ಜಪ್ಪಿನಮೊಗರು ಮಾರ್ಗವಾಗಿ ಸಾಗುವ ಬಸ್‌ನ್ನು ಪಡೀಲ್‌ವರೆಗೆ ವಿಸ್ತರಿಸಲು ಸಿಪಿಎಂ ಒತ್ತಾಯ

ಜಪ್ಪಿನಮೊಗರು ಮಾರ್ಗವಾಗಿ ಸಾಗುವ ಬಸ್‌ನ್ನು ಪಡೀಲ್‌ವರೆಗೆ ವಿಸ್ತರಿಸಲು ಸಿಪಿಎಂ ಒತ್ತಾಯ

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್‌ನಿಂದ ಜಪ್ಪಿನಮೊಗರು ಮಾರ್ಗವಾಗಿ ಬಜಾಲ್ ಜೆ.ಎಂ. ರೋಡ್‌ವರೆಗೆ ಸಂಚರಿಸುವ ರೂಟ್ ನಂ.9 ಬಸ್ಸಿನ ಸೇವೆಯನ್ನು ಪಡೀಲುವರೆಗೆ ವಿಸ್ತರಿಸಬೇಕು ಎಂದು ಸಿಪಿಎಂ ಬಜಾಲ್ ಜಪ್ಪಿನಮೊಗರು ಘಟಕ ಒತ್ತಾಯಿಸಿದೆ.

ಜಪ್ಪಿನಮೊಗರು ಗ್ರಾಮದಲ್ಲಿ ವಾಸಿಸುವ ನಾಗರಿಕರಿಗೆ ಪಡೀಲು ಪ್ರದೇಶಕ್ಕೆ ತೆರಳಲು ಕೇವಲ 3 ಕೀ.ಮೀ. ಅಂತರದ ರಸ್ತೆಯಾಗಿರುತ್ತದೆ. ಮಂಗಳೂರು-ಬೆಂಗಳೂರು ಹೈವೇ ರಸ್ತೆ ಸಹಿತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ, ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ತೀರಾ ಅಗತ್ಯವಿರುವ ಹಲವು ಪ್ರಮುಖ ಕೇಂದ್ರಗಳು, ಸರಕಾರಿ ಕಚೇರಿಗಳಿವೆ. ಆದರೆ ಇಷ್ಟು ಹತ್ತಿರುವಿರುವ ಪ್ರಮುಖ ಕೇಂದ್ರಗಳಿಗೆ ತೆರಳಲು ಸರಿಯಾದ ಸಾರಿಗೆ ವ್ಯವಸ್ಥೆಗಳಿಲ್ಲದೆ ಜನ ಸಂಕಷ್ಟ ಅನುಭವಿಸುವಂತಾಗಿದೆ. 

ಈಗಾಗಲೇ ಈ ಭಾಗವಾಗಿ ಸಂಚರಿಸುವ ರೂಟ್ ನಂಬರ್ 9 ಬಸ್ ಕೇವಲ ಬಜಾಲ್ ಜೆ.ಎಂ.ರೋಡ್‌ವರೆಗೆ ಮಾತ್ರ ಸಂಚರಿಸುತ್ತದೆ. ಇನ್ನು ಈ ಕಚೇರಿಗಳಿಗೆ ತೆರಳಬೇಕಾದರೆ ಮತ್ತೆ ಅಲ್ಲಿಂದ ಬಸ್ ಬದಲಾಯಿಸಬೇಕಾಗಿದೆ. ಇದರಿಂದ ಎರಡೆರಡು ಬಸ್ಸನ್ನು ಹತ್ತಬೇಕಾಗಿದೆ. ಇದರಿಂದ ಜಪ್ಪಿನಮೊಗರು ಸಹಿತ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಸಮಸ್ಯೆಗಳನ್ನು ಎದುರಿಸುವಂತಾಗಿದೆ. 

ದೂರದ ಊರಿಗಳಿಗೆ ಸಂಚರಿಸಲು ರೈಲು ನಿಲ್ದಾಣಕ್ಕಾಗಲಿ, ಬೆಂಗಳೂರಿಗೆ ತೆರಳಲು ಬಳಸುವ ಹೈವೆಗೆ ತಲುಪಲು ಜಪ್ಪಿನಮೊಗರು ಅಲ್ಲದೆ ಉಳ್ಳಾಲ ಭಾಗಗಳಿಂದಲೂ ಬರುವ ಪ್ರಯಾಣಿಕರಿಗೆ ಜಪ್ಪಿನಮೊಗರು ರಸ್ತೆ ಮೂಲಕ ಸಾಗಿದರೆ ಸುಲಭವಾಗಿ ಸಂಚರಿಸಬಹುದಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸಿಪಿಎಂ ನಗರ ಸಮಿತಿಯ ಮುಖಂಡ ದಿನೇಶ್ ಶೆಟ್ಟಿ ಜಪ್ಪಿನಮೊಗರು ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article