆಯಿಂದ ಬಸ್ರೂರಿನ ತುಳುವೇಶ್ವರ ದೇವಸ್ಥಾನದ ಪರಿಸರದಲ್ಲಿ ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ಆಸಕ್ತರು, ಭಕ್ತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸುವಂತೆ ಆಯೋಜಕರು ವಿನಂತಿಸಿದ್ದಾರೆ. 


ದೇವಾಲಯದ ಹಿನ್ನೋಟ:

ತುಳುನಾಡು ಎಂದು ಕರೆಯಲ್ಪಡುವ ಕಾಸರಗೋಡಿನಿಂದ ಬೈಂದೂರುವರೆಗಿನ ಕಡಲ ಕಿನಾರೆ ಪ್ರದೇಶದ ತುಳು ಭಾಷಿಗರಿಗೆ ಈ ದೇವಾಲಯವೇ ಅಧಿದೇವತೆಯಾಗಿದೆ. ಶತ ಶತ ಮಾನಗಳ ಹಿಂದೆ ತುಳುವೇಶ್ವರನಿಗೆ ದೇವಾಲಯ ಇತ್ತು. ಆದರೆ ಕಾಲದ ವಿನಾಶಕ್ಕೆ ಸಿಕ್ಕಿ ಸುಮಾರು 500 ವರ್ಷಗಳ ಹಿಂದೆ ಈ ದೇವಾಲಯವು ಶಿಥಿಲಗೊಂಡಿದೆ. ಇದರ ವಿಶೇಷತೆ ಏನೆಂದರೆ ಯಾವುದೇ ರೀತಿಯ ಮಾನವ ನಿರ್ಮಿತ ಆಲಯ ಇಲ್ಲದೆ ಅನೇಕ ವರ್ಷಗಳ ಹಿಂದೆ ದೇವಾಲಯದ ಗೋಡೆಯ ಬಳಿ ಬೆಳೆದ ಆಲದ ಮರವು ಶಿವಲಿಂಗದ ಸುತ್ತ ಆವರಿಸಿದೆ.

ಭಕ್ತರ ಸಂಕಷ್ಟಗಳಿಗೆ ಶರಣಾಗುವ ಈಶನಿಗೆ ಯಾವುದೇ ರೀತಿಯ ವೈಭೋಗದ ಆಸೆ ಇರುವುದಿಲ್ಲ. ಅದಕ್ಕೆ ತಕ್ಕಂತೆ ಇರುವ ಸನ್ನಿಧಾನವೇ ತುಳುವೇಶ್ವರ. ಈ ಕ್ಷೇತ್ರವು ಉಡುಪಿ ಜಿಲ್ಲೆಯ ಕುಂದಾಪುರದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ  ಬಸ್ರೂರಿನಲ್ಲಿ ತುಳುವರ ಆರಾಧ್ಯ ದೈವ ಪಂಜುರ್ಲಿ ದೈವದ  ಸಂಕೇತವಾದ ವಾರಾಹಿ ನದಿ ತೀರದಲ್ಲಿ ಇದೆ.  

ತುಳುವೇಶ್ವರ ಇತಿಹಾಸ ಕಾಲದಲ್ಲಿ ಸಾಕಷ್ಟು ಪ್ರಸಿದ್ದಿ ಹೊಂದಿದ್ದ ದೇವ ಸನ್ನಿಧಾನವಾಗಿತ್ತು ಎನ್ನಲು ಶಾಸನಾಧಾರಗಳೂ ಇವೆ. ಕ್ರಿಶ 1041ರಂದು ಕೆತ್ತಿಸಲಾದ ಶಾಸನದಲ್ಲಿ ತುಳುವೇಶ್ವರನಿಗೆ ದಾನ ಕೊಟ್ಟ ವಿಷಯವಿದೆ. ಬಸ್ರೂರಿನ ರಾಜ್ಯಪಾಲನಾದ ಬಸವಣ್ಣ ಒಡೆಯನ ಆಳ್ವಿಕೆಯಲ್ಲಿ ಅದೇ ಊರಿನ ಭೂ ಒಡೆತನದ ಪ್ರತಿಷ್ಠಿತ ಮನೆತನದವಳಾದ ತುಳುವಕ್ಕ ಹೆಗ್ಗಡತಿ ಎಂಬುವವಳು ನಿರ್ಮಿಸಿದ್ದ ಧರ್ಮಛತ್ರದ ವೆಚ್ಚಕ್ಕೆ ಭೂಮಿಯಿಂದ ಬರುವ ಆದಾಯವನ್ನು ದಾನ ಮಾಡುತ್ತಿದ್ದುದಲ್ಲದೆ ತುಳುವೇಶ್ವರ ದೇವರಿಗೆ ಮತ್ತು ಮುಳುಲ ದೇವಿಗೆ ದಾನವನ್ನು ಮಾಡುತ್ತಿದ್ದ ವಿಚಾರ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಆಲದ ಮರವೇ ಈ ಶಿವನಿಗೆ ಆಲಯ, ಇದು ತುಳುವರ ಅಧಿದೇವತೆ.

ಬಸ್ರೂರಿನ ನೆಲದಲ್ಲಿ ಶಿವನ ನೆಲೆಯಾಗಿತ್ತು ಎನ್ನಲು ದಾಖಲೆಯಂತೆ ಶಿವನ ಎದುರಲ್ಲಿರುವ ನಂದಿಯ ವಿಗ್ರಹವೇ ಸಾಕ್ಷಿಯಾಗಿದೆ. ಅಲ್ಲದೆ ಮುರಕಲ್ಲಿನಲ್ಲಿ ಕಟ್ಟಿರುವ ಗೋಡೆ, ನಂದಿ ಮಂಟಪದ ಕುರುಹುಗಳು, ನೈವೇದ್ಯ ಶಾಲೆ, ಅವಶೇಷಗಳು, ಹೀಗೆ ಮತ್ತಷ್ಟು ಪ್ರಾಚೀನ ದಾಖಲೆಗಳಿವೆ. ನಂದಿ ವಿಗ್ರಹವು ಅತ್ಯಂತ ಅಪರೂಪದ ಕೆತ್ತನೆಯಿಂದ ಕೂಡಿದೆ. ಇದು ಏಕಶಿಲಾ ವಿಗ್ರಹವಾಗಿದೆ. ಸುಮಾರು 60 ವರ್ಷಗಳ ಹಿಂದೆ ನಿಧಿಯಾಸೆಗೆ ನಂದಿಯ ವಿಗ್ರಹವನ್ನು ಕಬ್ಬಿಣದ ಸಲಾಕೆಯಿಂದ ಪೀಠದಿಂದ ಬೇರ್ಪಡಿಸಲು ಪ್ರಯತ್ನವಾಗಿತ್ತು. ಆದರೆ ನಂದಿಯ ವಿಗ್ರಹವನ್ನು ಬೇರ್ಪಡಿಸುವ ಅವರ ಪ್ರಯತ್ನ ವಿಫಲವಾಯಿತು. ಅಂದಿನ ದಿನ ದಿಂದಲೂ ನಂದಿಯ ಒಂದು ಭಾಗ ವಾಲಿಕೊಂಡಂತೆ ಮತ್ತು ಮೇಲಕ್ಕೆ ಎದ್ದಿರುವ ಹಾಗೆ ಇದೆ.

ಸುಮಾರು 150 ವರ್ಷಗಳ ಹಿಂದೆ ವಿಠಲ ಕಿಣಿ ಎನ್ನುವ ವೈಷ್ಣವ ಸಂಪ್ರದಾಯಸ್ಥ ಮನೆತನಕ್ಕೆ ಸೇರಿದ ವ್ಯಕ್ತಿ ಈ ಶಿವಲಿಂಗವಿದ್ದ ಜಾಗವನ್ನು ಖರೀದಿಸಿದ್ದರು. ಹಾಗೆ ಜಾಗ ಖರೀದಿಸುವಾಗ ಅವರಿಗೆ ಈ ಸ್ಥಳದಲ್ಲಿ ಶಿವಲಿಂಗವಿದೆ ಎನ್ನುವ ವಿಚಾರ ತಿಳಿದಿರಲಿಲ್ಲ. ಆದರೆ ಎಂದು ಶಿವನ ಕಾರಣಿಕ ಶಕ್ತಿ ಗೋಚರವಾಯಿತೋ ಅಂದೇ ವಿಠಲ ಕಿಣಿ ತಾವು ಪ್ರತಿನಿತ್ಯ ಆ ಪರಮೇಶ್ವರನಿಗೆ ನಿತ್ಯ ಪೂಜೆ ಸಲ್ಲಿಸಲು ಪ್ರಾರಂಭಿಸುತ್ತಾರೆ. ಅಂದಿನಿಂದ ಇಂದಿನವರೆಗೆ ವಿಠಲ ಕಿಣಿ ಮನೆತನದವರೇ ಈ ತುಳುವೇಶ್ವರನಿಗೆ ನಿತ್ಯ ನೈಮಿತ್ತಿಕ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ಈಗ ಶಿವನ ಪೂಜಾ ಕೈಂಕರ್ಯ ನಡೆಸುತ್ತಿರುವ ಕುಟುಂಬಕ್ಕೆ ಶಿವನ ಈ ಪ್ರಾಚೀನ ಸನ್ನಿಧಾನವನ್ನು ಜೀರ್ಣೋದ್ದಾರ ಮಾಡಬೇಕೆಂದು ಬಯಕೆ ಇದೆ. ಆದರೆ ಹಲವು ಕಡೆ ಪ್ರಶ್ನೆ, ದರ್ಶನಾದಿಗಳನ್ನು ನಡೆಸಿ ಕೇಳಲಾಗಿ ಈ ದೇವಾಲಯ ಜೀರ್ಣೋದ್ದಾರಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ, ಯೋಗಿಯೊಬ್ಬರ ಮೂಲಕ ಈ ದೇವಾಲಯ ಪುನರ್ ಅಭಿವೃದ್ಧಿ ಹೊಂದಲಿದೆ ಎನ್ನುವ ಉತ್ತರ ದೊರಕಿದೆ.

ತುಳುನಾಡಿನ ಬೇರೆಲ್ಲಿಯೂ 'ತುಳುವೇಶ್ವರ' ಎನ್ನುವ ದೇವರ ಸನ್ನಿಧಾನವಿಲ್ಲ. ಹೀಗಾಗಿ ಕಾಸರಗೋಡಿನಿಂದ ಪ್ರಾರಂಭವಾಗಿ ಉಡುಪಿ ಜಿಲ್ಲೆ ಬೈಂದೂರಿನ ತನಕದ ತುಳು ಭಾಷಾ ಪ್ರಾಂತ್ಯಕ್ಕೆ ಈ ಶಿವನು ಅಧಿದೇವತೆಯಾಗಿದ್ದಾನೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ತುಳುವೇಶ್ವರ ದೇವಾಲಯವು ಬಸ್ರೂರಿನಲ್ಲಿ ರುವ 24 ದೇವಾಲಯಗಳಲ್ಲಿ ಒಂದಾಗಿದೆ. ಜೊತೆಗೆ ಶ್ರೀ ನಖರೇಶ್ವರ ದೇವಾಲಯ,  ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ಮತ್ತು ಶ್ರೀ ಮಹಾಲಸಾ ನಾರಾಯಣೀ ದೇವಾಲಯದಂತಹ ಇತರ ಗಮನಾರ್ಹ ದೇವಾಲಯಗಳು ಇಲ್ಲಿವೆ.

ಮೂಲ ತುಳುವೇಶ್ವರ ದೇವಾಲಯವು 5ನೇ ಮತ್ತು 6ನೇ ಶತಮಾನಗಳ ನಡುವೆ ಸ್ಥಾಪಿತವಾಗಿದೆ ಎಂದು ಭಾವಿಸಲಾಗಿದೆ.  ಆದರೆ ಅಸ್ತಿತ್ವದಲ್ಲಿರುವ ಅವಶೇಷಗಳು ಸುಮಾರು 15ನೇ ಶತಮಾನದಷ್ಟು ಹಿಂದಿನವು.

ಈ ದೇವಾಲಯದ ತುಳುವೇಶ್ವರ ಎಂಬ ಹೆಸರು ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ತುಳುವ ಬುಡಕಟ್ಟು ಜನಾಂಗದವರ ಬಗ್ಗೆ ಸುಳಿವು ನೀಡುತ್ತದೆ. ನಂತರ ಮಂಗಳೂರನ್ನು ಆಳಿದ ಅಳುಪ ರಾಜರು ಈ ಬುಡಕಟ್ಟು ಜನಾಂಗದವರ ಉತ್ತರಾಧಿಕಾರಿಗಳೆಂದು ನಂಬಲಾಗಿದೆ.

ಹಲ್ಮಿಡಿ ಶಾಸನ ಸೇರಿದಂತೆ ಐತಿಹಾಸಿಕ ದಾಖಲೆಗಳು, ಅಳುಪ ರಾಜರು ಪಶುಪತ ಪಂಥದ ಅನುಯಾಯಿಗಳಾಗಿದ್ದರು ಎಂದು ಸೂಚಿಸುತ್ತವೆ. ನಂತರ ಈ ಪ್ರದೇಶದಲ್ಲಿ ಶೈವ ಪಂಥವನ್ನು ಪುನರುಜ್ಜೀವನಗೊಳಿಸಿದ ನಾಥ ಪಂಥಗಳು ಇದನ್ನು ಅನುಸರಿಸಿದವು.

ಇಂದು, ದೇವಾಲಯದ ಗೋಡೆಗಳು ಮತ್ತು ದ್ವಾರವನ್ನು ಒಳಗೊಂಡಿರುವ ಅವಶೇಷಗಳು ದಟ್ಟವಾದ ಸಸ್ಯವರ್ಗದಿಂದ ತುಂಬಿವೆ. ಮುಖ್ಯ ಲಿಂಗವನ್ನು ವೀಕ್ಷಿಸಲು, ಬೇರುಗಳ ದಟ್ಟವಾದ ಪರದೆಯ ಮೂಲಕ ಇಣುಕಿ ನೋಡಬೇಕು.

ಕಾಸರಗೋಡಿನ ಮತ್ತು ಮಂಗಳೂರಿನ ತುಳುವೆರೆ ಆಯನೊ ಕೂಟವು ಈ ನೆಲದಲ್ಲಿ ಹಲವಾರು ಕಾರ್ಯಕ್ರಮ ಗಳಿಗೆ ಸಾಕ್ಷಿಯಾಗಿದೆ. 2015ರಲ್ಲಿ ತುಳುನಾಡ ತಿರ್ಗಾಟ ಎಂಬ ಕಾರ್ಯಕ್ರಮವನ್ನು ತುಳುವೇಶ್ವರನ ಸನ್ನಿಧಿಯಿಂದ ಆರಂಭಿಸಿತ್ತು. 2016 ಬದಿಯಡ್ಕದಲ್ಲಿ ನಡೆದ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದ ಪ್ರಯುಕ್ತ 108 ದಿನಗಳ ರಥಯಾತ್ರೆಗೆ ಇಲ್ಲಿಂದಲೇ ಚಾಲನೆ ನೀಡಲಾಯಿತು. 2017ರಲ್ಲಿ 1 ಲಕ್ಷ ಸಹಿ ಅಭಿಯಾನವನ್ನು ಹಮ್ಮಿಕೊಂಡಿತ್ತು.  ಅಲ್ಲದೆ 2018ರಲ್ಲಿ ಅಪ್ಪಣ್ಣ ಹೆಗ್ಡೆಯವರ ನೇತೃತ್ವದಲ್ಲಿ ಬಸ್ರೂರಿನಲ್ಲಿ ತುಳುನಾಡೋಚ್ಚಯ ಕಾರ್ಯಕ್ರಮಕ್ಕೆ ರೂಪುರೇಷೆ ನೀಡಿತ್ತು.

ಜಗತ್ತಿನ ಏಕೈಕ ತುಳುವೇಶ್ವರನ ಈ ದೇವಸ್ಥಾನಕ್ಕೆ ಹಲವಾರು ಸಾವಿರ ವರ್ಷಗಳ ಇತಿಹಾಸ ಇದೆ. ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಮಾರ್ಗದರ್ಶನದಲ್ಲಿ ತುಳುವೇಶ್ವರ ದೇವಸ್ಥಾನದ ಅರ್ಚಕ ಮಹೇಶ್ ಕಿಣಿಯವರ ಸಂಚಾಲಕತ್ವದಲ್ಲಿ, ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರ ನೇತೃತ್ವದಲ್ಲಿ ಮಾ. 23 ರ ಆದಿತ್ಯವಾರ ಬೆಳಿಗ್ಗೆ 10 ಗಂಟೆಯಿಂದ ಪ್ರಶ್ನಾ ಚಿಂತನೆ ನಡೆಯಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article