ವಿದ್ಯುತ್‌ಲೈನ್ ಅಡಿ ‘ಗಿಡ’ ಭವಿಷ್ಯಕ್ಕೆ ಮಾರಕ: ಉಮಾನಾಥ ಶೆಟ್ಟಿ ಪೆರ್ನೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ

ವಿದ್ಯುತ್‌ಲೈನ್ ಅಡಿ ‘ಗಿಡ’ ಭವಿಷ್ಯಕ್ಕೆ ಮಾರಕ: ಉಮಾನಾಥ ಶೆಟ್ಟಿ ಪೆರ್ನೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ

ಪುತ್ತೂರು: ವಿದ್ಯುತ್ ಲೈನ್ ಅಡಿಯಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟರೆ ಕೇವಲ ಪತ್ರ ಬರೆಯುವುದಲ್ಲ. ಗಿಡಗಳನ್ನು ನೆಡುವುದನ್ನು ನಿಲ್ಲಿಸಬೇಕು ಎಂದು ಗ್ಯಾರಂಟಿ ತಾಲೂಕು ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಅವರು ಮೆಸ್ಕಾಂ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.

ಮಂಗಳವಾರ ಪುತ್ತೂರು ತಾಪಂ ತರಬೇತಿ ಸಭಾಂಗಣದಲ್ಲಿ ನಡೆದ ಪಂಚಗ್ಯಾರಂಟಿ ಪ್ರಗತಿಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್ ತಂತಿ ಹಾದು ಹೋಗುವ ರಸ್ತೆ ಬದಿಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಸಾಲುಮರಗಳನ್ನು ನೆಡಲಾಗುತ್ತಿದೆ. ಇದರಿಂದ ಮುಂದೆ ಸಮಸ್ಯೆಗಳು ಸೃಷ್ಟಿಯಾಗಲಿವೆ. ಹಾಗಾಗಿ ಈಗಲೇ ಈ ಗಿಡಗಳನ್ನು ತೆರವು ಮಾಡಬೇಕು. ವಿದ್ಯುತ್ ತಂತಿಯ ಅಡಿಯಲ್ಲಿ ಗಿಡಗಳನ್ನು ನೆಡದಂತೆ ಮೆಸ್ಕಾಂ ಇಲಾಖೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು. 

ಪುತ್ತೂರು ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಶೇಕಡವಾರು ಇತರ ತಾಲೂಕುಗಳಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ಸರ್ಕಾರದ ಸೌಲಭ್ಯ ಬಡವರ್ಗಕ್ಕೆ ಸಿಗಬೇಕು. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಹೆಚ್ಚು ಶ್ರಮವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. 

ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡುಗಳು ರದ್ದಾಗುವ ಸಂದರ್ಭ ಸರಿಯಾದ ಪರಿಶೀಲನೆ ಮಾಡಬೇಕು. ಬಡವರಿಗೆ ಅನ್ಯಾಯ ಆಗಬಾರದು. ಅರ್ಹ ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಶ್ರೀಮಂತರಲ್ಲಿ ಇಂತಹ ಕಾರ್ಡುಗಳಿದ್ದರೆ ಅದನ್ನು ರದ್ದು ಮಾಡಿ. ಆದರೆ ನಿಜವಾಗಿಯೂ ಅರ್ಹತೆ ಇದ್ದರೆ ಅದನ್ನು ಪರಿಶೀಲನೆ ಮಾಡಿ ಕಾರ್ಡು ಉಳಿಸಿಕೊಳ್ಳುವ ಕೆಲಸವಾಗಬೇಕು ಎಂದು ಉಮಾನಾಥ ಶೆಟ್ಟಿ ಅವರು ತಿಳಿಸಿದರು. 

ಅಂಗಡಿಗಳಲ್ಲಿ ಪರಿಶೀಲನೆ

ಪಡಿತರ ಅಕ್ಕಿ ಮಾರಾಟ ಮಾಡುವ ಜಾಲವನ್ನು ಪತ್ತೆ ಹಚ್ಚಬೇಕು. ಈ ಅಕ್ಕಿಯನ್ನು ಪಡೆದುಕೊಳ್ಳುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಆಗ ಕನಿಷ್ಟ ಜಾಗೃತಿ ಉಂಟಾಗುತ್ತದೆ. ಅಕ್ಕಿ ಮಾರಾಟ ಮಾಡುವ ಹಾಗೂ ಅದನ್ನು ಖರೀದಿಸುವ ಅಂಗಡಿಗಳ ಬಗ್ಗೆ ಕಾನೂನುಕ್ರಮ ಕೈಗೊಂಡರೆ ಸರ್ಕಾರಿ ಸೌಲಭ್ಯ ಬಡವರ್ಗಕ್ಕೆ ಸಿಗುವಂತಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು. ಆಹಾರ ಇಲಾಖೆಯ ಶಿರಸ್ತೇದಾರ್ ಸರಸ್ವತಿ, ಸಿಡಿಪಿಒ ಹರೀಶ್ ಕೆ, ಕೆಎಸ್ಸಾರ್ಟಿಸಿ ಡಿಪೊ ಮೆನೇಜರ್ ಸುಬ್ರಹ್ಮಣ್ಯ ಪ್ರಕಾಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯಲಕ್ಷ್ಮಿ, ಮೆಸ್ಕಾಂ ಇಲಾಖೆಯ ಶಿವಶಂಕರ್, ಸದಸ್ಯರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸೇಸಪ್ಪ ನೆಕ್ಕಿಲು, ವಿಜಯಲಕ್ಷ್ಮಿ, ಮಹಮ್ಮದ್ ಫಾರೂಕ್, ಬಬಿತಾ, ತಾರಾನಾಥ ನುಳಿಯಾಲು, ಹುಸೈನ್, ವಿಶ್ವಜಿತ್ ಅಮ್ಮುಂಜೆ, ಶೀನಪ್ಪ ಪೂಜಾರಿ ಹಾಗೂ ವಿಷಯ ನಿರ್ವಾಹಕಿ ವಂದನಾ ಪಿ ಮತ್ತಿರರು ಭಾಗಿಯಾಗಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article