
ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯಸ್ಥೆ ಇನ್ನಿಲ್ಲ
ಅಹಮದಾಬಾದ್: ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯಸ್ಥೆ ರಾಜಯೋಗಿನಿ ಡಾ. ದಾದಿ ರತನ್ ಮೋಹಿನಿ (101) ಸೋಮವಾರ ಮಧ್ಯರಾತ್ರಿ ಅವರು ಅಹಮದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
1925ರ ಮಾರ್ಚ್ 25ರಂದು ಸಿಂಧ್ ಪ್ರಾಂತ್ಯದ ಹೈದರಾಬಾದ್ನಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಜನಿಸಿದ ದಾದಿ ರತನ್ ಮೋಹಿನಿ ಚಿಕ್ಕ ವಯಸ್ಸಿನಿಂದಲೇ ಆಧ್ಯಾತ್ಮಿಕತೆಯತ್ತ ಆಕರ್ಷಿತರಾದರು ಮತ್ತು ಬ್ರಹ್ಮಕುಮಾರಿ ಚಳವಳಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ತಮ್ಮ ಜೀವನದ ಕೊನೆಯ ದಿನಗಳವರೆಗೂ ಆಧ್ಯಾತ್ಮಿಕ ಸೇವೆಯಲ್ಲಿ ಸಕ್ರಿಯರಾಗಿದ್ದರು.
ಬ್ರಹ್ಮಕುಮಾರಿ ಸಂಘಟನೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಮೊದಲು, ಅವರು ಯುವತಿಯರಿಗೆ ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಮಾರ್ಗದರ್ಶನ ನೀಡುವ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಕಳೆದ ಕೆಲವು ದಶಕಗಳಲ್ಲಿ, ಅವರು ಸಾವಿರಾರು ಮಹಿಳೆಯರನ್ನು ಪೋಷಿಸುವಲ್ಲಿ ಮತ್ತು ಭಾರತ ಮತ್ತು ವಿದೇಶಗಳಲ್ಲಿ ಸಂಸ್ಥೆಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
1985ರಲ್ಲಿ ಅವರು ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಉತ್ತೇಜಿಸಲು ಆಧ್ಯಾತ್ಮಿಕ ತೀರ್ಥಯಾತ್ರೆಗಳ ಸರಣಿಯನ್ನು ಪ್ರಾರಂಭಿಸಿದರು. 2006ರಲ್ಲಿ ಅವರು 31 ಸಾವಿರ ಕಿ.ಮೀ. ಪ್ರಯಾಣಿಸಿದರು ಮತ್ತು ಅವರ ಜೀವಿತಾವಧಿಯಲ್ಲಿ, ಶಾಂತಿ ಮತ್ತು ಆತ್ಮಸಾಕ್ಷಾತ್ಕಾರದ ಸಂದೇಶವನ್ನು ಪ್ರಸಾರ ಮಾಡಲು ಅವರು 70 ಸಾವಿರ ಕಿ.ಮೀ. ಗಳಿಗಿಂತ ಹೆಚ್ಚು ದೂರ ಕ್ರಮಿಸಿದರು.
ಬ್ರಹ್ಮಕುಮಾರಿ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ಅವರು ಯುವಕರಲ್ಲಿ ಮಾನವೀಯ ಮೌಲ್ಯಗಳು ಮತ್ತು ನೈತಿಕ ಜೀವನವನ್ನು ತುಂಬುವತ್ತ ಗಮನ ಹರಿಸಿದರು. ಅವರ ನಾಯಕತ್ವದಲ್ಲಿ ಭಾರತದಾದ್ಯಂತ 4,600 ಸೇವಾಕೇಂದ್ರಗಳಲ್ಲಿ ೪೬ ಸಾವಿರಕ್ಕೂ ಹೆಚ್ಚು ಸಹೋದರಿಯರಿಗೆ ತರಬೇತಿ ನೀಡಲಾಯಿತು.
ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ರಾಜಸ್ಥಾನದ ರಾಜ್ಯಪಾಲ ಹರಿಬಾಬು ಬಾಗಡೆ, ಮುಖ್ಯಮಂತ್ರಿ ಭಜನಲಾಲ್ ಶರ್ಮಾ, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.