‘ಒತ್ತಾಸೆಗೆ ಬಲಿಯಾಗದೆ ಸಂವಿಧಾನದ ಪರವಾಗಿ ನಿಂತು ಸಹಬಾಳ್ವೆ ಉಳಿಸಬೇಕು’: ಪ್ರೊ. ಪುರುಷೋತ್ತಮ ಬಿಳಿಮಲೆ

‘ಒತ್ತಾಸೆಗೆ ಬಲಿಯಾಗದೆ ಸಂವಿಧಾನದ ಪರವಾಗಿ ನಿಂತು ಸಹಬಾಳ್ವೆ ಉಳಿಸಬೇಕು’: ಪ್ರೊ. ಪುರುಷೋತ್ತಮ ಬಿಳಿಮಲೆ


ಮಂಗಳೂರು: ಬಹುತ್ವ, ಬಹುಭಾಷೆ, ಬಹು ಸಂಸ್ಕೃತಿಯೊಂದಿಗೆ ಬೆಳದು ಬಂದಿರುವ ಭಾರತದಲ್ಲಿ ಏಕ ಸಂಸ್ಕೃತಿ, ಏಕ ಭಾಷೆಯ ಅಧಿಕಾರಶಾಹಿ ರಾಜಕಾರಣಿಗಳ ಒತ್ತಾಸೆಗೆ ಬಲಿಯಾಗದೆ, ಸಂವಿಧಾನದ ಪರವಾಗಿ ನಿಲ್ಲುವ ಮೂಲಕ ಸಹಬಾಳ್ವೆಯನ್ನು ಉಳಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.


ಮಂಗಳೂರು ಸಂತ ಮದರ್ ತೆರೇಸಾ ವಿಚಾರ ವೇದಿಕೆ ವತಿಯಂದ ಮದರ್ ತೆರೇಸಾರವರ 28ನೇ ಸಂಸ್ಮರಣ ದಿನದ ಅಂಗವಾಗಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. 


ಮದರ್ ತೆರೇಸಾರ ಮಾನವೀಯತೆ, ಸಾಮಾಜಿಕ ಬದ್ಧತೆ ನಮ್ಮ ಬದುಕಿಗೆ ಅಗತ್ಯವಾಗಿದ್ದು, ಧರ್ಮ, ಸಂಸ್ಕೃತಿ, ಭಾಷೆಗಳ ಹೆಸರಿನಲ್ಲಿ ಬಹುತ್ವದಿಂದ ದೂರಗೊಳಿಸುವ ರಾಜಕೀಯದ ಷಡ್ಯಂತ್ರವನ್ನು ನಾವು ಪ್ರಶ್ನಿಸಬೇಕಾಗಿದೆ. ಇದಕ್ಕಾಗಿ ಭಾರತದ ಇತಿಹಾಸದ ಬಹುತ್ವದ ಬಗ್ಗೆ ದಾಖಲೆಗಳನ್ನು ನೀಡುವ ಪುಸ್ತಕಗಳನ್ನು ಓದಬೇಕು. ಡಾ. ಅಂಬೇಡ್ಕರ್ ಅವರು ತಮ್ಮ ಅಪಾರವಾದ ಜ್ಞಾನ ಸಂಪಾದನೆಯ ಮೂಲಕ ಭಾರತೀಯ ಸಂಸ್ಕೃತಿಯ ವೈವಿಧ್ಯಕ್ಕೆ ಮೊದಲ ವ್ಯಾಕರಣವನ್ನು ಸಂವಿಧಾನದ ಮೂಲಕ ಬರೆದಿದ್ದಾರೆ. 

ಸಂವಿಧಾನದ ಸಹಬಾಳ್ವೆಗೆ ಬುನಾದಿ ನೀಡಿರುವ ಆರ್ಟಿಕಲ್ 25, 15 ಹಾಗೂ 51ಎ ಬಗ್ಗೆ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು ಎಂದವರು ಹೇಳಿದರು. 

ಮಾತೃಭಾಷೆಯ ಭಾಷೆಯ ಉದಾಹರಣೆ ನೀಡಿ ಮಾತನಾಡಿದ ಪ್ರೊ. ಬಿಳಿಮಲೆ, 2011ರ ಜನಗಣತಿ ಪ್ರಕಾರ ದೇಶದಲ್ಲಿ 19569 ಮಾತೃ ಭಾಷೆಗಳು ಗುರಿಸಲಾಗಿದೆ. ಇದರಲ್ಲಿ ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿರುವುದು 22 ಮಾತ್ರ. 2011ರಲ್ಲಿಯೇ ತುಳು ಸೇರಿದಂತೆ ಸಂವಿಧಾನದ ಪರಿಚ್ಛೇದಕ್ಕೆ ಸೇರಲು 99 ಭಾಷೆಗಳು ಕಾಯುತ್ತಿದ್ದರೆ, ಇದೀಗ 2027ರ ಜನಗಣತಿಯ ಮೇರೆಗೆ ಅನಧಿಕೃತ ಲೆಕ್ಕಾಚಾರದ ಮೂಲಕ 135 ಮಾತೃಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರಲು ಹೋರಾಟ ನಡೆಸುತ್ತಿವೆ ಎನ್ನಲಾಗಿದೆ. ಇಷ್ಟೊಂದು ಭಾಷೆಗಳ ನಡುವೆ ಹಿಂದಿ ಅಥವಾ ಸಂಸ್ಕೃತ ಮಾತ್ರ ಶ್ರೇಷ್ಟ ಭಾಷೆ ಆಗುವುದು ಹೇಗೆ? 2015ರಿಂದ ಕೇಂದ್ರ ಸರಕಾರ ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ 548 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. 2011ರ ಜನಗಣತಿ ಪ್ರಕಾರ ಸಂಸ್ಕೃತ ಭಾಷೆ ಮಾತನಾಡುವವರ ಸಂಖ್ಯೆ 24148 ಆದರೆ 6.40 ಲಕ್ಷಕ್ಕೂ ಅಧಿಕ ಕನ್ನಡ ಭಾಷೆ ಮಾತನಾಡುವವರಿದ್ದು, ಅವರಿಗಾಗಿ ಈ ಅವಧಿಯಲ್ಲಿ ಕೇಂದ್ರ ಖರ್ಚು ಮಾಡಿದ್ದು ೮ ಕೋಟಿ ರೂ. ಮಾತ್ರ. ಇಂತಹ ತಾರತಮ್ಯ ಯಾಕೆ ಎಂಬುದನ್ನು ಪ್ರಶ್ನಿಸುವ ಜವಾಬ್ಧಾರಿ ನಮ್ಮದಾಗಬೇಕು ಎಂದು ಅವರು ಅಂಕಿಅಂಶಗಳ ಮೂಲಕ ವಿವರಿಸಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಡಾ. ಕೆ. ಶರೀಫಾ ಅವರು, ಸೌರ್ಹಾತೆಯ ಕೇಂದ್ರವಾಗಿರುವ ಮಂಗಳೂರಿನಲ್ಲಿ ದ್ವೇಷದ ಬೀಜ ಬಿತ್ತಿ ಅದರ ಫಲ ಉಣ್ಣುತ್ತಿರುವ ನಾವು ಶಾಪಗ್ರಸ್ತ ಸಂತಾನಗಳು ಎಂದು ಮಾತು ಆರಂಭಿಸಿ, ತೆರೆಸಾ ಅವರ ಸಮಗ್ರ ಬದುಕು- ಜೀವನ ಸಾಧನೆಯ ಕುರಿತಾದ ಸಮಗ್ರ ಪುಸ್ತಕ ಕನ್ನಡದಲ್ಲಿ ಸಿಗುವಂತಾಗಬೇಕು ಎಂದರು. 

ಮಂಗಳೂರು ಧರ್ಮ ಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅ. ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದಲಿತ ಮುಖಂಡ ದೇವದಾಸ್, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಮಹಿಳಾ ನಾಯಕಿ ಸುಮತಿ ಎಸ್. ಹೆಗ್ಡೆ, ವೇದಿಕೆಯ ಗೌರವ ಸಲಹೆಗಾರ ರೂಪೇಶ್ ಮಾಡ್ತ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಕೆ. ಕರಿಯ, ಮುಖಂಡರಾದ ಕೃಷ್ಣಪ್ಪ ಕೊಂಚಾಡಿ, ಎರಿಕ್ಲೋಬೋ, ಡಾಲ್ಫಿ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು. 

ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಏಕತಾರಿ ಹಾಡುಗಾರ ನಾದಾ ಮಣಿನಾಲ್ಕೂರು ಅವರು ಸೌಹಾರ್ದ ಗೀತೆಗಳನ್ನು ಹಾಡಿದರು. ಅವಿಭಜಿತ ದ.ಕ ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಏಳಿಗಾಗಿ ಶ್ರಮಿಸಿದ, ಡಾ.ಬಾಬು ಜಗ ಜೀವನ್ ರಾಮ್ ಪ್ರಶಸ್ತಿ ಪುರಸ್ಕೃತ ಕರಿಯ ಕೆ. ಅವರನ್ನು ಸನ್ಮಾನಿಸಲಾಯಿತು. 

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಸಂತೋಷ್ ಡಿಸೋಜಾ ಸ್ವಾಗತಿಸಿದರು. ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. 


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article