
'ಅಂತರಾಷ್ಟ್ರೀಯ ಮಾದಕ ದೃವ್ಯ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ತಡೆ ದಿನ' ಜಾಗೃತಿ ಕಾರ್ಯಕ್ರಮ
Thursday, June 26, 2025
ಮೂಡುಬಿದಿರೆ: ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದಲ್ಲಿ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಣಿಕೆ ತಡೆ ದಿನ’ದಂದು ಆಳ್ವಾಸ್ ಹೋಮಿಯೋಪತಿ ಕಾಲೇಜು ಸಭಾಂಗಣದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಮೂಡುಬಿದಿರೆ ಪೊಲೀಸ್ ಠಾಣಾ ಉಪನಿರೀಕ್ಷಕಿ ಪ್ರತಿಭಾ ಮಾತನಾಡಿ, ಮಾದಕ ದ್ರವ್ಯಗಳ ವ್ಯಸನಕ್ಕೆ ಹೆಚ್ಚಾಗಿ ಯುವಕರು ಮತ್ತು ಯುವತಿಯರು ಬಲಿಯಾಗುತ್ತಿದ್ದಾರೆ. ಇವುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಇದರಿಂದ ಕೇವಲ ಸೇವಿಸುವವನಿಗೆ ಮಾತ್ರವಲ್ಲ, ಸಮಾಜಕ್ಕೂ ತೊಂದರೆಯಾಗುತ್ತಿದೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳಾದ ಕಳ್ಳತನ, ಕೊಲೆ, ಅತ್ಯಾಚಾರ ಇತ್ಯಾದಿಗಳಿಗೆ ತೊಡಗಿರುವ 70% ಆರೋಪಿಗಳು ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಿರುತ್ತಾರೆ ಎಂದರು.
ಆಳ್ವಾಸ್ ಪುನರ್ಜನ್ಮ ವೈದ್ಯಕೀಯ ನಿರ್ದೇಶಕ ಡಾ. ವಿನಯ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ , ‘2019ರಲ್ಲಿ ಭಾರತದಲ್ಲಿ ನಡೆದ ಸಮೀಕ್ಷೆಯ ಪ್ರಕಾರ 17 ಕೋಟಿ ಮದ್ಯಪಾನ, 5.1 ಕೋಟಿ ಓಪಿಯಂ, 3.2 ಕೋಟಿ ಗಾಂಜಾ ಸೇವಿಸುವವರಿದ್ದು, ಆದರೆ ಕೇವಲ 612 ನೋಂದಾಯಿಸಲ್ಪಟ್ಟ ದುಶ್ಚಟ ನಿವಾರಣಾ ಕೇಂದ್ರಗಳಿವೆ. ಇವುಗಳ ನಡುವೆ ಇರುವ ವ್ಯತ್ಯಾಸ ದುಶ್ಚಟ ನಿವಾರಣಾ ಕೇಂದ್ರಗಳಿಗಿರುವ ಬೇಡಿಕೆಯನ್ನು ತಿಳಿಸುತ್ತದೆ. ಮಾದಕ ದ್ರವ್ಯಗಳ ವ್ಯಸನ ಒಂದು ಸಾಂಕ್ರಾಮಿಕ ರೋಗ. ಅದು ಕೇವಲ ವ್ಯಕ್ತಿಯಲ್ಲಿ ಮಾತ್ರವಲ್ಲ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟಲು ನಾವೆಲ್ಲರೂ ಪ್ರತಿಜ್ಞೆಯನ್ನು ಸ್ವೀಕರಿಸಿ, ಮುನ್ನಡೆಯಬೇಕು ಎಂದರು.
ಬೆಳ್ತಂಗಡಿ ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ನಮ್ಮ ಕಣ್ಣ ಮುಂದಿರುವ ಅತೀ ದೊಡ್ಡ ಶತ್ರು ಮಾದಕ ವಸ್ತುಗಳು. ಮಾನವರು ಸಾಮಾನ್ಯವಾಗಿ ಕೆಟ್ಟ ಚಟಗಳೆಡೆಗೆ ಬೇಗನೆ ಆಕರ್ಷಿತರಾಗುತ್ತಾರೆ. ಶರೀರ ಒಂದು ಕಾರ್ಖಾನೆಯಂತೆ. ದೇಹಕ್ಕೆ ನೀಡುವ ಪದಾರ್ಥಗಳ ಮೇಲೆ ಅದು ವರ್ತಿಸಲಾರಂಭಿಸುತ್ತದೆ. ಮಾದಕ ವಸ್ತುಗಳ ಸೇವನೆಯಿಂದ ದೇಹದ ಅಂಗಾಂಗಗಳು ಸರಿಯಾಗಿ ಕೆಲಸ ಮಾಡಲಾಗದೆ ಆರೋಗ್ಯ ಹದಗೆಡುತ್ತದೆ, ಮನಸ್ಸೂ ಅಶಾಂತವಾಗುತ್ತದೆ. ದುಶ್ಚಟಗಳಿಗೆ ಒಳಗಾದವರು ಶಾರೀರಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸುಧಾರಿಸುವುದಿಲ್ಲ. ಮನಸ್ಥಿತಿ ಉತ್ತಮವಿದ್ದಲ್ಲಿ ಮಾತ್ರ ಪರಿಸ್ಥಿತಿಯ ಉತ್ತಮವಿರುತ್ತದೆ ಎಂದರು.
ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ರೋಷನ್ ಪಿಂಟೋ ಉಪಸ್ಥಿತರಿದ್ದರು. ಆಳ್ವಾಸ್ ಪುರ್ನಜನ್ಮದ ಆಪ್ತ ಸಮಾಲೋಚಕಿ ಸುಮನ್ ಪಿಂಟೋ ಸ್ವಾಗತಿಸಿ, ಮುಖ್ಯ ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ ನಿರೂಪಿಸಿದರು. ಬೆನ್ಸನ್ ಡಿಸೋಜ ವಂದಿಸಿದರು.