
ಜೂ.24 ಶ್ರೀನಿವಾಸ್ ಬಜಾಲ್ ಹುತಾತ್ಮ ದಿನ: ತುಳುನಾಡಿನ ಸೌಹಾರ್ದ ಪರಂಪರೆ, ಕೋಮುವಾದ ಒಡ್ಡಿರುವ ಸವಾಲುಗಳು ವಿಚಾರ ಸಂಕಿರಣ
ಮಂಗಳೂರು: ಕೋಮುವಾದದ ಭೀಕರತೆಗೆ ನಲುಗಿ ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಮ್ಮದಿ ಮರಿಚೀಕೆಯಾಗಿದೆ. ಇತ್ತೀಚೆಗೆ ನಡೆದ ಸರಣಿ ಹತ್ಯೆಗಳು ನಮ್ಮನ್ನೆಲ್ಲಾ ಬೆಚ್ಚಿ ಬೀಳಿಸಿದೆ. ಬಹುಸಂಖ್ಯಾತ ಕೋಮುವಾದ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿ ನಡೆಸುವ ದಾಳಿಗಳಿಂದ ಆ ಸಮುದಾಯ ಭೀತಿಯಲ್ಲಿ ಬದುಕುವಂತಾಗಿದೆ. ಆದರೆ ಬಹುಸಂಖ್ಯಾತ ಕೋಮುವಾದ ಗುರಿಯನ್ನಾಗಿಸುತ್ತಿರುವುದು ಕೇವಲ ಅಲ್ಪಸಂಖ್ಯಾತ ಅದರಲ್ಲೂ ಮುಸ್ಲಿಂ ಸಮುದಾಯವನ್ನಷ್ಟೇ ಅಲ್ಲ. ಅದು ಎಡಪಂಥೀಯ ಸಂಘಟನೆಯನ್ನೂ, ಪ್ರಗತಿಪರರನ್ನೂ ಮತ್ತು ಇಡಿಯಾ ಸ್ವಾಸ್ಥ್ಯ ಸಮಾಜವನ್ನು ಗುರಿಯನ್ನಾಗಿಸಿದೆ.
ಇದು ನಮ್ಮ ಸಮಾಜಕ್ಕೆ ನಿರಂತರ ಅಪಾಯವನ್ನು ತಂದೊಡ್ಡುತ್ತಿದೆ. ಇಂತಹ ಕೋಮುವಾದದ ವಿರುದ್ಧ ಪ್ರಾರಂಭದ ದಿನದಿಂದಲೂ ಡಿವೈಎಫ್ಐ ದೇಶದಾದ್ಯಂತ ಪ್ರಭಲ ಹೋರಾಟ, ಚಳುವಳಿಗಳನ್ನು ಮುನ್ನಡೆಸಿ ಅಪಾರ ತ್ಯಾಗ ಬಲಿದಾನವನ್ನು ಅರ್ಪಿಸಿದೆ.
2002ರ ಜೂನ್ 24ರಂದು ಬಲಪಂಥೀಯ ಸಂಘಟನೆಯ ಗೂಂಡಾಗಳು ಬಿಲ್ಲವ ಸಮುದಾಯಕ್ಕೆ ಸೇರಿದ ಡಿವೈಎಫ್ಐ ಮುಖಂಡ ಶ್ರೀನಿವಾಸ್ ಬಜಾಲ್ ಅವರನ್ನು ಬಲಿ ಪಡೆದಿದೆ. ಇದಕ್ಕೂ ಮೊದಲು 1997 ರಲ್ಲಿ ಭಾಸ್ಕರ್ ಕುಂಬಳೆಯನ್ನು ಕೂಡ ಇದೇ ರೀತಿ ಕಡಿದು ಕೊಂದು ಹಾಕಿರುವ ಘಟನೆಯ ನೆನಪುಗಳು ಇಂದೂ ಮಾಸಿಲ್ಲ.
ಕೋಮುವಾದಿಗಳ ವಿರುದ್ಧದ ಹೋರಾಟದಲ್ಲಿ ಮಡಿದ ಶ್ರೀನಿವಾಸ್ ಬಜಾಲ್ ಮತ್ತು ಭಾಸ್ಕರ್ ಕುಂಬಳೆಯಂತಹ ನೂರಾರೂ ಡಿವೈಎಫ್ಐ ಕಾರ್ಯಕರ್ತರ ತ್ಯಾಗ ಬಲಿದಾನವನ್ನು ಸಂಘಟನೆ ಇವತ್ತಿಗೂ ಸ್ಮರಿಸಿ ಅದನ್ನು ಪ್ರೇರಣೆಯಾಗಿ ಬಳಸಿ ಆ ಹೋರಾಟಗಳನ್ನು ಮತ್ತಷ್ಟು ಮುನ್ನಡೆಸುತ್ತಿದೆ.
ಡಿವೈಎಫ್ಐ ಮುಖಂಡ ಶ್ರೀನಿವಾಸ್ ಬಜಾಲ್ ಹತ್ಯೆಯಾಗಿ ಜೂನ್ 24ಕ್ಕೆ 23 ವರುಷ ಸಂದಿದೆ. ಈ ದಿನದ ನೆನಪಿನಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿಯು ಕೋಮುವಾದದ ವಿರುದ್ಧದ ಹೋರಾಟಗಳನ್ನು ವ್ಯಾಪಕಗೊಳಿಸಲು ತೀರ್ಮಾನಿಸಿದೆ.
ಆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಕೋಮುವಾದ, ಮೂಲಭೂತವಾದದ ವಿರುದ್ಧ ಜನರ ಧ್ವನಿಯಾಗುವ, ಶಾಂತಿ ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಪ್ರಯತ್ನಕ್ಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಕೋಮುವಾದಿ ವಿರೋಧಿ ಮಾಸಾಚರಣೆಗೆ ಕರೆ ನೀಡಿದ್ದು ಈ ಪ್ರಯುಕ್ತ ಜೂನ್ 24 ರಂದು ಸಂಜೆ 4.30ಕ್ಕೆ ನಗರದ ಸಹೋದಯ ಸಭಾಂಗಣದಲ್ಲಿ ತುಳುನಾಡಿನ ಸೌಹಾರ್ದ ಪರಂಪರೆ , ಕೋಮುವಾದ ಒಡ್ಡಿರುವ ಸವಾಲುಗಳು ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ.
ಈ ವಿಚಾರ ಸಂಕಿರಣದಲ್ಲಿ ಜನಪದ ವಿದ್ವಾಂಸರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ವಿಚಾರ ಮಂಡಿಸಲಿದ್ದು. ಡಿವೈಎಫ್ಐ ಮಾಜಿ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ಹಾಗೂ ಪತ್ರಕರ್ತರು, ಬರಹಗಾರರು ಆದ ನವೀನ್ ಸೂರಿಂಜೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.