
ಅಪರೇಷನ್ ಸಿಂದೂರ ವಿಜಯೋತ್ಸವ
ಮಂಗಳೂರು: ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಸಿಂಧೂರ ವಿಜಯೋತ್ಸವ ಸಮಿತಿ ಮಂಗಳೂರು ಇದರ ವತಿಯಿಂದ ಮಂಗಳವಾರ ಸಂಜೆ ನಗರದ ಪಿವಿಎಸ್ ವೃತ್ತದಿಂದ ಲಾಲ್ಬಾಗ್ತನಕ ವಿಜಯೋತ್ಸವ ಮೆರವಣಿಗೆ ನಡೆಯಿತು.
ಬಿರುಸಿನ ಮಳೆಯ ಮಧ್ಯೆಯೂ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಸಹಸ್ರಾರು ಮಂದಿ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದರು.
ಬಳಿಕ ಕರಾವಳಿ ಮೈದಾನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನೇವಿಯ ನಿವೃತ್ತ ಅಧಿಕಾರಿ ಸುಧೀರ್ ಪೈ ಭಾರತೀಯ ಸೇನೆಯ ಆಪರೇಷನ್ ಸಿಂಧೂರಕ್ಕೆ ಭಾರೀ ಗೆಲುವಾಗಿದೆ. ದೇಶದ ಸೈನ್ಯ ಹಾಗೂ ಕಾರ್ಯಾಚರಣೆ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕಿದೆ ಎಂದರು.
ಸಿಂಧೂರ ವಿಜಯೋತ್ಸವ ಸಮಿತಿ ಸಂಚಾಲಕ ಕೇಶವ ನಂದೋಡಿ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ರಶ್ಮಿ ಸಾಮಂತ್ ಉಡುಪಿ ಮಾತನಾಡಿದರು. ಗುರುಪುರ ವಜ್ರದೇಹಿ ಮಠದ ರಾಜಶೇಖರನಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮಂಗಳೂರಿನ ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಮಾತಾಶ್ರೀ ಶಿವಜ್ಞಾನಮಯಿ ಸರಸ್ವತಿ, ಶಂಕರಪುರದ ಶ್ರೀ ಸಾಯಿ ಈಶ್ವರ್ ಗುರೂಜಿ, ಕಲ್ಲಡ್ಕ ಪ್ರಭಾಕರ ಭಟ್, ಕಮಲಾ ಪ್ರಭಾಕರ ಭಟ್, ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಶಾಸಕರಾದ ಡಿ. ವೇದವ್ಯಾಸ ಕಾಮತ್, ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕ್ಯಾ. ಗಣೇಶ್ ಕಾರ್ಣಿಕ್, ಜಯಾನಂದ ಅಂಚನ್, ಡಾ, ಮಂಜುಳಾ ರಾವ್, ಜಗದೀಶ ಶೇಣವ, ರಾಜಗೋಪಾಲ ರೈ ಮುಂತಾದವರು ಉಪಸ್ಥಿತರಿದ್ದರು.
ಪೆಹಲ್ಗಾಮ್ನಲ್ಲಿ ಅಮಾಯಕ ಜನರ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಸಹೋದರಿಯರ ಸಿಂದೂರ ಅಳಿಸಿದವರಿಗೆ ಅಪರೇಷನ್ ಸಿಂದೂರ್ ಹೆಸರಿನ ಸೈನಿಕ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆ ಸೂಕ್ತ ಉತ್ತರ ನೀಡಿದೆ. ಭಾರತೀಯ ಸೇನಾಪಡೆಗಳು ಮತ್ತು ಯೋಧರ ಶೌರ್ಯ-ಪರಾಕ್ರಮವನ್ನು ಅಭಿನಂದಿಸಿ, ಅವರಿಗೆ ಬೆಂಬಲ ನೀಡಿ ಗೌರವಿಸಿ ವಿಜಯೋತ್ಸವ ಹಮ್ಮಿಕೊಳ್ಳಲಾಯಿತು.
ಮೆರವಣಿಗೆಯಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರೇ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪಕ್ಷ, ಧರ್ಮ ಮರೆತು ಎಲ್ಲರೂ ಜತೆಯಾಗಿದ್ದರು.
ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, 70 ದಾಟಿದ ಹಿರಿಯರು ಮೆರವಣಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿ ತೋರುವ ಜತೆಗೆ ಯೋಧರಿಗೆ ಗೌರವ ಸಲ್ಲಿಸಿದರು. ‘ಭಾರತ್ ಮಾತಕೀ ಜೈ’, ‘ವಂದೇ ಮಾತರಂ’ ಘೋಷಣೆಗಳನ್ನು ಕೂಗುತ್ತಾ ಸೈನಿಕರಿಗೆ ಗೌರವ ಅರ್ಪಿಸಲಾಯಿತು.