
ಎಫ್ಐಆರ್ ನಲ್ಲಿ ಎರಡು ಹೆಸರಿದೆ, ಶೀಘ್ರದಲ್ಲೇ ಆರೋಪಿಗಳ ಬಂಧನ: ಎಡಿಜಿಪಿ ಹಿತೇಂದ್ರ
ಬಂಟ್ವಾಳ: ರಹೀಮಾನ್ ಕೊಲೆ ಆರೋಪಿಗಳನ್ನು ಅತೀ ಶೀಘ್ರದಲ್ಲೇ ಬಂಧಿಸಲಾಗುವುದು, ಎಫ್ಐಆರ್ ನಲ್ಲಿ ಎರಡು ಹೆಸರಿದೆ, ಬಂಧನ ಆದ ನಂತರ ಎಲ್ಲಾ ಮಾಹಿತಿಯನ್ನು ನೀಡುತ್ತೇವೆ, ಸದ್ಯ ತನಿಖೆ ಪ್ರಗತಿಯಲ್ಲಿದೆ, ಆ ಬಳಿಕ ಮಾಹಿತಿ ನೀಡುತ್ತೇವೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಹೇಳಿದ್ದಾರೆ.
ಬುಧವಾರ ಬಂಟ್ವಾಳ ಡಿವೈಎಸ್ಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ತಮ್ಮನ್ನ ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಎಡಿಜಿಪಿ ಅವರು ಸೋಮವಾರ ಮೂರುಗಂಟೆಯ ಹೊತ್ತಿಗೆ
ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ನಡೆದಿದ್ದು,ಘಟನೆಯ ಹಿನ್ನಲೆಯಲ್ಲಿ ಮಂಗಳೂರು ನಗರ ಹಾಗೂ ದ.ಕ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಅಂತ್ಯ ಸಂಸ್ಕಾರ ಶಾಂತಿಯುತವಾಗಿ ಮುಗಿದಿದೆ, ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ಮುಂಜಾಗೃತಾಕ್ರಮವಾಗಿ ಉಡುಪಿ, ಚಿಕ್ಕಮಗಳೂರು, ಮೈಸೂರು ಹಾಗೂ ಕಾರವಾರದಿಂದ ಪೊಲೀಸರನ್ನು ನಿಯೋಜಿಸಲಾಗಿದೆ. ಗಾಳಿ ಸುದ್ದಿಗೆ ಕಿವಿ ಕೊಡದೆ ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿನ ರಿವೇಂಜ್ ಪೋಸ್ಟ್ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಕೆಲವು ನಕಲಿ ಅಕೌಂಟ್ ಇದೆ, ವಿದೇಶದಲ್ಲೂ ಕೂತು ಮಾಡುತ್ತಾರೆ. ಅದೆಲ್ಲ ನಿಜ ಎಂದು ನಂಬಬೇಡಿ, ಪೊಲೀಸ್ ಇಲಾಖೆಯನ್ನು ನಂಬಿ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು ಹೆಚ್ಚಾಗುತ್ತಿವೆ. ಅಂಥವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಮುಂದೆ ನುರಿತ ವಕೀಲರ ಮೂಲಕ ಶಿಕ್ಷೆಯಾಗುವಂತೆ ಮಾಡುತ್ತೇವೆ. ಹತ್ಯೆಯಾದ ವ್ಯಕ್ತಿ ಮರಳು ಕೆಲಸ ಮಾಡುತ್ತಿದ್ದ ಅಷ್ಟೇ. ಸದ್ಯ ಐದು ತಂಡಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಇದು ಪ್ರತಿಕಾರದ ಕೊಲೆನಾ? ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಎಡಿಜಿಪಿ, ದ.ಕ. ಜಿಲ್ಲೆಗೆ ನಾವು ಹೊಸಬರು. ನೀವ್ಯಾರು ಹೊಸಬರು ಅಲ್ಲ. ಜಿಲ್ಲೆಯ ಇತಿಹಾಸ ನಿಮಗೆ ಚೆನ್ನಾಗಿ ಗೊತ್ತಿದೆ. ಪ್ರಶ್ನೆಯ ಜೊತೆಗೆ ಉತ್ತರವೂ ನಿಮಗೆ ಗೊತ್ತಿದೆ ಈ ಪ್ರಶ್ನೆಗೆ ಉತ್ತರ ಎಲ್ಲರಿಗೆ ಗೊತ್ತಿದೆ ಎಂದು ಹೇಳಿದರು.
ಪಶ್ಚಿಮವಲಯದ ಐಜಿ ಅಮಿತ್ ಸಿಂಗ್, ಎಸ್ಪಿ ಯತೀಶ್, ಡಿವೈಎಸ್ಪಿ ವಿಜಯ ಪ್ರಸಾದ್, ವಿವಿಧ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಹಾಜರಿದ್ದರು.
ಇದಕ್ಕು ಮೊದಲು ಎಡಿಜಿಪಿ ಹಿತೇಂದ್ರ ಆರ್ ಹಾಗೂ ಇತರೆ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣದ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.