
ಅಗ್ನಿ ಸುರಕ್ಷತೆ ಮತ್ತು ತುರ್ತು ಸಂದರ್ಭದ ರಕ್ಷಣಾ ಕಾರ್ಯಾಚರಣೆ ಕುರಿತು ಮೋಕ್ ಡ್ರಿಲ್: ಸೈರನ್ಗಳ ಅಬ್ಬರಕ್ಕೆ ಬೆಚ್ಚಿದ ಸುಳ್ಯದ ಜನತೆ...!
ಸುಳ್ಯ: ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತುಸೇವೆಗಳು ಸುಳ್ಯ ಅಗ್ನಿಶಾಮಕ ಠಾಣೆಯ ವತಿಯಿಂದ ಅಗ್ನಿ ಸುರಕ್ಷತೆ ಮತ್ತು ತುರ್ತು ಸಂಧರ್ಭಗಳಲ್ಲಿ, ಅವಘಡ ಉಂಟಾದಲ್ಲಿ ತಕ್ಷಣ ಕ್ರಮಕೈಗೊಳ್ಳುವ ಕ್ರಮಗಳ ಕುರಿತು ಅರಿವು ಮೂಡಿಸುವ ಅಣುಕು ಕಾರ್ಯಾಚರಣೆ (ಮಾಕ್ ಡ್ರಿಲ್) ಮೇ.೨೧ರಂದು ಸುಳ್ಯ ನಗರದಲ್ಲಿ ಹಾಗೂ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ವಠಾರದಲ್ಲಿ ನಡೆಯಿತು.
ಸುಳ್ಯ ನಗರದಲ್ಲಿ ಅಗ್ನಿಶಾಮಕ ವಾಹನಗಳು ಹಾಗೂ ಅಂಬ್ಯುಲೆನ್ಸ್ಗಳು ಸೇರಿ ಸಾಲು ಸಾಲು ಸುರಕ್ಷಾ ವಾಹನಗಳು ಸೈರನ್ ಮೊಳಗಿಸುತ್ತಾ ಕೆವಿಜಿ ಕ್ಯಾಂಪಸ್ ಕಡೆಗೆ ಧಾವಿಸಿದವು. ಸೈರನ್ಗಳ ಅಬ್ಬರಕ್ಕೆ ಕೆಲಕಾಲ ನಗರದ ಜನರು ಬೆಚ್ಚಿ ಬಿದ್ದರು. ವಿಪತ್ತು, ಅವಘಡ ಉಂಟಾದ ಸಂದರ್ಭ ಅಗ್ನಿಶಾಮಕ ದಳ ಹಾಗೂ ಇತರೆ ಇಲಾಖೆಗಳು ಯಾವ ರೀತಿಯಲ್ಲಿ ಸ್ಪಂದಿಸಿ ಕಾರ್ಯಾಚರಣೆ ನಡೆಸುತ್ತಾರೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.
ಸುಳ್ಯದ ಜ್ಯೋತಿ ವೃತ್ತದಿಂದ ಝೀರೋ ಟ್ರಾಫಿಕ್ನಲ್ಲಿ ಅಗ್ನಿಶಾಮಕ ವಾಹನಗಳು ಮತ್ತು ಆಂಬ್ಯುಲೆನ್ಸ್ಗಳು ಸುಳ್ಯ ಮುಖ್ಯರಸ್ತೆಯ ಮಾರ್ಗವಾಗಿ ಬಂದು ರಥಬೀದಿ ಮೂಲಕ ಕೆವಿಜಿ ಕ್ಯಾಂಪಸ್ ಕಡೆಗೆ ತೆರಳಿದವು. ಅಲ್ಲಿ ಅಣುಕು ಕಾರ್ಯಾಚರಣೆ ಮೂಲಕ ತುರ್ತು ಸಂಧರ್ಭದಲ್ಲಿ ಇಲಾಖೆಗಳು ಯಾವ ರೀತಿ ಕಾರ್ಯಾಚರಣೆ ನಡೆಸುತ್ತಾರೆ ಎಂಬ ಮಾಹಿತಿ ನೀಡಿ ಜನತೆಗೆ ಅರಿವು ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಸುಳ್ಯ ಅಗ್ನಿಶಾಮಕ ಠಾಣೆ ವತಿಯಿಂದ ತಾಲೂಕು ಆಡಳಿತ, ಪೊಲೀಸ್, ಅರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಹಾಗೂ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ರಕ್ಷಣಾ ಕಾರ್ಯಚರಣೆಯ ಅಣುಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.
ಅಗ್ನಿಶಾಮಕ ದಳದ ಪ್ರಮುಖರಾದ ನಾರಾಯಣ್ ಪೂಜಾರ್, ಸಂತೋಷ್, ತಹಶಿಲ್ದಾರ್ ಮಂಜುನಾಥ್, ಸುಳ್ಯ ಆರಕ್ಷಕ ಉಪ ನಿರೀಕ್ಷಕ ಸಂತೋಷ್, ಸರಸ್ವತಿ ಬಿ.ಟಿ., ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ. ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಸಿಇಒ ಡಾ. ಉಜ್ವಲ್ ಯು.ಜೆ., ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.