
ಕರಾವಳಿಯಲ್ಲಿ ಬಿರುಸು ಪಡೆದ ಮುಂಗಾರು-ಹಿಂಗಾರು ಮಳೆ
ಮಂಗಳೂರು: ಕರಾವಳಿಯಲ್ಲಿ ಮುಂಗಾರು ಹಿಂಗಾರು ಮಳೆ ಶುಕ್ರವಾರ ಸಂಜೆ ವೇಳೆಗೆ ಬಿರುಸು ಪಡೆದಿದೆ.
ಇದೇ ವೇಳೆ ಭಾರತೀಯ ಹವಾಮಾನ ಇಲಾಖೆ ಮೇ 24ರಿಂದ 30ರ ವರೆಗೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಹೀಗಾಗಿ ಏಳು ದಿನಗಳ ಕಾಲ ಭಾರಿ ಮಳೆ ನಿರೀಕ್ಷಿಸಲಾಗಿದೆ.
ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸಾಧಾರಣ ಪ್ರಮಾಣದಲ್ಲಿ ಧಾರಾಕಾರ ಮಳೆ ಸುರಿದಿದೆ. ಹಗಲು ಹೊತ್ತು ಮಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬಿಸಿಲು, ಮೋಡ, ಆಗಾಗ ಮಳೆ ಕಾಣಿಸಿತ್ತು.
2009ರ ಬಳಿಕ ವಾಯುಭಾರ ಕುಸಿತ ಪ್ರಭಾವದಿಂದ ಮೇ ತಿಂಗಳಲ್ಲೇ ಮುಂಗಾರು ಪ್ರವೇಶಿಸಲಿದೆ.
ಒಂದೆರಡು ದಿನಗಳಲ್ಲೇ ಕೇರಳ, ಕರ್ನಾಟಕಕ್ಕೆ ಮುಂಗಾರು ಅಧಿಕೃತವಾಗಿ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ದ.ಕ.ಜಿಲ್ಲೆಯ ಬೆಳ್ತಂಗಡಿ 24.4 ಮಿಲಿ ಮೀಟರ್, ಬಂಟ್ವಾಳ 23.5 ಮಿ.ಮೀ, ಮಂಗಳೂರು 30.1 ಮಿ.ಮೀ, ಪುತ್ತೂರು 8.8 ಮಿ.ಮೀ, ಸುಳ್ಯ 3.5 ಮಿ.ಮೀ, ಮೂಡುಬಿದಿರೆ 31.6 ಮಿ.ಮೀ, ಕಡಬ 8.1 ಮಿ.ಮೀ, ಮೂಲ್ಕಿ 37 ಮಿ.ಮೀ, ಉಳ್ಳಾಲ 23.5 ಮಿ.ಮೀ. ಮಳೆಯಾಗಿದ್ದು, ದಿನದ ಸರಾಸರಿ ಒಟ್ಟು ಮಳೆ 18.4 ಮಿ.ಮೀ. ಆಗಿದೆ.