
ಗುರುಗಳ ಮಹತ್ವ: ಸನಾತನ ಸಂಸ್ಥೆಯಿಂದ ಮಕ್ಕಳು ಮತ್ತು ಪೋಷಕರಿಗಾಗಿ ವಿಶೇಷ ಪ್ರವಚನ
Sunday, June 22, 2025
ಮಂಗಳೂರು: ಗುರು ಪೂರ್ಣಿಮೆಯು ಶಿಷ್ಯರಿಗೆ ಗುರು ತತ್ವವನ್ನು ಪೂರೈಸಲು ಮತ್ತು ಗುರುವಿನ ಅನುಗ್ರಹವನ್ನು ಪಡೆಯಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಗುರು-ಶಿಷ್ಯ ಪರಂಪರೆ ಭಾರತದ ಸಂಸ್ಕೃತಿಯ ಪವಿತ್ರ ಭಾಗವಾಗಿದೆ. ಗುರು ಪೂರ್ಣಿಮೆಯನ್ನು ಆಚರಿಸುವುದು ಗುರುಗಳಿಗೆ ನಮನ ಸಲ್ಲಿಸುವ ಜೊತೆಗೆ ಈ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸಲು ಪ್ರತಿಜ್ಞೆ ಮಾಡುವ ಒಂದು ಮಾರ್ಗವಾಗಿದೆ ಎಂದು ಸನಾತನ ಸಂಸ್ಥೆಯ ಲಕ್ಷ್ಮಿ ಪೈ ಹೇಳಿದರು.
ಜು.10 ರಂದು ಗುರುಪೂರ್ಣಿಮೆಯ ನಿಮಿತ್ತ ಗುರು ಶಿಷ್ಯ ಪರಂಪರೆಯ ಮಹತ್ವ, ಗುರುತತ್ವದ ಕಾರ್ಯ, ವರ್ತಮಾನ ಕಾಲದಲ್ಲಿ ಧರ್ಮರಕ್ಷಣೆಯ ಹಾಗೂ ಧರ್ಮ ಜಾಗೃತಿಯ ಮಹತ್ವ ಇತ್ಯಾದಿ ವಿಷಯಗಳ ಬಗ್ಗೆ ಇವರು ಪ್ರಬೋದನೆಯನ್ನು ನೀಡಿದರು.
ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ಪಿಯು ಕಾಲೇಜು ಮತ್ತು ರೆಸಿಡೆನ್ಸಿಯಲ್ ಸ್ಕೂಲ್ ಇದರ ಸಭಾಂಗಣದಲ್ಲಿ ಶಕ್ತಿ-ಸನಾತನ ಸಂಪದ ಎಂಬ ಉಪಕ್ರಮದ ಅಂತರ್ಗತ ಸನಾತನ ಸಂಸ್ಥೆಯ ವತಿಯಿಂದ ವಿಶೇಷ ಪ್ರವಚನ ನಡೆಯಿತು.
ಈ ಸಂದರ್ಭದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಕೆ.ಸಿ. ನಾಯಕ್, ಮಾದ್ಯಮ ಸಲಹೆಗಾರ ರಮೇಶ್ ಉಪಸ್ಥಿತರಿದ್ದರು. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕ ವೃಂದದವರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ.