
ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ನಶಾಮುಕ್ತ ಭಾರತ’ ಜಾಗೃತಿ ಕಾರ್ಯಕ್ರಮ
Friday, June 27, 2025
ಪುತ್ತೂರು: ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಕಳ್ಳ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನದ ಪ್ರತಿಜ್ನಾವಿಧಿ ಕಾರ್ಯಕ್ರಮವು ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ ಗುರುವಾರ ನಡೆಯಿತು.
‘ನಶಾ ಮುಕ್ತ ಭಾರತ’ ಅಭಿಯಾನದ ಅಂಗವಾಗಿ ವಿದ್ಯಾರ್ಥಿ ಸಮೂಹಕ್ಕೆ ಪ್ರತಿಜ್ಞಾವಿಧಿಯನ್ನು ಪ್ರಾಂಶುಪಾಲರಾದ ರೆ. ಡಾ. ಆಂಟೋನಿ ಪ್ರಕಾಶ್ ಮೊಂತೇರೋ ನೆರವೇರಿಸಿದರು.
ಪ್ರಾಂಶುಪಾಲರು ತಮ್ಮ ಸಂದೇಶದಲ್ಲಿ ‘ಜೀವನದ ನೆಮ್ಮದಿಯನ್ನು ಕದಡುವ ಅನೇಕ ವಿಷಯಗಳಿಗೆ ದಾಸರಾಗುವುದು ವಿಷಾದಕರ. ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗದೆ ಉತ್ತಮ ಜೀವನವನ್ನು ರೂಪಿಸಬೇಕು ಎಂದ ಅವರು ‘ನಶೆ ಒಂದು ವ್ಯಕ್ತಿಯ ಜೀವನವನ್ನೂ, ಕುಟುಂಬವನ್ನೂ ಹಾಗೂ ಸಮುದಾಯವನ್ನೂ ಕಂಗೆಡಿಸುವ ಅಪಾಯಕಾರಿಯಾದ ಮಾರ್ಗವಾಗಿದೆ. ವಿದ್ಯಾರ್ಥಿಗಳು ಬುದ್ಧಿವಂತಿಕೆ, ನೈತಿಕತೆ ಹಾಗೂ ಶಿಸ್ತಿನಿಂದ ಬದುಕು ಕಟ್ಟಿಕೊಳ್ಳಬೇಕೆಂಬುದು ನಶಾಮುಕ್ತ ಭಾರತದ ನಿಜವಾದ ಸಂಕಲ್ಪವಾಗಿದೆ’ ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಮೊಳೆಯಾರ್ ಉಪಸ್ಥಿತರಿದ್ದರು. ಸ್ನಾತಕೋತ್ತರ ವಿಭಾಗದ ಸಂಯೋಜಕರು ಮತ್ತು ಪ್ರಾದ್ಯಾಪಕರು ಪ್ರತಿಜ್ಞಾ ವಿಧಿಯಲ್ಲಿ ಭಾಗವಹಿಸಿದ್ದರು.
ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಹರ್ಷಿತ್ ಆರ್. ಸ್ವಾಗತಿಸಿ, ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕ ಪ್ರಶಾಂತ್ ರೈ ವಂದಿಸಿದರು. ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ ಶ್ರೀರಾಗ ಪ್ರಾರ್ಥಿಸಿದರು.