
ಮೇ.29 ಪುತ್ತಿಗೆಯಲ್ಲಿ ವೃಂದಾವನ ಪ್ರತಿಷ್ಠಾ ಮಹೋತ್ಸವ
ಮೂಡುಬಿದಿರೆ: ಪುತ್ತಿಗೆ ಗ್ರಾಮದ ಸಂಪಿಗೆ ಚಿಟ್ಟೆಮಾರ್ನಲ್ಲಿ ನೂತನ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಮೇ.29ಕ್ಕೆ ವೃಂದಾವನ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೂತನ ಶಿಲಾಮಯ ಮಂದಿರದಲ್ಲಿ ರಾಯರ ವೃಂದಾವನ ಪ್ರತಿಷ್ಠೆ, ವೇ.ಮೂ. ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕಲಶಾಭಿಷೇಕ ಜರುಗಲಿದೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಟ್ರಸ್ಟ್ನ ಮಾರ್ಗದರ್ಶಕ ನವನೀತ ಶೆಟ್ಟಿ ಕದ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಮೇರಿಕದ ಉದ್ಯಮಿ ಕಿಶೋರ್ ಕುಮಾರ್ ಕೋಟ್ಯಾನ್ ಅವರು ಪುತ್ತಿಗೆ ಸಂಪಿಗೆಯ ಚೆಟ್ಟೆಮಾರ್ನಲ್ಲಿ ಜಮೀನು ಖರೀದಿಸಿ ಮಂದಿರ ನಿರ್ಮಾಣ ಮಾಡಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಸ್ಥಳೀಯ ಭಕ್ತರಿಂದ ಮಂದಿರವು ಮುನ್ನಡೆಸಲ್ಪಡಬೇಕು ಎನ್ನುವ ಸತ್ಸಂಕಲ್ಪದೊಂದಿಗೆ ಅಲ್ಪಾವಧಿಯಲ್ಲಿ ಕಾಷ್ಟ ಶಿಲ್ಪದಿಂದ ಪರಿಶೋಭಿಸುವ ಶಿಲಾಮಯ ಮಂದಿರ ನಿರ್ಮಾಣವಾಗಿದೆ.
ಮೇ.25 ಸಂಜೆ 4 ಗಂಟೆಗೆ ಪುತ್ತಿಗೆ ಶ್ರೀ ಸೋಮನಾಥೇಶ್ವರ ಕ್ಷೇತ್ರದಿಂದ ಮಂದಿರದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೇ.26ರಿಂದ 28ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಮೇ.29ರಂದು ಬೆಳಗ್ಗೆ 8.30ಕ್ಕೆ ಶ್ರೀರಾಮದೇವರ ಮತ್ತು ಶ್ರೀ ಗುರುರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರತಿಷ್ಠೆ, ಅಷ್ಠೋತ್ತರ ಶತಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಶ್ರೀ ಪಾದಂಗಳವರ ಸಂಸ್ಥಾನ ಪೂಜೆ, ಶ್ರೀ ರಾಯರಿಗೆ ಸ್ತೋದಕ ಸಹಿತ ಮಹಾಪೂಜೆ ಅನ್ನಸಂತರ್ಪಣೆ ಜರುಗಲಿದೆ.
ಪ್ರತಿದಿನ ಸಾಯಂಕಾಲ ಸ್ಥಳೀಯ ಭಜನಾ ತಂಡಗಳಿಂದ ಭಜನೆ, ಮೇ.28 ಬುಧವಾರ ಸಂಜೆ ಮಸ್ಕತ್ನ ಭ್ರಾಮರಿ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ತೀರ್ಥ ಕಟೀಲು ಅವರಿಂದ ನೃತ್ಯಾಂಜಲಿ. ಮೇ 29 ಹರಿದ್ವಾರ ದೇವಕಿ ತನಯ ಕೂಡ್ಲು ಅವರಿಂದ ಶ್ರೀ ರಾಘವೇಂದ್ರ ಸ್ವಾಮಿ ಮಹಾತ್ಮೆಹರಿಕಥೆ ಜರುಗಲಿದೆ.
ಮೇ.30ರಂದು ಬೆಳಗ್ಗೆ 9ರಿಂದ ಸಂಜೆ 7ರ ತನಕ ನಮ್ಮ ಕುಡ್ಲ ನೃತ್ಯ ಭಜನಾ ಸ್ಪರ್ದೆಯ ಫೈನಲ್ ತಲುಪಿರುವ 21 ತಂಡಗಳ ಅಂತಿಮ ಸುತ್ತಿನ ಸ್ಪರ್ಧೆಯು ಮಂದಿರದ ಸಮೀಪದ ಚಿಟ್ಟೆಮಾರ್ ನವೀನ್ ಹೆಗ್ಡೆ ಅವರ ನೂತನ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಶ್ರೀ ರಾಘವೇಂದ್ರ ಸ್ವಾಮಿ ಟ್ರಸ್ನ ಟ್ರಸ್ಟಿಗಳಾದ ಡಾ. ಪ್ರಕಾಶ್ ಮೂಡುಬಿದಿರೆ, ಲೀಲಾಕ್ಷ ಬಿ. ಕರ್ಕೇರ, ಮಾರ್ಗದರ್ಶಕ ಕೆ. ಶ್ರೀಪತಿ ಭಟ್ ಸುದ್ದಿಗೋಷ್ಠಿಯಲ್ಲಿದ್ದರು.