ರಸ್ತೆ ಬದಿ ತ್ಯಾಜ್ಯ ಎಸೆದಾತನಿಗೆ 4 ಸಾ.ರೂ. ದಂಡ
ಬಂಟ್ವಾಳ: ತಾಲೂಕಿನ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನ-ಬೊಲ್ಪಾದೆ ರಸ್ತೆಯ ಕಳಂಜಿಮಲೆ ರಕ್ಷಿತಾರಣ್ಯ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಸ್ವಚ್ಛತಾ ನೀತಿ ಉಲ್ಲಂಘಿಸಿದ ವ್ಯಕ್ತಿಯನ್ನು ಗ್ರಾ.ಪಂ.ಅಧಿಕಾರಿಗಳು ಪತ್ತೆ ಹಚ್ಚಿ 4 ಸಾ.ರೂ. ದಂಡ ವಿಧಿಸಿದ್ದಾರೆ.
ತ್ಯಾಜ್ಯ ಎಸೆದಿರುವ ಅಬ್ದುಲ್ ರಹಿಮಾನ್ ಬಂಡಿತ್ತಡ್ಕ ಎಂಬವರನ್ನು ಗ್ರಾಮ ಪಂಚಾಯತ್ ಕಛೇರಿಗೆ ಕರೆಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಅವರು ಈ ದಂಡ ವಿಧಿಸಿ ಮತ್ತೆ ಪುನರಾವರ್ತನೆಗೈದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಸಿದ್ದಾರೆ.
ಕಠಿಣ ಕಾನೂನು ಕ್ರಮದ ಎಚ್ಚರಿಕೆ:
ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾರಾದರೂ ನಿಯಮ ಉಲ್ಲಂಘಿಸಿ ತ್ಯಾಜ್ಯ ಎಸೆಯುವುದು ಕಂಡುಬಂದಲ್ಲಿ, ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗ್ರಾಮದ ಆರೋಗ್ಯ ಮತ್ತು ಪರಿಸರ ರಕ್ಷಣೆಯಲ್ಲಿ ಸಾರ್ವಜನಿಕರ ಸಹಕರಿಸುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಎಚ್ಚರಿಸಿದ್ದಾರೆ.