
ಶರವು ಮಹಾಗಣಪತಿ ಮತ್ತು ಶರಭೇಶ್ವರ ದೇವರ ಮಹಾರಥೋತ್ಸವ
ಮಂಗಳೂರು: ಮಂಗಳೂರು ಮಹಾನಗರದ ಹೃದಯಭಾಗದಲ್ಲಿದ್ದು, ನಂಬಿದ ಭಕ್ತರ ಅಭೀಷ್ಟೇಗಳನ್ನು ಸದಾ ಈಡೇರಿಸುವ ದೇವರೆಂದೇ ಪ್ರಸಿದ್ಧಿ ಪಡೆದ ಶರವು ಮಹಾಗಣಪತಿ ಮತ್ತು ಶರಭೇಶ್ವರ ದೇವರ ಮಹಾರಥೋತ್ಸವ ಸಡಗರದಿಂದ ಭಾನುವಾರ ನಡೆಯಿತು.
ಮಾ.30ರಂದು ವೈಭವ ಜಾತ್ರೋತ್ಸವ ಆರಂಭಗೊಂಡಿದ್ದು, ಪ್ರತಿನಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾನುವಾರ ಬೆಳಗ್ಗೆ 10 ಗಂಟೆಗೆ ರಥ ಕಲಶ ನಡೆದ ಬಳಿಕ ಮಧ್ಯಾಹ್ನ 12.15ಕ್ಕೆ ದೇವರ ರಥಾರೋಹಣದ ಬಲಿ ನೆರವೇರಿತು. 12.30ರ ಸುಮಾರು ಭಕ್ತರ ಗೋವಿಂದ, ಜೈಕಾರದೊಂದಿಗೆ ದೇವರು ಮಹಾರಥವೇರಿ, ಮಹಾರಥೋತ್ಸವ ನಡೆಯಿತು. ಈ ಅಪೂರ್ವ ಕ್ಷಣವನ್ನು ಭಕ್ತಾದಿಗಳು ಕಣ್ತುಂಬಿಕೊಂಡರು. ಬಳಿಕ ಭಕ್ತಾದಿಗಳಿಗೆ ಮಹಾಅನ್ನಂಸತರ್ಪಣೆ ನೆರವೇರಿತು. ಅನ್ನಪ್ರಸಾದ ಸ್ವೀಕರಿಸಿದ ಭಕ್ತಾದಿಗಳಲ್ಲಿ ಧನ್ಯತಾ ಭಾವ ಮನೆಮಾಡಿತ್ತು.
ರಾತ್ರಿ 9 ಗಂಟೆಗೆ ದೊಡ್ಡ ರಥೋತ್ಸವ, 10 ಗಂಟೆಗೆ ಮಹಾಪೂಜೆ, ಭೂತಬಲಿ, ಕವಾಟ ಬಂಧನ ನೆರವೇರಿತು. ಈ ಸಂದರ್ಭ ಶರವು ದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರರಾದ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ, ಸುದೇಶ್ ಶಾಸ್ತ್ರಿ, ರಾಹುಲ್ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ 5.30ರಿಂದ ಶರವು ದೇವಸ್ಥಾನದ ಕೆ. ರಾಜನ್ ಮತ್ತು ಬಳಗದವರಿಂದ ನಾಗಸ್ವರ ಮತ್ತು ಸ್ಯಾಕ್ಸೋಫೋನ್ ಕಚೇರಿ, 7ರಿಂದ ಶರಭೇಶ್ವರ ಕೃಪಾಪೋಷಿತ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಇಂದು ಸಂಸ್ಮರಣಾ ಪ್ರಶಸ್ತಿ:
ಏ.7ರಂದು ಸಂಜೆ 6ಕ್ಕೆ ಸಾಂಸ್ಕೃತಿಕೋತ್ಸವ ಸಭಾ ಕಾರ್ಯಕ್ರಮ ಸಮಾರೋಪ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಡೊಂಗರಕೇರಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್ ಶೇಟ್ ನಾಗ್ವೇಕರ್ ಭಾಗವಹಿಸಲಿದ್ದಾರೆ. ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ವೇ.ಮೂ. ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಯವರಿಗೆ ದಿ. ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿ ಪ್ರದಾನ ನಡೆಯಲಿದೆ.