
ವ್ಯಸನಮುಕ್ತರು ನರಕವನ್ನು ದಾಟಿ ಬಂದ ನಾಯಕರು: ಶ್ರೀ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ
ಧರ್ಮಸ್ಥಳದಲ್ಲಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭ
ಉಜಿರೆ: ಮನುಷ್ಯರು ವ್ಯಸನಗಳ ದಾಸರಾಗಬಾರದು. ಚಟಗಳಿಂದಾಗಿ ಹಣ, ಆರೋಗ್ಯ, ಮರ್ಯಾದೆ, ಪ್ರೀತಿ-ವಿಶ್ವಾಸ ಎಲ್ಲವನ್ನೂ ಮದ್ಯವ್ಯಸನಿಗಳು ಕಳೆದುಕೊಳ್ಳುತ್ತಾರೆ. ವ್ಯಸನಮುಕ್ತರು ನರಕವನ್ನು ದಾಟಿ ಬಂದ ನಾಯಕರು ಎಂದು ಶಿರಹಟ್ಟಿ ಭಾವೈಕ್ಯತಾ ಪೀಠದ ಶ್ರೀ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ನುಡಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ ೨೯೦೦ ಮಂದಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸರ್ಕಾರ ಮದ್ಯ ಕುಡಿಸಬೇಕು ಎಂದು ಹೇಳಿದರೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮದ್ಯಪಾನ ಬಿಡಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಮದ್ಯದಂಗಡಿಗಳನ್ನು ಹೆಚ್ಚಿಸುವುದಲ್ಲದೆ ಮದ್ಯಪಾನ ನಿಯಂತ್ರಣ ಮಂಡಳಿಗೂ ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತಿದೆ.
ಆರೋಗ್ಯಪೂರ್ಣ ಸಭ್ಯ, ಸುಸಂಸ್ಕೃತ ಸಮಾಜ ರೂಪಿಸಲು ಹೆಗ್ಗಡೆಯವರು ಮಾಡುತ್ತಿರುವ ಸೇವೆ-ಸಾಧನೆಗಳ ಬಗ್ಗೆ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಮಾಹಿತಿ ನೀಡಬೇಕು. ವಿಶ್ವವಿದ್ಯಾಲಯಗಳಲ್ಲಿ ಕೂಡಾ ಈ ಬಗ್ಗೆ ಸಂಶೋಧನಾತ್ಮಕ ಅಧ್ಯಯನ ನಡೆಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಮದ್ಯಪಾನ ನಿಷೇಧ ಮಾಡುವ ಸರ್ಕಾರ ಬಂದರೆ ಮಾತ್ರ ರಾಜ್ಯದ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ವ್ಯಸನಗಳ ಚಟದಿಂದಾಗಿ ಇಂದು ಪುರುಷರ ಬಂಜೆತನವೂ ಹೆಚ್ಚಾಗುತ್ತಿರುವುದು ಖೇದಕರವಾಗಿದೆ ಎಂದು ಅವರು ತಿಳಿಸಿದರು.
ವ್ಯಸನಮುಕ್ತರು ಮುಂದೆ ದೃಢಸಂಕಲ್ಪದೊಂದಿಗೆ ಸಾರ್ಥಕ ಜೀವನ ನಡೆಸಿ ಪರಿಸರದವರಿಗೂ ವ್ಯಸನಮುಕ್ತರಾಗುವ ಪ್ರೇರಣೆ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾಅಮಿತ್ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.
ಹೇಮಾವತಿ ವಿ. ಹೆಗ್ಗಡೆ ಮಾತನಾಡಿ ಮದ್ಯವ್ಯಸನಿಗಳು ಅನ್ಯಾಯ, ಅತ್ಯಾಚಾರ ಮಾಡುತ್ತಾ ಸಂಸ್ಕಾರಕ್ಕೂ ಸಮಾಜಕ್ಕೂ ಹೊರೆಯಾಗುತ್ತಾರೆ. ವ್ಯಸನಮುಕ್ತರಾಗಿ ಹೊಸ ಬದುಕನ್ನು ಆರಂಭಿಸಿದವರು. ಪಂಚೇಂದ್ರಿಯಗಳ ನಿಗ್ರಹದೊಂದಿಗೆ ಮಾನಸಿಕ ಮಾಲಿನ್ಯ ರಹಿತರಾಗಿ ಆದರ್ಶ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ವ್ಯಸನಮುಕ್ತರು ಕುಟುಂಬದ ಸದಸ್ಯರೊಂದಿಗೆ ಪ್ರೀತಿ-ವಿಶ್ವಾಸದಿಂದ ಮುಕ್ತವಾಗಿ ಬೆರೆಯಬೇಕು. ಮತ್ತೆ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬಾರದು. ವ್ಯಸನಮುಕ್ತರು ಪರಿಶುದ್ಧ ದೇಹ ಮತ್ತು ಮನಸ್ಸಿನಿಂದ ಇಂದು ದೇವರ ದರ್ಶನ ಮಾಡಿರುವುದರಿಂದ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿರುವಿರಿ ಎಂದು ಹೇಳಿ ಶುಭ ಹಾರೈಸಿದರು.
ವ್ಯಸನಮುಕ್ತರ ಪರವಾಗಿ ರಾಮದುರ್ಗದ ಶಂಕರಪ್ಪ ಮತ್ತು ಉಡುಪಿಯ ಶಶಿಕಲರಾಜು ಅನಿಸಿಕೆ ವ್ಯಕ್ತ ಪಡಿಸಿದರು. ಮೂಡಬಿದಿರೆ ಡಾ. ವಿನಯ್ ಆಳ್ವ ಜಾಗೃತಿಅಣ್ಣ ಮತ್ತು ಜಾಗೃತಿಮಿತ್ರ ಪ್ರಶಸ್ತಿ ಪ್ರದಾನ ಮಾಡಿದರು.
ಡಾ. ಪಿ.ವಿ. ಭಂಡಾರಿ, ಡಾ. ಶ್ರೀನಿವಾಸ ಭಟ್, ವಿ. ರಾಮಸ್ವಾಮಿ, ಪದ್ಮನಾಭ ಶೆಟ್ಟಿ ಮತ್ತು ಕಾಸಿಂ ಉಪಸ್ಥಿತರಿದ್ದರು. ಅನಿಲ್ ಕುಮಾರ್ ಆಶಯ ನುಡಿಗಳನ್ನು ಆಡಿ ಶುಭ ಹಾರೈಸಿದರು. ವಿವೇಕ್ ವಿ. ಪಾಸ್ ಸ್ವಾಗತಿಸಿ, ನಟರಾಜ್ ಬಾದಾಮಿ ವಂದಿಸಿದರು. ಯೋಜನಾಧಿಕಾರಿಗಳಾದ ನಾಗರಾಜ್ ಮತ್ತು ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.