
‘ಸ್ಪೀಕರ್ ಯಾವತ್ತೂ ಕ್ರಿಮಿನಲ್ಗಳ ಪರ ವಹಿಸುವುದಿಲ್ಲ’: ಸದಾಶಿವ ಉಳ್ಳಾಲ್
ಮಂಗಳೂರು: ಸ್ಪೀಕರ್ ಖಾದರ್ ಅವರು ಯಾವತ್ತೂ ಕ್ರಿಮಿನಲ್ಗಳು ಅಥವಾ ಅಪರಾಧಿಗಳ ಪರ ವಹಿಸುವುದಿಲ್ಲ. ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷರು ತಮ್ಮ ಹಿನ್ನೆಲೆಯಲ್ಲಿ ಅರಿತಿರಲಿ ಎಂದು ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದ ಅವರು, ಸತೀಶ್ ಕುಂಪಲ ಖಾದರ್ ಕುರಿತು ಮಾತನಾಡುವಷ್ಟು ದೊಡ್ಡ ವ್ಯಕ್ತಿಯಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖಾದರ್ ಅವರನ್ನು ಸೋಲಿಸಲು ಏನೆಲ್ಲ ಒಳ ಒಪ್ಪಂದ ಮಾಡಿದ್ದರು. ಸಹಕಾರ ಸಂಘ ಸ್ಥಾಪಿಸಿ ಏನು ಮಾಡಿದರೂ, ಭೂ ವ್ಯವಹಾರದಲ್ಲಿನ ಹಗರಣ ಹೀಗೆ ಎಲ್ಲರಿಗೂ ಸತೀಶ್ ಕುಂಪಲ ಅವರು ಮಾಡಿರುವ ಅವ್ಯವಹಾರಗಳ ಬಗ್ಗೆ ತಿಳಿದಿದೆ ಎಂದು ಆರೋಪಿಸಿದರು.
ವಿಧಾನ ಸಭಾಧ್ಯಕ್ಷ, ಮಂಗಳೂರು ಕ್ಷೇತ್ರದ ಶಾಸಕರಾಗಿರುವ ಯು.ಟಿ.ಖಾದರ್ ಅವರ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರವರು ಅಪ ಪ್ರಚಾರದ ಸುಳ್ಳು ಹೇಳಿಕೆಗಳನ್ನು ನೀಡಿ, ಅವರ ರಾಜೀನಾಮೆಗೆ ಆಗ್ರಹಿಸಿರುವುದು ಖಂಡನೀಯ. ಇಂತಹ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ. ಸ್ಪೀಕರ್ ಖಾದರ್ರವರು ಯಾವುದೇ ಜಾತಿ, ಮತ ನೋಡದೆ ಜಾತ್ಯತೀತ ನಿಲುವಿನಲ್ಲಿ ಜನರಿಗೆ ಸಹಾಯ ಮಾಡುವ ನಾಯಕ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಸಹಾಯ ಮಾಡುವವರೂ ಅವರಲ್ಲ. ಅವರ ಕುರಿತು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು.
ಜಿಲ್ಲಾ ವಕ್ತಾರ ದಿನೇಶ್ ಕುಂಪಲ ಅವರು ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯು.ಟಿ.ಖಾದರ್ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರೇ ಸುಹಾಸ್ ಶೆಟ್ಟಿಯನ್ನು ರೌಡಿಶೀಟರ್ನಲ್ಲಿ ಸೇರಿಸಿ ಈಗ ಹೇಳಬಾರದು ಎಂದು ಹೇಳುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಮೇಶ್ ಶೆಟ್ಟಿ, ನೀರಜ್ ಪಾಲ್, ದೀಪಕ್ ಪಿಲಾರ್, ರಕ್ಷಿತ್ ಪೂಜಾರಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.