
ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಸೇವೆಯಾಟದೊಂದಿಗೆ ತಿರುಗಾಟ ಸಮಾಪ್ತಿ
Wednesday, May 28, 2025
ಉಜಿರೆ: ಪತ್ತನಾಜೆಯೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ಮೇಳದ ತಿರುಗಾಟ ಕ್ಷೇತ್ರದಲ್ಲಿ ಮೂರು ದಿನಗಳ ಸೇವೆಯಾಟದೊಂದಿಗೆ ಸಮಾಪನಗೊಂಡಿತು.
ಮೇಳದ ಶ್ರೀ ಮಹಾಗಣಪತಿಯನ್ನು ಪತ್ತನಾಜೆಯಂದು ಸಂಭ್ರಮದ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಅಮೃತವರ್ಷಿಣಿ ಸಭಾಮಂಟಪದಲ್ಲಿ ಮೇ 25 ರಂದು ‘ಹನುಮೋದ್ಭವ-ಇಂದ್ರಜಿತು-ರಕ್ತರಾತ್ರಿ ಪ್ರಸಂಗ’ ಮೇ26 ರಂದು ‘ತ್ರಿಜನ್ಮ ಮೋಕ್ಷ’ ಪ್ರಸಂಗ ಹಾಗು ಮೇ 27 ರಂದು ‘ದಕ್ಷಯಜ್ಞ-ಗಿರಿಜಾ ಕಲ್ಯಾಣ’ ಪೌರಾಣಿಕ ಪ್ರಸಂಗಗಳ ಯಕ್ಷಗಾನ ಸೇವೆಯಾಟದೊಂದಿಗೆ ಪ್ರಸಕ್ತ ಸಾಲಿನ ಯಕ್ಷಗಾನ ತಿರುಗಾಟ ಸಮಾಪ್ತಿಗೊಂಡಿತು. ಮೇಳದ ಹಿರಿಯ ಕಲಾವಿದರಾಗಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೆ. ಗೋವಿಂದ ಭಟ್ ಅವರು ಅತಿಥಿ ಕಲಾವಿದರಾಗಿ ರಂಗದಲ್ಲಿ ಪಾತ್ರ ನಿರ್ವಹಿಸಿರುವುದು ವಿಶೇಷ.
ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಮೇಳದ ಯಜಮಾನರಾದ ಡಿ. ಹರ್ಷೇನ್ದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಮೇಳದ ಕಲಾವಿದರು, ಭಕ್ತಾದಿಗಳು, ಸೇವೆಯಾಟದ ಸೇವಾರ್ಥಿಗಳ ಕುಟುಂಬ ಭಾಗವಹಿಸಿದ್ದರು.