ತಿಮರೋಡಿಗಾಗಿ ಬಂಧನಕ್ಕೆ ಪೊಲೀಸ್ ಹುಡುಕಾಟ
ಮಂಗಳೂರು: ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ವಜಾಗೊಂಡ ಹಿನ್ನೆಲೆಯಲ್ಲಿ ಸೌಜನ್ಯ ಪರ ನ್ಯಾಯ ಹೋರಾಟಗಾರ ಮಹೇಶ್ ಶೆಟ್ಟಿ ಬಂಧನಕ್ಕಾಗಿ ಬೆಳ್ತಂಗಡಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ನೋಟಿಸ್ ನೀಡಿದ್ದರು. ಬಂಧನ ಭೀತಿ ಹಿನ್ನೆಲೆಯಲ್ಲಿ ತಿಮರೋಡಿ ನಿರೀಕ್ಷಣಾ ಜಾಮೀನು ಕೋರಿ ಮಂಗಳೂರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಕಳೆದ 20 ದಿನಗಳಿಂದ ತಿಮರೋಡಿ ನಾಪತ್ತೆಯಾಗಿದ್ದು, ಬೆಳ್ತಂಗಡಿ ಪೊಲೀಸರಿಂದ ಬೆಂಗಳೂರು ಸೇರಿ ಹಲವೆಡೆ ತೀವ್ರ ಶೋಧ ನಡೆಸುತ್ತಿದ್ದಾರೆ. ಸದ್ಯ ತಿಮರೋಡಿ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ.
ಮೊಹಾಂತಿ ಸಭೆ..
ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬುಧವಾರ ಆಗಮಿಸಿದ್ದ ತಂಡದ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಗುರುವಾರ ತಡರಾತ್ರಿ ವರೆಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ
ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಕೇಸ್ ಸಂಬಂಧಿಸಿ ಅಂತಿಮ ವರದಿ ಕುರಿತು ಸಭೆಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. .
ಸಿದ್ಧತೆ..
ಬಂಗ್ಲಗುಡ್ಡದಲ್ಲಿ ಭೂಮಿಯ ಮೇಲೆ ಏಳು ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಎಸ್ಐಟಿ ಸಿದ್ಧತೆ ನಡೆಸಿದೆ. ಈ ಪ್ರಕರಣವನ್ನು ಮೂಲ ಕೇಸಿಗೆ ಸೇರಿಸಿಕೊಳ್ಳಬೇಕಾ ಅಥವಾ ಹೊಸದಾಗಿ ಯುಡಿಆರ್ ಮಾಡಬೇಕಾ ಎಂಬ ಗೊಂದಲದಲ್ಲಿ ಎಸ್ಐಟಿ ಇದ್ದು, ಇದಕ್ಕಾಗಿ ಕಾನೂನು ಸಲಹೆಗಾರರ ಮೊರೆ ಹೋಗಿತ್ತು. ಮೂಲ ಪ್ರಕರಣದಲ್ಲಿಯೇ ಸೇರಿಸಿಕೊಂಡು ತನಿಖೆ ನಡೆಸಬಹುದು ಎಂಬ ಸಲಹೆ ಕಾನೂನು ಸಲಹೆಗಾರರಿಂದ ವ್ಯಕ್ತವಾಗಿತ್ತು. ಹಾಗಾಗಿ ಧರ್ಮಸ್ಥಳ ಪ್ರಕರಣದಲ್ಲಿಯೇ ಸೇರಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.