ಎಸ್.ಡಿ.ಎಂ. ಸಂಸ್ಥೆಗಳ ಸಾಧನೆಗಳ ಅನಾವರಣ: 'Institutions of Legacy' ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಹೆಗ್ಗಡೆಯವರಿಂದ ಲೋಕಾರ್ಪಣೆ
ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ಹೆಗ್ಗಡೆ ಅವರು, ರತ್ನವರ್ಮ ಹೆಗ್ಗಡೆಯವರ ದೂರದೃಷ್ಟಿಯ ನಾಯಕತ್ವದಲ್ಲಿ ಆರಂಭವಾದ ಎಸ್ಡಿಎಂ ಶಿಕ್ಷಣ ಸಂಸ್ಥೆಗಳು ಕಳೆದ ಐದು ದಶಕಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗಳನ್ನು ದಾಖಲಿಸಿದ್ದು, ರಾಜ್ಯದ ಮಾದರಿ ಶಿಕ್ಷಣ ಸಂಸ್ಥೆಗಳಾಗಿ ಗುರುತಿಸಿಕೊಂಡಿವೆ ಎಂದ ಅವರು ಸಂಸ್ಥೆಗಳ ಬೆಳವಣಿಗೆಯಲ್ಲಿ ಶ್ರಮಿಸಿದ ಸಿಬ್ಬಂದಿ, ಶಿಕ್ಷಕರು ಹಾಗೂ ತಂಡದ ಸದಸ್ಯರ ಸೇವೆಯನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಹೇಮಾವತಿ ವಿ. ಹೆಗ್ಗಡೆ ಮಾತನಾಡಿ, ಪುಸ್ತಕವು ಅತ್ಯಂತ ಆಕರ್ಷಕವಾಗಿ ಮೂಡಿಬಂದಿದ್ದು, ಅದರ ಸಂಪಾದಕೀಯ ಹಾಗೂ ನಿರ್ಮಾಣ ತಂಡದ ಪರಿಶ್ರಮ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಮಾತನಾಡಿ, ಕಾಫಿ ಟೇಬಲ್ ಪುಸ್ತಕವು ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಕಾರ್ಯಕ್ಷೇತ್ರಗಳನ್ನು ಸಂಕ್ಷಿಪ್ತವಾಗಿ ಹಾಗೂ ಮನೋಜ್ಞ ಛಾಯಾಚಿತ್ರಗಳ ಮೂಲಕ ಪರಿಚಯಿಸುತ್ತದೆ. ‘ಚತುರ್ದಾನ’ ಪರಂಪರೆಯಿಂದ ಆರಂಭಗೊಂಡು ‘ವಿದ್ಯಾದಾನ’ದ ಮಹತ್ವವನ್ನು ಸಾರುವ ಶಿಕ್ಷಣ ಸಂಸ್ಥೆಗಳ ಸಮಗ್ರ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ ಎಂದು ಹೇಳಿದರು.
`Institutions of Legacy ಪುಸ್ತಕದಲ್ಲಿ ಧರ್ಮಸ್ಥಳದ ಅಭಿವೃದ್ಧಿ, ಸಾಮಾಜಿಕ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಶಿಕ್ಷಣ ಕ್ಷೇತ್ರದ ಸಾಧನೆಗಳ ಸಮಗ್ರ ಚಿತ್ರಣವನ್ನು ದಾಖಲಿಸಲಾಗಿದೆ. ಇದರೊಂದಿಗೆ ಎಸ್.ಕೆ.ಡಿ.ಆರ್.ಡಿ.ಪಿ., ಸಿರಿ, ರುಡ್ಸೆಟ್, ಎಸ್.ಡಿ.ಎಮ್. ಧರ್ಮೋತ್ಥಾನ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳ ಕಾರ್ಯಚಟುವಟಿಕೆಗಳು, ಸಾಧನೆಗಳು ಮತ್ತು ಇತಿಹಾಸವನ್ನು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪ್ರಾಂಶುಪಾಲ ಡಾ. ವಿಶ್ವನಾಥ್, ಡಾ. ಅಶೋಕ್ ಕುಮಾರ್, ಧನ್ಯಕುಮಾರ್, ಪ್ರಶಾಂತ್ ಬಿ.ಆರ್., ಅರವಿಂದ್ ಹಾಗೂ Academic Insights ತಂಡದ ಪ್ರತಿನಿಧಿಗಳಾದ ಮೊನಿಶಾ ರಾಕೇಶ್, ಮೊಯಿನ್, ಅಗಸ್ಟಿನ್ ಎಸ್. ನಿಯೋಲ್ ಮತ್ತು ಮಧು ಉಪಸ್ಥಿತರಿದ್ದರು.