
ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ರೂ.12 ಲಕ್ಷ ಪರಿಹಾರ: ಅಶೋಕ್ ರೈ
ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಕಣಿಯಾರುಮಲೆ ಹರ್ತ್ಯಡ್ಕ ಎಂಬಲ್ಲಿ ಆನೆ ದಾಳಿಯಿಂದ ಮೃತ ಪಟ್ಟ ಸೆಲ್ಲಮ್ಮ ಅವರ ಕುಟುಂಬಕ್ಕೆ ಸರ್ಕಾರದಿಂದ ಅರಣ್ಯ ಇಲಾಖೆಯ ಮೂಲಕ ರೂ.12 ಲಕ್ಷ ಪರಿಹಾರ ನೀಡಲಾಗುವುದು. ಮೃತರ ಪುತ್ರನಿಗೆ ಕೆಎಫ್ಡಿಸಿಯಲ್ಲಿ ಉದ್ಯೋಗ ಒದಗಿಸುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ಶಾಸಕ ಅಶೋಕ್ ರೈ ಅವರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಅರಣ್ಯ ಇಲಾಖೆ ಈ ಭಾಗದಲ್ಲಿ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಬೇಕು. ಕಳೆದ ಒಂದು ವರ್ಷದಿಂದ ಇಲ್ಲಿ ಕಾಡಾನೆಗಳ ಹಾವಳಿ ಕಂಡುಬಂದಿದೆ. ಆದರೆ ಈತನಕ ಪ್ರಾಣಹಾನಿ ಸಂಭವಿಸಿರಲಿಲ್ಲ. ಇದೀಗ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕಾಡಾನೆಗಳ ಉಪಟಳವನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಗಸ್ತು ನಿಯೋಜನೆ:
ಕಣಿಯಾರುಮಲೆ ರಕ್ಷಿತಾರಣ್ಯದಿಂದ ರಬ್ಬರ್ ತೋಟಕ್ಕೆ ಕಾಡಾನೆ ಬಂದು ಮಹಿಳೆ ಸಾವಿಗೆ ಕಾರಣವಾಗಿದೆ. ಇಂತಹ ಘಟನೆಗಳು ಮುಂದೆ ಘಟಿಸದಂತೆ ಹೆಚ್ಚಿನ ನಿಗಾ ವಹಿಸಲಾಗುವುದು. ರಕ್ಷಿತಾರಣ್ಯದ ಭಾಗದಲ್ಲಿ ಹಾದುಹೋಗಿರುವ ರಸ್ತೆಗಳಲ್ಲಿ ಗಸ್ತು ನಿಯೋಜನೆ ಮಾಡಲಾಗುವುದು ಎಂದು ಮಂಗಳೂರು ಡಿಸಿಎಫ್ ಅಂತೋನಿ ಮರಿಯಪ್ಪ ಮಾದ್ಯಮಕ್ಕೆ ತಿಳಿಸಿದ್ದಾರೆ.