ರಾಜ್ಯಕ್ಕೆ ಸಿದ್ದರಾಮಯ್ಯ ಸರ್ಕಾರ ಶಾಪ: ಕ್ಯಾ. ಗಣೇಶ್ ಕಾರ್ಣಿಕ್

ರಾಜ್ಯಕ್ಕೆ ಸಿದ್ದರಾಮಯ್ಯ ಸರ್ಕಾರ ಶಾಪ: ಕ್ಯಾ. ಗಣೇಶ್ ಕಾರ್ಣಿಕ್


ಪುತ್ತೂರು: ಕೇವಲ ಒಂದು ಸಮುದಾಯಕ್ಕೆ ಮಾತ್ರ ಇರುವ ರಾಜ್ಯ ಸರ್ಕಾರ ಬಹುಸಂಖ್ಯಾತರ ನಂಬಿಕೆಗಳನ್ನು ಧಿಕ್ಕರಿಸಿದ ಸರ್ಕಾರವಾಗಿದೆ. ಕಾಂಗ್ರೇಸ್ ಪಕ್ಷಕ್ಕೆ ಕರ್ನಾಟಕ ‘ಎಟಿಎಂ’ ಆಗಿದೆ. ಸಮಾಜವನ್ನು ಒಡೆಯಲು ಜಾತಿಗಣತಿ, ಬಡವರ್ಗಕ್ಕೆ ಮೂಲಭೂತ ಸೌಕರ್ಯವಾದ ವಸತಿ ಸಿಗಬೇಕಾದರೆ ಲಂಚ. ಅಧಿಕಾರವನ್ನು ಬಳಸಿಕೊಂಡು ರಾಜ್ಯವನ್ನು ಲೂಟಿ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ ಕರ್ನಾಟಕಕ್ಕೊಂದು ಶಾಪವಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.

ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಸೋಮವಾರ ರಾಜ್ಯಸರ್ಕಾರದ ಜನವಿರೋಧಿ ನೀತಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸದಾ ಸುಳ್ಳು ಹೇಳುತ್ತಲೇ ಇರುವ ರಾಜ್ಯ ಮುಖ್ಯಮಂತ್ರಿ ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಒಂದು ಪೈಸೆ ತೆರಿಗೆ ಏರಿಕೆ ಮಾಡಿಲ್ಲ. ಆದರೆ ರಾಜ್ಯ ಸರ್ಕಾರ ಸ್ಟ್ಯಾಂಪ್ ಪೇಪರ್, ನೋಂದಣಿಶುಲ್ಕ ಸಹಿತ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ತೆರಿಗೆ ಆಧಾರದಲ್ಲಿ ಶೇ.234 ಹಾಗೂ ಅನುದಾನ ಶೇ.259ರಷ್ಟು ಜಾಸ್ತಿ ಬಂದಿದೆ. ಆದರೂ ರಾಜ್ಯದಲ್ಲಿ ಅಭಿವೃದ್ಧಿಯಾಗಿಲ್ಲ ಎಂದರು.

ಪುತ್ತೂರಿನಲ್ಲಿ ಅಭಿವೃದ್ಧಿಯಾಗಿರುವುದು ರಾಜ್ಯ ಸರ್ಕಾರದ ಹಣದಿಂದ ಅಲ್ಲ. ಕೇಂದ್ರ ಸರ್ಕಾರದ ಅನುದಾನ ಸಿಕ್ಕಿದ ಪರಿಣಾಮ ಇಲ್ಲಿ ಕೆಲಸಗಳಾಗುತ್ತಿವೆ ಎಂದ ಅವರು ಕರ್ನಾಟಕಕ್ಕೆ ಸಿದ್ದರಾಮಯ್ಯ ಸಾಕಾಗಿದ್ದಾರೆ. ತನ್ನ ವಿಫಲತೆಯನ್ನು ಮುಚ್ಚಿಕೊಳ್ಳಲು ಸುಳ್ಳನ್ನೇ ಆಶ್ರಯಿಸಿದ್ದಾರೆ ಎಂದು ಅವರು ಹೇಳಿದರು.

ನಗರಸಭೆಯ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ನಗರಸಭೆಯ ಅಭಿವೃದ್ಧಿಗಾಗಿ 2 ಕೋಟಿ ಹಣವನ್ನು ಪುತ್ತೂರು ಶಾಸಕರು ಬೇರೆ ಕೆಲಸಕ್ಕೆ ಬಳಿಸಿಕೊಂಡು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸದಸ್ಯೆ ವಿದ್ಯಾಗೌರಿ ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಲೋಕೇಶ್ ಹೆಗ್ಡೆ, ಸತೀಶ್ ನ್ಯಾಕ್, ರಾಜೇಶ್ ಬನ್ನೂರು, ಯುವರಾಜ್ ಪೆರ್ಯತ್ತೋಡಿ, ಗೌರಿಬನ್ನೂರು, ಸುಂದರ ಪೂಜಾರಿ ಬಡಾವು ಮತ್ತಿತರರು ಪಾಲ್ಗೊಂಡಿದ್ದರು.

ಪುತ್ತೂರು ತಾಲೂಕಿನ ವಿವಿಧ ಗ್ರಾಪಂಗಳ ಮುಂಭಾಗದಲ್ಲಿ ರಾಜ್ಯ ಸರ್ಕಾರದ ಸ್ವಜನಪಕ್ಷಪಾತ, ಅಲ್ಪಸಂಖ್ಯಾತ ಸಮುದಾಯದ ಓಲೈಕೆ, ಜನವಿರೋಧಿನೀತಿ ವಿರುದ್ಧ ಏಕಕಾಲದ ಪ್ರತಿಭಟನೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article