ಭಕ್ತರು, ಮಾಗಣೆಯವರು ದೇವಸ್ಥಾನಗಳ ಜವಾಬ್ದಾರಿ ಹೊತ್ತಾಗ ಕ್ಷೇತ್ರದ ಅಭಿವೃದ್ಧಿ ಸಾಧ್ಯ: ಧಮಾ೯ಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಭಕ್ತರು, ಮಾಗಣೆಯವರು ದೇವಸ್ಥಾನಗಳ ಜವಾಬ್ದಾರಿ ಹೊತ್ತಾಗ ಕ್ಷೇತ್ರದ ಅಭಿವೃದ್ಧಿ ಸಾಧ್ಯ: ಧಮಾ೯ಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ


ಮೂಡುಬಿದಿರೆ: ದೇವಸ್ಥಾನಗಳ ಜೀರ್ಣೋದ್ಧಾರ ಕೇವಲ ಸರಕಾರ ಮತ್ತು ಧರ್ಮಸ್ಥಳದ ಕೆಲಸವಾಗಬಾರದು. ಭಕ್ತರು, ಗ್ರಾಮಸ್ಥರು ಮತ್ತು ಮಾಗಣೆಯವರು ದೇವಸ್ಥಾನಗಳ ಜವಾಬ್ದಾರಿ ಹೊತ್ತು ಮುನ್ನಡೆಸಿದಾಗ ಕ್ಷೇತ್ರದ ಅಭಿವೃದ್ಧಿ ಮತ್ತು ದೇವರ ಸನ್ನಿಧಾನ ವೃದ್ಧಿಯಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಕ್ಷೇತ್ರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ ದರೆಗುಡ್ಡೆಯಲ್ಲಿಶುಕ್ರವಾರ ರಾತ್ರಿ ಜರುಗಿದ ಬಹ್ಮಕಲಶೋತ್ಸವದ ಸಂದರ್ಭ ಆಯೋಜಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಅವರು ಸರಕಾರ ಮತ್ತು ಧರ್ಮಸ್ಥಳದ ತಲಾ ಶೇ. 40 ಸಹಕಾರದೊಂದಿಗೆ ಸ್ಥಳೀಯರ ಶೇ. 20 ಪಾಲನ್ನೂ ಸೇರಿಸಿ ಶ್ರೀ ಕ್ಷೇತ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಪುರಾತನ ದೇವಸ್ಥಾನಗಳಿಗೆ ಜೀರ್ಣೋದ್ಧಾರ ಕಾರ್ಯ ನೆರವೇರಿಸುತ್ತಿದೆ. 


ಭಕ್ತರ, ಗ್ರಾಮಸ್ಥರ ತನು, ಮನ, ಧನ ಸಹಕಾರ ಮತ್ತು ಶ್ರಮದಾನದಿಂದ ಶ್ರೀ ಕ್ಷೇತ್ರ ಇಟಲದಲ್ಲಿ ಅಭಿವೃದ್ಧಿ ಕಾರ್ಯ ಸಾಧ್ಯವಾಗಿದೆ ಎಂದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕೋಟ್ಯಾನ್ ನೀಡಿ ದೇವರ ಮತ್ತು ಮಾನವನ ಚಿತ್ರಗಳೆರಡೂ ಪರಸ್ಪರ ಸೇರಿದಾಗ ಇಂತಹ ಪುಣ್ಯಪ್ರದ ಕಾರ್ಯಗಳು ನೆರವೇರಲು ಸಾಧ್ಯ. ದೇವರ ಸನ್ನಿಧಾನ ಅಣು, ರೇಜ್ ತೃಣ ಕಾಷ್ಟಗಳಲ್ಲಿದೆ ಎಂಬ ನಂಬಿಕೆ ನಮ್ಮದಾಗಿದ್ದರೂ ಸ್ವಯಂ ರಕ್ಷಣೆ ಮಾಡಿಕೊಂಡು ಸನ್ನಿಧಾನವನ್ನು ಇಮ್ಮಡಿಗೊಳಿಸುವ ಶಕ್ತಿ ದೇವರಲ್ಲಿ ಇರುತ್ತದೆ ಎಂದರು. 


ಶಾಸಕ ಉಮಾನಾಥ ಎ.ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕಟೀಲಿನ ಅನುವಂಶೀಯ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ, ಅಸ್ರಣ್ಣ ಗೌರವ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ  ಶ್ರದ್ಧಾ ಅಮಿತ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಉದ್ಯಮಿ ಶಶಿಧರ ಶೆಟ್ಟಿ, ಬರೋಡ, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಉದ್ಯಮಿ ಕೆ. ಶ್ರೀಪತಿ ಭಟ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ, ಬೇಲೊಟ್ಟು, ಗೋಪಾಲ ಶೆಟ್ಟಿ ದರೆಗುಡ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತಸರ ಬಿ. ವಿಮಲ್ ಕುಮಾರ್ ಶೆಟ್ಟಿ, ಬಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಕಾರ್ಯಾಧ್ಯಕ್ಷರುಗಳಾದ ಸುಕೇಶ್ ಶೆಟ್ಟಿ ಎದಮೇರು, ಸಂತೋಷ್ ಕೆ. ಪೂಚಾರಿ, ಮಾಗಣೆ ಆಸಣ್ಣರಾದ ವೇದಮೂರ್ತಿ ನಾಗರಾಜ ಭಟ್, ಪದಾಧಿಕಾರಿಗಳಾದ ಪೂರನ್ ವರ್ಮ, ಪ್ರಮೋದ್ ಆರಿಗ, ವಿಶ್ವನಾಥ ಕೋಟ್ಯಾನ್ ಹನ್ನೇರು, ಪಣಪಿಲ ಅರಮನೆಯ ಸದಸ್ಯರುಗಳಾದ ಪ್ರೇಮಚಂದ್ರ ಶೆಟ್ಟಿ, ಸುದೀಶ್ ಕುಮಾರ್ ಆನಡ್ಕ, ಸ್ವಾಗತ ಸಮಿತಿಯ ಮುನಿರಾಜಿ ಹೆಗ್ಡೆ ಪಣಪಿಲ ಮತ್ತಿತರರು ಉಪಸ್ಥಿತರಿದ್ದರು.

ಕ್ಷೇತ್ರದ ಜೀರ್ಣೋದ್ದಾರದ ಸಂದರ್ಭ ಸಹಕರಿಸಿದ ದಾನಿಗಳನ್ನು ಈ ಸಂದರ್ಭ ವಿಶೇಷವಾಗಿ ಗೌರವಿಸಲಾಯಿತು. ಪ್ರಶಾಂತ್ ಕುಮಾರ್ ಜೈನ್ ಗೌರವಾರ್ಪಣೆಯ ಪಟ್ಟಿಯನ್ನು ವಾಚಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸುಕೇಶ್ ಶೆಟ್ಟಿ ಎದಮೇರು ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರದ ಬಗ್ಗೆ ವಿವರ ನೀಡಿದರು. ಪ್ರಮೋದ್ ಆರಿಗ ಸ್ವಾಗತಿಸಿದರು. ನಿರಂಜನ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ತಂತ್ರಿವರೇಣ್ಯರಾದ ಕೆ. ನರಸಿಂಹ ತಂತ್ರಿ, ರಾಘವೇಂದ್ರ ತಂತ್ರಿ, ಕಳತ್ತೂರು ಉದಯ ತಂತ್ರಿ ಹಾಗೂ ಆರ್ಚಕ ವೇದಮೂರ್ತಿ ನಾಗರಾಜ ಭಟ್ ಅವರ  ನೇತೃತ್ವದಲ್ಲಿ ಸಂಜೆ ಆರಾಧನಾ ಪೂಜೆ ರಂಗಪೂಜೆ, ಉತ್ಸವ ಬಲಿ ನಡೆದವು. ಭಜನಾ ಕಾರ್ಯಕ್ರಮ. ಯಕ್ಷ-ಗಾನ-ನಾಟ್ಯ ವೈಭವ ಕಾರ್ಯಕ್ರಮಗಳೂ ಜರಗಿದವು. ರಾತ್ರಿ ಜಡೆ-ಕೋಲಾಟ ಮತ್ತು ಯಕ್ಷಗಾನ ಪ್ರದರ್ಶನ ಪ್ರಸಂಗ ಶಿವಪಂಚಾಕ್ಷರಿ ಮಹಿಮೆ ಪ್ರಸ್ತುತಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article