ಹವಾಮಾನ ಇಲಾಖೆ ಅವೈಜ್ಞಾನಿಕ ವರದಿ-ಶೈಕ್ಷಣಿಕ ವಲಯಕ್ಕೆ ತೊಂದರೆ: ಎಸ್.ಎಲ್. ಭೋಜೆಗೌಡ ಕಳವಳ

ಹವಾಮಾನ ಇಲಾಖೆ ಅವೈಜ್ಞಾನಿಕ ವರದಿ-ಶೈಕ್ಷಣಿಕ ವಲಯಕ್ಕೆ ತೊಂದರೆ: ಎಸ್.ಎಲ್. ಭೋಜೆಗೌಡ ಕಳವಳ

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದು, ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಲು ಬೇರೆ ಬೇರೆ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ಇಲಾಖೆಯು ವಾಸ್ತವಿಕ ಸ್ಥಿತಿಯನ್ನು ಅರಿಯದೆ ನೀಡುತ್ತಿರುವ ಅವೈಜ್ಞಾನಿಕ ವರದಿಗಳಿಂದ ಶೈಕ್ಷಣಿಕ ವಲಯಕ್ಕೆ ತೊಂದರೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಕಳವಳ ವ್ಯಕ್ತಪಡಿಸಿದ್ದಾರೆ. 

ಮಳೆಯೇ ಇಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಸತತವಾಗಿ ರಜೆಗಳನ್ನು ಘೋಷಿಸುತ್ತಿರುವುದು ಮತ್ತು ವಸತಿ ಶಾಲೆಗಳಿಗೂ ಅನ್ವಯವಾಗುವಂತೆ ರಜೆ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಸರಕಾರದ ಈ ಮುಂಜಾಗ್ರತಾ ನಿರ್ಧಾರವನ್ನು ಒಟ್ಟಾರೆಯಾಗಿ ಸ್ವಾಗತಿಸಿದರೂ ಮಳೆಯಿಲ್ಲದೆ ಬಿಸಿಲು ಅಥವಾ ಸಾಮಾನ್ಯ ವಾತಾವರಣವಿರುವ ಸಂದರ್ಭದಲ್ಲಿ ಅನಗತ್ಯವಾಗಿ ರಜೆ ನೀಡುವುದರಿಂದ ವಿದ್ಯಾರ್ಥಿಗಳ ಪಠ್ಯಕ್ರಮ ಮತ್ತು ಶೈಕ್ಷಣಿಕ ಪ್ರಗತಿಗೆ ಭಾರೀ ನಷ್ಟವಾಗುತ್ತದೆ ಎಂದವರು ಆಕ್ಷೇಪಿಸಿದ್ದಾರೆ. 

ಹವಾಮಾನ ಇಲಾಖೆಯು ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸದೆ ಅವೈಜ್ಞಾನಿಕವಾದ ವರದಿಗಳನ್ನು ನೀಡುತ್ತಿದ್ದು, ಮಳೆಯೇ ಇಲ್ಲದಿದ್ದರೂ ರಜೆ ಘೋಷಿಸುವಂತಾಗಿದೆ. ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ದೊಡ್ಡ ಮಟ್ಟದಲ್ಲಿ ಅಡ್ಡಿಯುಂಟು ಮಾಡುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸರಕಾರ ಮತ್ತು ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರಗಳು ಸರಿಯಿರಬಹುದು, ಆದರೆ ಎಲ್ಲೆಡೆ ಮಳೆ ಇಲ್ಲದಿರುವಾಗ ವಸತಿ ಶಾಲೆಗಳಿಗೂ ರಜೆ ನೀಡುವುದು ಎಷ್ಟು ಸರಿ? ಇದು ಗಂಭೀರವಾಗಿ ಯೋಚಿಸಬೇಕಾದ ವಿಷಯ. 

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ವಿಭಿನ್ನವಾದ ಹವಾಮಾನ ಪರಿಸ್ಥಿತಿ ಇರುತ್ತದೆ. ಒಂದು ತಾಲೂಕಿನಲ್ಲಿ ಮಳೆಯಿದ್ದರೆ, ಮತ್ತೊಂದು ತಾಲೂಕಿನಲ್ಲಿ ಬಿಸಿಲು ಇರಬಹುದು. ಆದ್ದರಿಂದ ಜಿಲ್ಲಾಡಳಿತ ಹಾಗೂ ಸರಕಾರವು ಕೇವಲ ಒಟ್ಟಾರೆ ಮುನ್ಸೂಚನೆಯನ್ನು ಆಧರಿಸದೆ, ಆಯಾ ತಾಲೂಕುಗಳ ಸ್ಥಳೀಯ ಹವಾಮಾನ ಪರಿಸ್ಥಿತಿಯನ್ನು ಗಮನಿಸಿ, ವಲಯವಾರು ನಿರ್ಧಾರಗಳನ್ನು ಕೈಗೊಳ್ಳಬೇಕು ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಸರಕಾರಿ ಇಲಾಖೆಗಳು ಗಮನಹರಿಸಿ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಶೈಕ್ಷಣಿಕ ಹಿತಾಸಕ್ತಿಯನ್ನು ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article