‘ಅಪರಾಧ ಪ್ರಕರಣದಲ್ಲಿ ಭಾಗಿಯಾದವರ ಜತೆ ತಿರುಗಾಡಬೇಡಿ’: ಸುಧೀರ್ ರೆಡ್ಡಿ ಎಚ್ಚರಿಕೆ
ವೀಡಿಯೋ ಮೂಲಕ ಸಾರ್ವಜನಿಕ ಸಂದೇಶದ ನೀಡಿದ ಅವರು, ಮಂಗಳೂರು ನಗರ ವ್ಯಾಪ್ತಿಯಲ್ಲಿ ಈ ಮೊದಲು ಒಂದು ಹತ್ಯೆ ಹಾಗೂ ಆರು ಹತ್ಯೆ ಯತ್ನ ಪ್ರಕರಣಗಳ ಆರೋಪಿ ಇತ್ತೀಚೆಗೆ ಸುಲಿಗೆ ಕೃತ್ಯದಲ್ಲಿ ತೊಡಗಿದ್ದಾನೆಂಬ ದೂರು ಬಂದಿದೆ. ಪ್ರಶಾಂತ್ ಅಲಿಯಾಸ್ ಪಚ್ಚು ಎಂಬಾತ ಇತ್ತೀಚೆಗೆ ಕೊಲೆಯಾದ ಸುಹಾಸ್ ಶೆಟ್ಟಿಯ ಸಹಚರನಾಗಿದ್ದು, ಅ. 22ರಂದು ಹರ್ಷಿತ್ ಎಂಬಾತನ ಜತೆ ಬಜ್ಪೆಯ ಪಟಾಕಿ ಅಂಗಡಿಗೆ ತೆರಳಿ ಅಲ್ಲಿದ್ದವರಿಗೆ ಹೆದರಿಸಿ, ಹಣ ಕೊಡುವುದಿಲ್ಲ. ನೀವೆಲ್ಲಾ ಮರ್ಯಾದೆಯಿಂದ ಪಟಾಕಿ ಕೊಡಬೇಕು ಎಂದು ಬೆದರಿಕೆ ಒಡ್ಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಅಂಗಡಿಯವರು ಭಯಗೊಂಡಿದ್ದರು, ಅವರಿಗೆ ಧೈರ್ಯ ತುಂಬಿದ ಬಳಿಕ ನಿನ್ನೆ ರಾತ್ರಿ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಸುಲಿಗೆ ಪ್ರಕರಣದಲ್ಲಿ ಪ್ರಶಾಂತ್ ಮತ್ತು ಅಶ್ವಿತ್ ಎಂಬ ಆರೋಪಿಗಳಿದ್ದಾರೆ. ಅಶ್ವಿತ್ ಮೇಲೆ ಹಿಂದೆ ಯಾವುದೇ ಪ್ರಕರಣವಿರಲಿಲ್ಲ. ನಾವಂತೂ ಎಲ್ಲರಿಗೂ ಈ ಮೊದಲೇ ಹೇಳಿದ್ದೇವೆ. ಈ ಗಾಗಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಜತೆ ಯಾವುದೇ ಪ್ರಕರಣದಲ್ಲಿ ಇಲ್ಲದವರು ಸುಮ್ಮನೆ ತಿರುಗಬೇಡಿ ಎಂದು ಹೇಳಿದ್ದೇವೆ. ಇನ್ನು ಮುಂದೆಯೂ ಅದನ್ನೇ ಹೇಳುತ್ತಿದ್ದೇವೆ. ಮತ್ತೆಯೂ ನಾವು ಮಾಡುವುದೇ ಸರಿ ಎಂದಿದ್ದರೆ ನಾವು ನಮ್ಮ ಕೆಲಸ ಮಾಡುತ್ತೇವೆ’ ಎಂದು ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.